ನಡುರಸ್ತೆಯಲ್ಲಿ ನಿಂತು ಪೊಲೀಸರನ್ನು ನಿಂದಿಸಿದ ಮಹಿಳೆ ವಿರುದ್ಧ ದೂರು

ಟ್ರಾಫಿಕ್‌ ನಿಯಂತ್ರಿಸುತ್ತಿದ್ದ ಪೊಲೀಸರ ಜೊತೆ ಕಿರಿಕ್‌ ಮಾಡಿದ ಮಹಿಳೆ

ಮಂಗಳೂರು: ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇಲೆ ಬೆಂಗಳೂರಿನ ಸಂಧ್ಯಾ ಎಂಬ ಮಹಿಳೆ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶುಕ್ರವಾರ ರಜಾ ದಿನವಾಗಿದ್ದರಿಂದ ಕಟೀಲು ದೇವಸ್ಥಾನದಲ್ಲಿ ಭಕ್ತರ ದಟ್ಟಣೆ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಮಲ್ಲಿಗೆಯಂಗಡಿ ಜಂಕ್ಷನ್‌ನಲ್ಲಿ ದೊಡ್ಡ ವಾಹನಗಳನ್ನು ಕಿನ್ನಿಗೋಳಿಯತ್ತ ತಿರುಗಿಸಲಾಗುತ್ತಿತ್ತು ಮತ್ತು ಸಣ್ಣ ವಾಹನಗಳನ್ನು ಮಾತ್ರ ದೇವಸ್ಥಾನದ ಕಡೆಗೆ ಬಿಡಲಾಗುತ್ತಿತ್ತು. ಮಧ್ಯಾಹ್ನದ ವೇಳೆಗೆ ಟೆಂಪೋ ಟ್ರಾವೆಲರ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ತಮ್ಮ ವಾಹನವನ್ನು ದೇವಸ್ಥಾನದ ಕಡೆಗೆ ಬಿಡಬೇಕೆಂದು ಪಟ್ಟುಹಿಡಿದು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.





















































 
 

ಪೊಲೀಸರು ಪರಿಸ್ಥಿತಿಯನ್ನು ವಿವರಿಸಲು ಪ್ರಯತ್ನಿಸಿದರೂ ಆ ಮಹಿಳೆ ರಸ್ತೆಯ ಮಧ್ಯೆ ನಿಂತು ಸಂಚಾರಕ್ಕೆ ಅಡ್ಡಿಪಡಿಸಿದರು. ಈ ಕುರಿತು ದೂರು ನೀಡಿರುವ ಬಜ್ಪೆ ಪೊಲೀಸ್ ಠಾಣೆಯ ಚಿದಾನಂದ ಕೇಟ್ ಅವರು, ಸಮವಸ್ತ್ರದಲ್ಲಿದ್ದ ಪೊಲೀಸರಿಗೆ ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರಿದ್ದಾರೆ.

ತಮ್ಮನ್ನು ಸಂಧ್ಯಾ ಎಂದು ಪರಿಚಯಿಸಿಕೊಂಡ ಆ ಮಹಿಳೆ, “ನಾವು ಬೆಂಗಳೂರಿನಿಂದ ಬಂದಿದ್ದೇವೆ, ನಿಮಗೆ ಪಾಠ ಕಲಿಸುತ್ತೇವೆ, ನಿಮ್ಮ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುತ್ತೇವೆ” ಎಂದು ಪೊಲೀಸರಿಗೆ ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ. ಈ ಸಂಬಂಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರುದಾರರು ಒತ್ತಾಯಿಸಿದ್ದಾರೆ.

error: Content is protected !!
Scroll to Top