ನವದೆಹಲಿ: ಡಿಜಿಟಲ್ ಅರೆಸ್ಟ್ ವಂಚನೆ ಪ್ರಕರಣಗಳು ಭಾರತದಲ್ಲಿ ಹೆಚ್ಚುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಕ್ರಮಕ್ಕೆ ಮುಂದಾಗಿದೆ.
ವಂಚನೆಗೆ ಬಳಕೆ ಮಾಡುವ ಮೊಬೈಲ್ ಡಿವೈಸ್ ಐಡಿಗಳನ್ನು ಶಾಶ್ವತವಾಗಿ ಬ್ಲಾಕ್ ಮಾಡುವಂತೆ ವಾಟ್ಸಾಪ್ ಸಂಸ್ಥೆಗೆ ಸೂಚನೆ ನೀಡಲಾಗಿದೆ. ವಂಚಕರು ಬಳಸುವ ಸಾಧನವನ್ನು ಗುರುತಿಸಿದ ತಕ್ಷಣ ಅದರ ಡಿವೈಸ್ ಐಡಿಯನ್ನು ನಿರ್ಬಂಧಿಸುವುದರಿಂದ, ಅದೇ ಫೋನ್ ಮೂಲಕ ಮತ್ತೆ ಖಾತೆ ತೆರೆಯುವ ಅವಕಾಶ ಕಡಿಮೆಯಾಗಲಿದೆ. ಜೊತೆಗೆ, ಅಳಿಸಲಾದ ಖಾತೆಗಳ ಮಾಹಿತಿಯನ್ನು ಕನಿಷ್ಠ 180 ದಿನಗಳವರೆಗೆ ಉಳಿಸಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ, ಇದು ತನಿಖೆಗೆ ಸಹಕಾರಿಯಾಗಲಿದೆ.
ಇನ್ನು ಮುಂದೆ ವಾಟ್ಸಾಪ್ ಖಾತೆಗಳನ್ನು ಸಕ್ರಿಯ ಸಿಮ್ ಕಾರ್ಡ್ಗೆ ಕಡ್ಡಾಯವಾಗಿ ಜೋಡಿಸುವ ಯೋಜನೆಯೂ ಇದೆ. ಅನಾಮಧೇಯ ಬಳಕೆ ತಡೆಯಲು ಈ ಕ್ರಮ 4 ರಿಂದ 6 ತಿಂಗಳಲ್ಲಿ ಜಾರಿಗೆ ಬರಲಿದೆ.
ಪೊಲೀಸ್ ಅಥವಾ ಸಿಬಿಐ ಚಿಹ್ನೆಗಳನ್ನು ಬಳಸಿ ಜನರನ್ನು ಹೆದರಿಸುವ ನಕಲಿ ಪ್ರೊಫೈಲ್ಗಳನ್ನು ಪತ್ತೆಹಚ್ಚಲು ಕೃತಕ ಬುದ್ಧಿಮತ್ತೆ ಬಳಕೆ ಹೆಚ್ಚಿಸಲಾಗುತ್ತಿದೆ. ಇಂತಹ ಖಾತೆಗಳನ್ನು ತಕ್ಷಣವೇ ಅಳಿಸಲು ಕ್ರಮ ಕೈಗೊಳ್ಳಲಾಗಿದೆ.
ವರದಿಗಳ ಪ್ರಕಾರ, 2024ರಲ್ಲಿ ಭಾರತದಲ್ಲಿ 1.23 ಲಕ್ಷಕ್ಕೂ ಹೆಚ್ಚು ಡಿಜಿಟಲ್ ವಂಚನೆ ಪ್ರಕರಣಗಳು ದಾಖಲಾಗಿದ್ದು, ಸಾವಿರಾರು ಕೋಟಿ ರೂಪಾಯಿ ನಷ್ಟ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇಂತಹ ಕಠಿಣ ಕ್ರಮಕ್ಕೆ ಮುಂದಾಗಿರುವುದಾಗಿದೆ.

























