ಸ್ಟ್ರಾಂಗ್ ರೂಮ್ ತೆರೆಯಲಾಗಿದೆ ಎಂದು ಆರೋಪಿಸಿ ಪ್ರತಿಭಟನೆ
ಕೋಲ್ಕತ್ತಾ: ಇವಿಎಂ ಯಂತ್ರಗಳನ್ನು ಇರಿಸಲಾಗಿರುವ ಸ್ಟ್ರಾಂಗ್ ರೂಮನ್ನು ಅಕ್ರಮವಾಗಿ ತೆರೆಯಲಾಗಿದೆ ಎಂದು ಆರೋಪಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಡರಾತ್ರಿ ಪ್ರತಿಭಟನೆ ನಡೆಸಿ ಹೈಡ್ರಾಮಾ ಸೃಷ್ಟಿಸಿದ್ದಾರೆ. ತಾನು ಸ್ಪರ್ಧಿಸಿರುವ ಭವಾನಿಪುರ ಕ್ಷೇತ್ರದ ಮತ ಎಣಿಕಾ ಕೇಂದ್ರವಾದ ಸಖಾವತ್ ಮೆಮೋರಿಯಲ್ ಸ್ಕೂಲ್ ಬಳಿ ಮಮತಾ ಬ್ಯಾನರ್ಜಿ ಅವರು ಸ್ವತಃ ಭೇಟಿ ನೀಡಿ ಸುಮಾರು ನಾಲ್ಕು ಗಂಟೆಗಳ ಕಾಲ ತಂಗಿದ್ದರು.
ಇವಿಎಂ ಯಂತ್ರಗಳನ್ನು ಇರಿಸಲಾಗಿರುವ ಸ್ಟ್ರಾಂಗ್ ರೂಮ್ಗಳನ್ನು ಅಕ್ರಮವಾಗಿ ತೆರೆಯಲಾಗಿದೆ ಮತ್ತು ಅವುಗಳ ಟ್ಯಾಂಪರಿಂಗ್ಗೆ ಸಂಚು ರೂಪಿಸಲಾಗಿದೆ. ಸ್ಟ್ರಾಂಗ್ ರೂಮ್ ಒಳಗಡೆ ಅಪರಿಚಿತ ವ್ಯಕ್ತಿಗಳಿದ್ದಾರೆ ಎಂದು ಟಿಎಂಸಿ ಆರೋಪಿಸಿದೆ. ಈ ವೇಳೆ ಮಾತನಾಡಿದ ಮಮತಾ ಬ್ಯಾನರ್ಜಿ ಇವಿಎಂಗಳನ್ನು ಕಾವಲು ಕಾಯಲು ಕಾರ್ಯಕರ್ತರು 24 ಗಂಟೆಗಳ ಕಾಲ ಜಾಗರೂಕರಾಗಿರಬೇಕು ಮತ್ತು ಮಾಧ್ಯಮಗಳಿಗೆ ಸಿಸಿಟಿವಿ ಪ್ರವೇಶವನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಸಚಿವೆ ಶಶಿ ಪಂಜಾ ಮತ್ತು ಟಿಎಂಸಿ ವಕ್ತಾರ ಕುನಾಲ್ ಘೋಷ್ ಕೋಲ್ಕತ್ತಾದ ನೇತಾಜಿ ಇಂದೋರ್ ಸ್ಟೇಡಿಯಂ ಮತ್ತು ಖುದೀರಾಮ್ ಅನುಶೀಲನ್ ಕೇಂದ್ರದ ಹೊರಗೆ ರಾತ್ರಿಯಿಡೀ ಧರಣಿ ನಡೆಸಿದ್ದಾರೆ.
