ಉಗ್ರ ದಾಳಿಗೆ ಕುಮ್ಮಕ್ಕು ನೀಡಿದ ಪಾಕ್ ಜೊತೆಗಿನ ಸಂಬಂಧಕ್ಕೆ ಎಳ್ಳುನೀರು ಬಿಟ್ಟ ಭಾರತ
ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಪೈಶಾಚಿಕ ದಾಳಿಯಿಂದ ಇಡೀ ದೇಶ ಕನಲಿ ಹೋಗಿದ್ದು, ದೇಶದಾದ್ಯಂತ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. ಈ ಬೆನ್ನಲ್ಲೇ ಸಚಿವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸತತ 3 ಗಂಟೆಗಳ ಕಾಲ ಕೇಂದ್ರ ಸಂಪುಟ ಸಮಿತಿ ಸಭೆ ನಡೆದಿದ್ದು, ಪಾಕ್ ಸಂಬಂಧಕ್ಕೆ ಎಳ್ಳುನೀರು ಬಿಡಲು ತೀರ್ಮಾನಿಸಲಾಗಿದೆ. ದಾಳಿ ನಡೆಸಿದ ಟಿಆರ್ಎಫ್ ಪಾಕಿಸ್ಥಾನ ಮೂಲದ ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೋಯ್ಬಾ (ಎಲ್ಇಟಿ)ದ ಸೋದರ ಸಂಘಟನೆಯಾಗಿದೆ. ಹೀಗಾಗಿ ಭಾರತದ ಮೇಲಿನ ದಾಳಿಗೆ ಪಾಕಿಸ್ಥಾನ ತೆರೆಮರೆಯಲ್ಲಿ ಕುಮ್ಮಕ್ಕು ನೀಡಿರುವುದು ಖಚಿತವಾಗಿರುವುದರಿಂದ ಈ ಬಾರಿ ಭಾರತ ರಾಜತಾಂತ್ರಿಕ ಮಾರ್ಗದ ಮೂಲಕ ಪಾಕಿಸ್ಥಾನಕ್ಕೆ ತಿರುಗೇಟು ನೀಡಲು ಮುಂದಾಗಿದೆ.
ಈ ಹಿಂದೆ 2019ರಲ್ಲಿ ಪುಲ್ವಾಮಾ ದಾಳಿ ನಡೆದಾಗ ಭಾರತ ಸರ್ಜಿಕಲ್ ದಾಳಿಯ ಮೂಲಕ ಪಾಕಿಸ್ಥಾನದ ವಿರುದ್ಧ ಸೇಡು ತೀರಿಸಿಕೊಂಡಿತ್ತು. ಈ ಬಾರಿ 5 ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಮೋದಿ ಸರ್ಕಾರ ರಾಜತಾಂತ್ರಿಕವಾಗಿ ಪಾಕಿಸ್ಥಾನಕ್ಕೆ ಭಾರತ ತಿರುಗೇಟು ನೀಡಿದೆ. ಅದರಲ್ಲಿ ಬಹಳ ಮುಖ್ಯವಾದುದು ಸಿಂಧೂ ಜಲ ಒಪ್ಪಂದವನ್ನು ರದ್ದುಗೊಳಿಸಿದ್ದು. ಪಾಕಿಸ್ಥಾನದೊಂದಿಗಿನ ದಶಕಗಳಷ್ಟು ಹಳೆಯದಾದ ಸಿಂಧೂ ನದಿ ನೀರು ಒಪ್ಪಂದವನ್ನು ಅನಿರ್ದಿಷ್ಟವಾಗಿ ಸ್ಥಗಿತಗೊಳಿಸುವುದು ಮೋದಿ ಸರ್ಕಾರದ ಅತ್ಯಂತ ದಿಟ್ಟ ಕ್ರಮವಾಗಿದೆ. ಸಿಂಧೂ ನದಿ ಮತ್ತು ಅದರ ಉಪನದಿಗಳಾದ ಝೀಲಂ, ಚೆನಾಬ್, ರಾವಿ, ಬಿಯಾಸ್ ಮತ್ತು ಸಟ್ಲೆಜ್ಗಳಿಂದ ಪಾಕಿಸ್ಥಾನಕ್ಕೆ ನೀರು ಸರಬರಾಜು ಸ್ಥಗಿತಗೊಳ್ಳುತ್ತದೆ. ಈ ನದಿಗಳು ಪಾಕಿಸ್ಥಾನಕ್ಕೆ ನೀರು ಸರಬರಾಜು ಮಾಡುತ್ತಿದ್ದು, ಭಾರತ ಸರ್ಕಾರದ ಈ ನಿರ್ಧಾರದಿಂದ ಪಾಕಿಸ್ಥಾನದ ಲಕ್ಷಾಂತರ ಜನರ ಮೇಲೆ ಪರಿಣಾಮ ವಾಗಲಿದೆ.
