ನ್ಯೂಸ್‌ ಪುತ್ತೂರು ಆಶಯ

ನಲ್ಮೆಯ ಓದುಗರೇ,

ಮುತ್ತಿನಂಥ ಊರು ಪುತ್ತೂರಿಗೆ ಸಶಕ್ತ, ಜನಾನುರಾಗಿ, ನಿಷ್ಪಕ್ಷಪಾತ, ಜನಮನದ ಪ್ರತಿಧ್ವನಿಯಂತೆ ಕೆಲಸ ಮಾಡುವ ಸುದ್ದಿಜಾಲದ ಅಗತ್ಯವನ್ನು ಮನಗಂಡು www.newsputtur.com ವನ್ನು ವಿನ್ಯಾಸಗೊಳಿಸಿದ್ದೇವೆ. ಪುತ್ತೂರು ತಾಲೂಕಿಗೆ ಹಾಗೂ ತಾಲೂಕಿಗೆ ಸಮೀಪದಲ್ಲಿರುವ ಪ್ರದೇಶಗಳ ಸುದ್ದಿಗಳನ್ನು ಸಮಗ್ರವಾಗಿ ಹಾಗೂ ಕ್ಷಿಪ್ರವಾಗಿ ತಲುಪಿಸುವ ಕಾರ್ಯವನ್ನು ನ್ಯೂಸ್ ಪುತ್ತೂರು ಮಾಡಲಿದೆ. ಇವುಗಳ ಜೊತೆಗೆ ದೇಶ – ವಿದೇಶದ ಮಹತ್ವದ ವಿದ್ಯಮಾನಗಳನ್ನು ಹಂಚಿಕೊಳ್ಳಲಿದೆ. ಇದರೊಂದಿಗೆ ಪುತ್ತೂರಿನ ಸಾಂಸ್ಕೃತಿಕ ಭವ್ಯತೆ, ಪ್ರತಿಭೆಗಳ ಪರಿಚಯವನ್ನು ಓದುಗರ ಅಭಿರುಚಿಗೆ ತಕ್ಕಂತೆ ಮುಂದಿಡುವ ಕಾಯಕವನ್ನು ಮಾಡಲಿದೆ.

ಜನಮನದ ಪ್ರತಿಧ್ವನಿ ಎಂಬ ಧ್ಯೇಯವಾಕ್ಯದೊಂದಿಗೆ ನ್ಯೂಸ್ ಪುತ್ತೂರು, ತಾಲೂಕಿನ ಪ್ರತಿ ಗ್ರಾಮಗಳ ಸಮಗ್ರ ಸುದ್ದಿಗಳನ್ನು ವಿಶ್ವಾಸಾರ್ಹತೆ, ವಸ್ತುನಿಷ್ಠತೆ, ನಿಖರತೆಯೊಂದಿಗೆ ಪಸರಿಸಲಿದ್ದೇವೆ. ಹೊರ ಊರುಗಳಲ್ಲಿ ನೆಲೆಸಿರುವ ಪುತ್ತೂರಿನ ಬಂಧುಗಳಿಗೂ ತಮ್ಮೂರಿನ ವಿದ್ಯಮಾನಗಳ ಮಾಹಿತಿಯನ್ನು ನೀಡುತ್ತ, ಊರಿನ ನೆನಪನ್ನು ಸದಾ ಹಸಿರಾಗಿಡಲು ಪ್ರಯತ್ನಿಸುತ್ತೇವೆ. ನ್ಯೂಸ್ ಪುತ್ತೂರು ತಾಣ, ಜನ-ಮನದ ಪ್ರತಿಧ್ವನಿಯಾಗುವ ಜೊತೆಗೆ ಜನರನ್ನು ಪರಸ್ಪರ ಬೆಸೆಯುವ ವೈವಿಧ್ಯಮಯ ಸುದ್ದಿ ಜಾಲವಾಗಿಯೂ ಮೂಡಿಬರಲಿದೆ. ಮಾತ್ರವಲ್ಲದೇ ತಾಲೂಕಿಗೆ ಸಂಬಂಧಿಸಿದಂತೆ ಅಗತ್ಯ, ಉಪಯುಕ್ತ ಮಾಹಿತಿ, ವಿವಿಧ ಇಲಾಖೆ, ಜನಪ್ರತಿನಿಧಿಗಳ ಸಂಪರ್ಕ ಸಂಖ್ಯೆಯನ್ನು ವೆಬ್‍ತಾಣದಲ್ಲಿ ಅಳವಡಿಸುವ ಮೂಲಕ ಎಲ್ಲರನ್ನೂ ಬೆಸೆಯುವ ಕೊಂಡಿಯಾಗಿ ಕಾರ್ಯನಿರ್ವಹಿಸಲಿದೆ.

