ಪುತ್ತೂರು: ಅಜ್ಜಿನಡ್ಕ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವಿಟ್ಲ ತಾಲೂಕು ಇವುಗಳ ಸಹಯೋಗದಲ್ಲಿ ಎರಡು ದಿನಗಳ ಕಾಲ ನಡೆದ ಭಜನಾ ತರಬೇತಿ ಮತ್ತು ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದಕ್ಷಿಣ ಕನ್ನಡ -2 ಜಿಲ್ಲಾ ನಿರ್ದೇಶಕ ಎ. ಬಾಬು ನಾಯ್ಕ ಧಾರ್ಮಿಕ ಉಪನ್ಯಾಸ ನೀಡಿದರು.
ಜೀವನದಲ್ಲೇ ಆದರ್ಶಗಳನ್ನು ಮೈಗೂಡಿಸಿಕೊಂಡರೆ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯ ಅಧ್ಯಕ್ಷ ಐತಪ್ಪ ಗೌಡ ಅವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ವಿಟ್ಲ ತಾಲೂಕು ಭಜನಾ ಪರಿಷತ್ತಿನ ಅಧ್ಯಕ್ಷ ದೇವಿದಾಸ್ ಶೆಟ್ಟಿ ಸಾಲೆತ್ತೂರು, ಕಾರ್ಯದರ್ಶಿ ರಮೇಶ್ ರಾವ್ ಮಂಚಿ, ಕೋಶಾಧಿಕಾರಿ ಜಯರಾಮ ರೈ ಕಲ್ಲಡ್ಕ , ವಿದ್ಯಾರ್ಥಿ ಪೋಷಕರಾದ ವಿಶಾಲಾಕ್ಷಿ ದಡ್ಡಲ್ತಡ್ಕ ಉಪಸ್ಥಿತರಿದ್ದು ಕಾರ್ಯಕ್ರಮ ಅನುಷ್ಠಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಭಜನಾ ಪರಿಷತ್ತಿನ ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ. ಅಳಿಯೂರು ಅವರು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ವೀರೇಂದ್ರ ಹೆಗ್ಗಡೆಯವರು ಕಳುಹಿಸಿದ ಅನುಗ್ರಹ ಸಂದೇಶ ಪತ್ರ ವಾಚನ ಮಾಡಿದರು.
ಶಿಬಿರದಲ್ಲಿ ಧಾರ್ಮಿಕ ಜಾಗೃತಿ, ಆರೋಗ್ಯ ಮಾಹಿತಿ, ಕಾನೂನು ಮಾಹಿತಿ, ಕಲೆ ಮತ್ತು ಸಾಹಿತ್ಯ, ಕುಳಿತು ಭಜನೆ, ಕುಣಿತ ಭಜನೆ, ಕ್ರಾಫ್ಟ್, ರಾಮಾಯಣ ಮತ್ತು ಮಹಾಭಾರತ ರಸಪ್ರಶ್ನೆ, ಆಟೋಟ ಸ್ಪರ್ಧೆ ಮುಂತಾದ ಚಟುವಟಿಕೆಗಳನ್ನು ನಡೆಸಲಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಧನಂಜಯ ಪಿ., ಗಣೇಶ್ ಪಾಲೆಚ್ಚಾರ್, ನಾಗೇಶ್ ಬಿ. ನೆರಿಯ, ಮನೋಜ್ ಕುಮಾರ್, ದಿವ್ಯ ಎಂ., ಶ್ರೀಮತಿ ಮಮತಾ, ದಿನೇಶ್ ಮಾಮೇಶ್ವರ ಮಾಹಿತಿ ಮಾರ್ಗದರ್ಶನ ನೀಡಿದರು.
ಮಹಾಭಾರತ ಮತ್ತು ರಾಮಾಯಣ ರಸಪ್ರಶ್ನೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಹಾಗೂ ಶಿಬಿರದಲ್ಲಿ ಪಾಲ್ಗೊಂಡ ಎಲ್ಲಾ ಮಕ್ಕಳಿಗೆ ಮತ್ತು ಸ್ವಯಂಸೇವಕರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಭಜನಾ ಮಂಡಳಿಯ ಶಿಕ್ಷಕಿ ಅಕ್ಷತಾ ಬಹುಮಾನ ವಿತರಣಾ ಪಟ್ಟಿಯನ್ನು ವಾಚಿಸಿದರು. ಮಂಡಳಿಯ ಸದಸ್ಯ ಕರುಣಾಕರ ಗೌಡ ಸಂಕೇಶ ಸ್ವಾಗತಿಸಿ, ಕಾವ್ಯ ಪಿ. ಕಾರ್ಯಕ್ರಮ ನಿರೂಪಿಸಿದರು. ಆನಂದ ನಾಯ್ಕ ನಡುಸಾರು ಧನ್ಯವಾದ ಸಮರ್ಪಿಸಿದರು.

























