ಬಂಟ್ವಾಳ: ಅಪರಿಚಿತ ವ್ಯಕ್ತಿಯೊಬ್ಬ ನೀರು ಕೇಳುವ ನೆಪದಲ್ಲಿ ಬಂದು ಮಹಿಳೆಯ ಕತ್ತಿನಿಂದ ಕರಿಮಣಿ ಸರ ಎಗರಿಸಿದ ಘಟನೆ ಕಾವಳಪಡೂರಿನ ರಾಜಪಲ್ಕೆಯಲ್ಲಿ ನಡೆದಿದೆ.
ಡೋಗ್ರ ಮೂಲ್ಯ ಎಂಬವರ ಪತ್ನಿ ಉಷಾಲಕ್ಷ್ಮಿ ಅವರ ಕತ್ತಿನಿಂದ ಎರಡೂವರೆ ಪವನಿನ ಕರಿಮಣಿ ಎಗರಿಸಿರುವುದಾಗಿದೆ.
ಸಂಜೆ ನಾಲ್ಕು ಗಂಟೆ ಸುಮಾರಿಗೆ ಅಪರಿಚಿತನೊಬ್ಬ ಬಂದು ಜಗಲಿಯಲ್ಲಿ ಕುಳಿತು ನೀರು ಕೇಳಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದೇ ಇದ್ದು ಮಹಿಳೆಯೇ ನೀರು ತರಲು ಒಳ ಹೋಗಿದ್ದಾರೆ. ಈ ವೇಳೆ ಅಪರಿಚಿತ ಮಹಿಳೆಯನ್ನು ಹಿಂಬಾಲಿಸಿ ಹೋಗಿ, ಕೈ ಕಾಲು ಕಟ್ಟಿ ಹಾಕಿ ಕತ್ತಿನಲ್ಲಿದ್ದ ಚಿನ್ನದ ಸರ ಎಗರಿಸಿರುವುದಾಗಿದೆ.
ಮಹಿಳೆಯ ಪತಿ ಪೇಟೆಗೆ ಹೋಗಿದ್ದು, ಮಗ ಹಿಂದೂ ಸಮಾಜೋತ್ಸವಕ್ಕೆ ತೆರಳಿದ್ದರು. ಪತಿ ಪೇಟೆಯಿಂದ ಮರಳಿ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.
ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
