ಏನಿದು ಸಿಂಧೂ ನದಿ ಒಪ್ಪಂದ?
ಸಿಂಧೂ ನದಿ ಮತ್ತು ಅದರ ಉಪನದಿಗಳಲ್ಲಿ ಲಭ್ಯವಿರುವ ನೀರನ್ನು ಬಳಸಲು ಸಿಂಧೂ ಜಲ ಒಪ್ಪಂದವು (ಐಡಬ್ಲ್ಯೂಟಿ) ಭಾರತ ಮತ್ತು ಪಾಕಿಸ್ಥಾನದ ನಡುವಿನ ನೀರಿನ ವಿತರಣಾ ವ್ಯವಸ್ಥೆಯಾಗಿದೆ. 1960ರಲ್ಲಿ ಕರಾಚಿಯಲ್ಲಿ ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಲ್ಲಿ ಆಗಿನ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಪಾಕಿಸ್ಥಾನಿ ಅಧ್ಯಕ್ಷ ಅಯೂಬ್ ಖಾನ್ ಈ ಒಪ್ಪಂದಕ್ಕೆ ಸಹಿ ಹಾಕಿದ್ದರು. ಸಿಂಧೂ ನದಿ ನೀರು ಒಪ್ಪಂದಕ್ಕೆ ಸೆಪ್ಟೆಂಬರ್ 19, 1960ರಂದು ಸಹಿ ಹಾಕಲಾಯಿತು.
ಈ ಒಪ್ಪಂದದಂತೆ ಪೂರ್ವದಿಂದ ಭಾರತದೊಳಕ್ಕೆ ಹರಿಯುವ ಮೂರು ನದಿಗಳಾದ ಬಿಯಾಸ್, ರಾವಿ ಮತ್ತು ಸಟ್ಲೆಜ್, ಪಾಕಿಸ್ಥಾನದೊಳಕ್ಕೆ ಹರಿಯುವ 3 ಪಶ್ಚಿಮದ ನದಿಗಳಾದ ಸಿಂಧು, ಚೆನಾಬ್ ಮತ್ತು ಝೀಲಂ ನದಿಗಳ ಮೇಲೆ ನಿಯಂತ್ರಣವನ್ನು ಸಾಧಿಸುವುದಾಗಿದೆ. ಸಿಂಧೂ ಜಲ ಒಪ್ಪಂದವು ಸಿಂಧು ನದಿಯ ನೀರಿನ ಗರಿಷ್ಠ ಬಳಕೆಯಲ್ಲಿ ಎರಡೂ ದೇಶಗಳಿಗೆ ಹಕ್ಕಿದೆ. ಭಾರತವು ಪಶ್ಚಿಮ ನದಿ ನೀರನ್ನು ಸೀಮಿತ ನೀರಾವರಿ ಬಳಕೆಗೆ, ವಿದ್ಯುತ್ ಉತ್ಪಾದನೆ, ನ್ಯಾವಿಗೇಷನ್, ಮೀನುಗಾರಿಕೆಗೆ ಬಳಸಲು ಅನುಮತಿಸುತ್ತದೆ. ಈ ಒಪ್ಪಂದದ ಪ್ರಕಾರ ಶಾಶ್ವತ ಸಿಂಧೂ ಆಯೋಗವನ್ನು ಸ್ಥಾಪಿಸಲಾಗಿದೆ. ಉಭಯ ದೇಶದಿಂದ ಆಯುಕ್ತರನ್ನು ಹೊಂದಿರುವ ಈ ಆಯೋಗವು ಪರಸ್ಪರ ಸಹಕಾರ ಕಾರ್ಯವಿಧಾನವನ್ನು ಮೇಲ್ವಿಚಾರಣೆ ಮಾಡುತ್ತದೆ. ಸಮಸ್ಯೆಗಳನ್ನು ಚರ್ಚಿಸಲು ಎರಡು ದೇಶಗಳು ವಾರ್ಷಿಕವಾಗಿ ಸಭೆ ನಡೆಸುತ್ತವೆ.
