ಮಂಗಳೂರು: ನಂತೂರು ಜಂಕ್ಷನ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರಿಗೆ ಅಡ್ಡಿ ಮಾಡಿ, ಹಲ್ಲೆ ನಡೆಸಿದ ಆರೋಪಿಯ ಮೇಲೆ ಪ್ರಕರಣ ದಾಖಲಾಗಿದೆ.
ಗಾಯಾಳು ಪೊಲೀಸ್ ಪ್ರವೀಣ್ ಎಂಬವರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಎ. 18 ರಂದು ಸಂಚಾರ ಪೂರ್ವ ಪೊಲೀಸ್ ಠಾಣಾ ಸಿಬ್ಬಂದಿ ಪ್ರವೀಣ್, ಹಲೇಷಾ, ಚಂಪಾ ಎಂಬವರು ನಂತೂರು ಜಂಕ್ಷನ್ನಲ್ಲಿ ಕರ್ತವ್ಯದಲ್ಲಿದ್ದರು. ಈ ವೇಳೆ ಪದವು ಕಡೆಯಿಂದ ಬೈಕ್ ಸವಾರನೊಬ್ಬ ಮಹಿಳೆಯೊಬ್ಬಳನ್ನು ಬೈಕ್ನಲ್ಲಿ ಕೂರಿಸಿಕೊಂಡು ಬಂದು, ವಾಹನವನ್ನು ಬಿಕರ್ನಕಟ್ಟೆಗೆ ಹೋಗುವ ಫ್ರೀ ಲೆಫ್ಟ್ನಲ್ಲಿ ನಿಲ್ಲಿಸಿದ್ದಾನೆ. ಇದರಿಂದ ಇತರ ವಾಹನಗಳಿಗೆ ಸಮಸ್ಯೆಯಾಗುವುದನ್ನು ಮನಗಂಡ ಪೊಲೀಸರು ಅಲ್ಲಿಂದ ತೆರಳುವಂತೆ ಸೂಚಿಸಿದ್ದಾರೆ.
ಇದಕ್ಕೆ ಆಬೈಕ್ ಸವಾರ ಪೊಲೀಸರಿಗೆ ಬಾಯಿಗೆ ಬಂದಂತೆ ಬೈದಿದ್ದಾನೆ. ಅದನ್ನು ಪೊಲೀಸ್ ಸಿಬ್ಬಂದಿ ಪ್ರವೀಣ್ ಅವರು ಆತನಲ್ಲಿ ಪ್ರಶ್ನಿಸಿದಾಗ ಅವರ ಮುಖಕ್ಕೆ ಹೊಡೆದಿದ್ದಾನೆ. ಸಾವಿರಾರು ರೂ. ಮೌಲ್ಯದ ಅವರ ಮೊಬೈಲ್ ಅನ್ನು ನೆಲಕ್ಕೆ ಎಸೆದು ಕ್ರೌರ್ಯ ಮೆರೆದಿದ್ದಾನೆ. ಆರೋಪಿಯ ಜೊತೆಗಿದ್ದ ಮಹಿಳೆ ಸಹ ಪೊಲೀಸರಿಗೆ ಚಪ್ಪಲಿಯಲ್ಲಿ ಹೊಡೆಯುವುದಾಗಿ ಬೆದರಿಸಿ, ನಿಂದಿಸಿದ್ದಾಳೆ.
ಸಾರ್ವಜನಿಕರು ಘಟನೆ ತಿಳಿಗೊಳಿಸಲು ಯತ್ನಿಸಿದರೂ ಆರೋಪಿಗಳು ತಮ್ಮ ಗೂಂಡಾ ವರ್ತನೆ ಮುಂದುವರೆಸಿದ್ದಾರೆ.
ಕದ್ರಿ ಪೂರ್ವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

