ಮೊಬೈಲ್‍ನಲ್ಲೇ ಸುದ್ದಿಲೋಕ


ಜಾಗತಿಕ ಗ್ರಾಮ ಪರಿಕಲ್ಪನೆಯೂ ಈಗ ಹಳೆಯದಾಗಿದೆ. ಇಂದೇನಿದ್ದರೂ ಬೆರಳ ತುದಿಯಲ್ಲೇ ಜಗತ್ತು. ಇದಕ್ಕೆ ಕಾರಣ, ಡಿಜಿಟಲ್ ಲೋಕ. ಜನರನ್ನು ಪರಸ್ಪರ ಬೆಸೆಯುವಂತೆ ಮಾಡುವಲ್ಲಿ ಡಿಜಿಟಲ್ ಲೋಕದ ಪಾತ್ರ ಮಹತ್ವದ್ದು, ಪರಿಣಾಮಕಾರಿಯಾದದ್ದು. ಸುದ್ದಿ ಲೋಕದ ತರಾತುರಿಯಂತೆಯೇ ಇಂದು ಎಲ್ಲಾ ಕ್ಷೇತ್ರವೂ ವೇಗವಾಗಿ ಸಾಗುತ್ತಿದೆ. ಇದಕ್ಕೆ ಆಧುನಿಕ ತಂತ್ರಜ್ಞಾನ, ತಂತ್ರಾಂಶಗಳು ಬಲ ನೀಡಿವೆ. ಇದರ ಸಹಾಯದಿಂದ ನಾವು ಕುಳಿತಲ್ಲಿಯೇ ಮಾಹಿತಿ, ವರ್ತಮಾನವನ್ನು ಸುಲಭವಾಗಿ ಪಡೆಯಬಹುದು. ಆದ್ದರಿಂದಲೇ ಇಂದು ಎಲ್ಲಾ ವಯೋಮಾನದವರು, ವಿಶೇಷವಾಗಿ ಯುವ ಜನಾಂಗ ವೆಬ್ ತಾಣಗಳತ್ತ ಆಕರ್ಷಿತರಾಗುತ್ತಿದ್ದಾರೆ.

ಮಾಹಿತಿಯೇ ಪ್ರಪಂಚ

ನ್ಯೂಸ್ ಪುತ್ತೂರು ಜಾಲಕ್ಕೆ ಓದುಗರೇ ಬಲ. ನಿಮ್ಮೂರಿನಲ್ಲಿ ಜರಗುವ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆ ಇತ್ಯಾದಿಗಳ ಕುರಿತಾಗಿಯೂ ಸಚಿತ್ರವಾಗಿ ಬರೆದು ಕಳುಹಿಸಿದಲ್ಲಿ, ನಾವು ಅದನ್ನು ಹತ್ತೂರಿಗೆ ಬಿತ್ತರಿಸುವ ಕೆಲಸ ಮಾಡಲಿದ್ದೇವೆ. ನಿಮ್ಮೂರಿನ ಸಮಸ್ಯೆಗಳಿಗೂ ನಾವು ಧ್ವನಿಯಾಗುತ್ತೇವೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನ ಸೆಳೆದು ಅವುಗಳ ಪರಿಹಾರಕ್ಕೂ ಪ್ರಾಮಾಣಿಕವಾಗಿ ಪ್ರಯತ್ನಿಸಲಿದ್ದೇವೆ. ಅವಿಭಜಿತ ತಾಲೂಕುಗಳ ನಾಡಿಮಿಡಿತಕ್ಕೆ ನಮ್ಮ ವೆಬ್ ತಾಣ ಸದಾ ಸ್ಪಂದಿಸಲಿದೆ.

ಪುತ್ತೂರಿನ ಸಮಗ್ರ ಸುದ್ದಿ ನೀಡುವ ನಮ್ಮ ಆಶಯಕ್ಕೆ ತಮ್ಮೆಲ್ಲರ ಬೆಂಬಲ ಅತೀ ಅಗತ್ಯ. ಮಾಧ್ಯಮದ ಯಶಸ್ಸಿನ ಹಿಂದೆ ಜಾಹೀರಾತಿನ ಪಾತ್ರ ಪ್ರಮುಖವಾದದ್ದು. ಮದುವೆ, ಮದುವೆ ವಾರ್ಷಿಕೋತ್ಸವ, ಜನ್ಮದಿನ, ಶಾಲಾ-ಕಾಲೇಜು ಹಾಗೂ ಸಂಘ-ಸಂಸ್ಥೆಗಳ ವಾರ್ಷಿಕೋತ್ಸವ, ಸಾಧಕರಿಗೆ ಅಭಿನಂದನೆ, ಶಿಲಾನ್ಯಾಸ, ವ್ಯಾಪಾರ-ವ್ಯವಹಾರಕ್ಕೆ ಸಂಬಂಧಿಸಿದ ಜಾಹೀರಾತು, ಶ್ರದ್ಧಾಂಜಲಿ ಜಾಹೀರಾತು ನೀಡಿ, ನ್ಯೂಸ್ ಪುತ್ತೂರು ವೆಬ್‍ತಾಣಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿಕೊಳ್ಳುತ್ತಿದ್ದೇವೆ. ಓದುಗರ ಸಲಹೆ, ಅಭಿಪ್ರಾಯಗಳಿಗೆ ಸದಾ ಸ್ವಾಗತ.

ನ್ಯೂಸ್ ಪುತ್ತೂರು ಬಳಗ
ನ್ಯೂಸ್ ಕಳುಹಿಸಲು ಇ –ಮೇಲ್ ಐಡಿ [email protected]
ವಾಟ್ಸಪ್ ನಂಬರ್: 9108382821

error: Content is protected !!
Scroll to Top