ಸಿಂಧೂ ಜಲ ಒಪ್ಪಂದ ಪಶ್ಚಿಮ ನದಿಗಳನ್ನು (ಸಿಂಧೂ, ಝೀಲಂ, ಚೆನಾಬ್) ಪಾಕಿಸ್ಥಾನಕ್ಕೆ ಮತ್ತು ಪೂರ್ವ ನದಿಗಳನ್ನು (ರಾವಿ, ಬಿಯಾಸ್, ಸಟ್ಲೆಜ್) ಭಾರತಕ್ಕೆ ಹಂಚಿಕೆ ಮಾಡುವ ಮೂಲಕ ಭಾರತ ಮತ್ತು ಪಾಕಿಸ್ಥಾನದ ನಡುವೆ ಸುಸ್ಥಿರ ನೀರಿನ ವಿಭಜನೆಯನ್ನು ಮಾಡಿತ್ತು.
6 ದಶಕಗಳಿಗೂ ಹೆಚ್ಚು ಕಾಲ ರಾಜಕೀಯ ಮತ್ತು ಮಿಲಿಟರಿ ಉದ್ವಿಗ್ನತೆ ಹೆಚ್ಚಾದಾಗಲೂ ಭಾರತ ಮತ್ತು ಪಾಕಿಸ್ಥಾನದ ನಡುವೆ ಶಾಂತಿಯುತ ನೀರು ಹಂಚಿಕೆಗೆ ಅನುಕೂಲವಾಗುವಂತೆ ಸಿಂಧೂ ಜಲ ಒಪ್ಪಂದ ನಿರ್ಣಾಯಕ ಪಾತ್ರ ವಹಿಸಿತ್ತು. ಇದೀಗ ಈ ಒಪ್ಪಂದ ರದ್ದುಗೊಂಡಿದೆ. ಇನ್ನೂ ಮುಖ್ಯವಾದ ವಿಷಯವೆಂದರೆ ಈ ಸಿಂಧೂ ಜಲ ಒಪ್ಪಂದ ಏಷ್ಯಾದ 2 ರಾಷ್ಟ್ರಗಳ ನಡುವಿನ ಏಕೈಕ ಗಡಿಯಾಚೆಗಿನ ನೀರು ಹಂಚಿಕೆ ಒಪ್ಪಂದವಾಗಿದೆ. ಈ ಒಪ್ಪಂದವು ಕೆಳ ಭಾಗದಲ್ಲಿರುವ ದೇಶವಾದ ಪಾಕಿಸ್ಥಾನಕ್ಕೆ ಅನುಕೂಲಕರವಾಗಿದೆ. ಇದು ಸಿಂಧೂ ನದಿಯ ಸರಿಸುಮಾರು ಶೇ.80 ನೀರು ನೀಡುತ್ತದೆ.
