ಬೆಳಗಾವಿ: ತನ್ನ ಸಾಲ ತೀರಿಸಲು ಸ್ವಂತ ಅಳಿಯನ ಮನೆಯಲ್ಲೇ ಅತ್ತೆಯೊಬ್ಬಳು ಕಳ್ಳತನ ಮಾಡಿದ ಘಟನೆಯೊಂದು ಪಿರಣವಾಡಿಯಲ್ಲಿ ನಡೆದಿದೆ.
ಕನ್ನ ಹಾಕಿದ ಮಹಿಳೆಯನ್ನು ಪಿರಣವಾಡಿ ನಿವಾಸಿ ಉಜ್ವಲಾ ಎಂದು ಗುರುತಿಸಲಾಗಿದೆ.
ಅತ್ತೆಯನ್ನು ಮನೆಯಲ್ಲಿ ನಿಲ್ಲಿಸಿ ದಂಪತಿ ಸ್ನೇಹಿತರ ಮದುವೆಗೆ ತೆರಳಿದ್ದರು. ಈ ಸಮಯವನ್ನು ಉಪಯೋಗಿಸಿಕೊಂಡ ಅತ್ತೆ ಉಜ್ವಲಾ ಮನೆಯನ್ನೆಲ್ಲಾ ಜಾಲಾಡಿ ಅಮೂಲ್ಯ ವಸ್ತುಗಳನ್ನು ದೋಚಿರುವುದಾಗಿದೆ. ಮನೆಯ ಕಪಾಟಿನಲ್ಲಿದ್ದ 16.57 ಲಕ್ಷ ರೂ. ಮೌಲ್ಯದ ಆಭರಣಗಳನ್ನು ಕದ್ದಿದ್ದಾಳೆ.
ಉಜ್ವಲಾಳ ಈ ಕೃತ್ಯಕ್ಕೆ ಶಿವ ಅಪ್ಪಯ ಎಂಬಾತನೂ ಸಾತ್ ನೀಡಿದ್ದಾಗಿ ತಿಳಿದು ಬಂದಿದೆ.
ದಂಪತಿ ಮದುವೆ ಮುಗಿಸಿ ಹಿಂತಿರುಗಿದಾಗ ಮನೆಯಲ್ಲಿ ಕಳ್ಳತನ ನಡೆದಿರುವ ಸಂಗತಿ ಬೆಳಕಿಗೆ ಬಂದಿದೆ. ತಕ್ಷಣವೇ ತಿಳಕವಾಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಉಜ್ವಲಾ ಮತ್ತು ಶಿವ ಅಪ್ಪಯ ಕಳ್ಳತನ ಮಾಡಿರುವುದು ಬಯಲಾಗಿದೆ. ಸದ್ಯ ಇಬ್ಬರೂ ಕಳ್ಳರು ಪೊಲೀಸರ ಬಂಧನದಲ್ಲಿದ್ದಾರೆ.
