ಈ ಎಲ್ಲ ಆರೋಪಗಳನ್ನು ತಳ್ಳಿಹಾಕಿರುವ ಭಾರತೀಯ ಚುನಾವಣಾ ಆಯೋಗ, ಸ್ಟ್ರಾಂಗ್ ರೂಮ್ಗಳು ಸಂಪೂರ್ಣ ಸುರಕ್ಷಿತವಾಗಿವೆ ಮತ್ತು ನಿಯಮದಂತೆಯೇ ಸೀಲ್ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದೆ. ಎಲ್ಲ ಇವಿಎಂ ಸ್ಟ್ರಾಂಗ್ ರೂಮ್ಗಳನ್ನು ಅಭ್ಯರ್ಥಿಗಳು, ಅವರ ಏಜೆಂಟರು ಮತ್ತು ಸಾಮಾನ್ಯ ವೀಕ್ಷಕರ ಸಮ್ಮುಖದಲ್ಲೇ ನಿಯಮಾನುಸಾರ ಸೀಲ್ ಮಾಡಲಾಗಿದೆ. ಸ್ಟ್ರಾಂಗ್ ರೂಮ್ಗಳು ಸುರಕ್ಷಿತವಾಗಿದ್ದು, ಯಾವುದೇ ಭದ್ರತಾ ಉಲ್ಲಂಘನೆಯಾಗಿಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಅಗರ್ವಾಲ್ ತಿಳಿಸಿದ್ದಾರೆ.
ಟಿಎಂಸಿ ಹಂಚಿಕೊಂಡಿರುವ ವಿಡಿಯೋದಲ್ಲಿ ಕಂಡುಬಂದ ಚಟುವಟಿಕೆಯು ಇವಿಎಂಗಳಿಗೆ ಸಂಬಂಧಿಸಿದ್ದಲ್ಲ. ಅದು ಪೋಸ್ಟಲ್ ಬ್ಯಾಲೆಟ್ಗಳನ್ನು ವಿಧಾನಸಭಾ ಕ್ಷೇತ್ರವಾರು ಪ್ರತ್ಯೇಕಿಸುವ ಸಾಮಾನ್ಯ ಪ್ರಕ್ರಿಯೆಯಾಗಿದ್ದು, ಇದು ಸ್ಟ್ರಾಂಗ್ ರೂಮ್ಗಳ ಹೊರಗಿನ ಕಾರಿಡಾರ್ನಲ್ಲಿ ನಡೆದಿದೆ. ಈ ಬಗ್ಗೆ ಎಲ್ಲ ರಾಜಕೀಯ ಪಕ್ಷಗಳಿಗೆ ಮೊದಲೇ ಇಮೇಲ್ ಮೂಲಕ ಮಾಹಿತಿ ನೀಡಲಾಗಿತ್ತು ಎಂದು ಆಯೋಗ ವಿವರಿಸಿದೆ.
ಸ್ಟ್ರಾಂಗ್ ರೂಮ್ಗಳಿಗೆ ಎರಡು ಬೀಗಗಳ ಭದ್ರತೆ ಇದೆ. ಒಂದು ಕೀ ರಿಟರ್ನಿಂಗ್ ಆಫೀಸರ್ ಬಳಿ ಇದ್ದರೆ, ಮತ್ತೊಂದು ಅಸಿಸ್ಟೆಂಟ್ ರಿಟರ್ನಿಂಗ್ ಆಫೀಸರ್ ಬಳಿ ಇರುತ್ತದೆ. ಅಭ್ಯರ್ಥಿಗಳ ಏಜೆಂಟರು ಕೂಡ ಅಲ್ಲಿ ಸೀಲ್ ಹಾಕಲು ಅವಕಾಶ ಇರುವುದರಿಂದ ಅಕ್ರಮಕ್ಕೆ ಅವಕಾಶವಿಲ್ಲ ಎಂದು ತಿಳಿಸಿದೆ.
ಯಾವುದೇ ಸಿಸಿಟಿವಿ ಕ್ಯಾಮೆರಾಗಳನ್ನು ಆಫ್ ಮಾಡಲಾಗಿಲ್ಲ ಮತ್ತು ಲೈವ್ ದೃಶ್ಯಾವಳಿಗಳನ್ನು ಎಲ್ಲ ರಾಜಕೀಯ ಪಕ್ಷಗಳ ವೀಕ್ಷಣೆಗೆ ಲಭ್ಯವಾಗುವಂತೆ ಮಾಡಲಾಗಿದೆ. ಚುನಾವಣಾ ಪ್ರಕ್ರಿಯೆಯು ಪಾರದರ್ಶಕವಾಗಿದ್ದು, ಮೇ 4ರಂದು ನಡೆಯಲಿರುವ ಮತ ಎಣಿಕೆಗೆ ಎಲ್ಲ ಸಿದ್ಧತೆಗಳು ನಿಯಮದಂತೆಯೇ ನಡೆಯುತ್ತಿವೆ ಎಂದು ಆಯೋಗ ಹೇಳಿದೆ.

