2001ರ ಭಾರತೀಯ ಸಂಸತ್ತಿನ ದಾಳಿ ಮತ್ತು 2019ರ ಪುಲ್ವಾಮಾ ದಾಳಿ ಸೇರಿದಂತೆ ಹಲವಾರು ಭಯೋತ್ಪಾದಕ ದಾಳಿಗಳು ನಡೆದಾಗಲೂ ಭಾರತ ಸಿಂಧೂ ಜಲ ಒಪ್ಪಂದದಿಂದ ಹಿಂದೆ ಸರಿದಿರಲಿಲ್ಲ. ಆದರೆ, ಈ ಬಾರಿ ಮೋದಿ ಸರ್ಕಾರ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಮೂಲಕ ಪಾಕಿಸ್ಥಾನಕ್ಕೆ ತಿರುಗೇಟು ನೀಡಿದೆ.
ಇತರ ರಾಜತಾಂತ್ರಿಕ ಕ್ರಮಗಳು
ಸಿಂಧು ನದಿ ಜಲ ಒಪ್ಪಂದ ರದ್ದು ಮಾಡುವುದರ ಜೊತೆಗೆ ಅಟ್ಟಾರಿ-ವಾಘಾ ಗಡಿಯ ಚೆಕ್ ಪೋಸ್ಟ್ ಅನ್ನು ತಕ್ಷಣ ಮುಚ್ಚಲಾಗುವುದು, ಭಾರತಕ್ಕೆ ಪಾಕಿಸ್ಥಾನಿ ಪ್ರಜೆಗಳಿಗೆ ಪ್ರವೇಶವಿಲ್ಲ, ಪಾಕಿಸ್ಥಾನಿಯರಿಗೆ ವೀಸಾ ನೀಡುವುದಿಲ್ಲ. ಈಗಾಗಲೇ ಭಾರತಕ್ಕೆ ಬಂದಿರುವ ಯಾವುದೇ ಪಾಕಿಸ್ಥಾನಿ ಪ್ರಜೆಗೆ ಭಾರತವನ್ನು ತೊರೆಯಲು 48 ಗಂಟೆಗಳ ಕಾಲಾವಕಾಶ ನೀಡಲಾಗಿದೆ. ಪಾಕಿಸ್ಥಾನ ಹೈಕಮಿಷನ್ ಬಲವನ್ನು 30ಕ್ಕೆ ಇಳಿಸಲಾಗಿದೆ. ನವದೆಹಲಿಯಲ್ಲಿರುವ ಪಾಕಿಸ್ಥಾನಿ ಹೈಕಮಿಷನ್ನಲ್ಲಿರುವ ರಕ್ಷಣಾ, ಮಿಲಿಟರಿ, ನೌಕಾ ಮತ್ತು ವಾಯು ಸಲಹೆಗಾರರನ್ನು ಪರ್ಸನಾ ನಾನ್ ಗ್ರಾಟಾ ಎಂದು ಘೋಷಿಸಲಾಗಿದೆ. ಅವರು ಭಾರತವನ್ನು ಬಿಡಲು ಒಂದು ವಾರ ಸಮಯ ನೀಡಲಾಗಿದೆ. ಭಾರತವು ಇಸ್ಲಾಮಾಬಾದ್ನಲ್ಲಿರುವ ಭಾರತೀಯ ಹೈಕಮಿಷನ್ನ ರಕ್ಷಣಾ, ನೌಕಾಪಡೆ ಮತ್ತು ವಾಯು ಸಲಹೆಗಾರರನ್ನು ವಾಪಾಸ್ ಕರೆಸಿಕೊಳ್ಳಲಿದೆ. ಆಯಾ ಹೈಕಮಿಷನ್ಗಳಲ್ಲಿನ ಈ ಹುದ್ದೆಗಳನ್ನು ರದ್ದುಗೊಳಿಸಲಾಗಿದೆ.