ಪುತ್ತೂರು: ಮಾತಾಪಿತರನ್ನು ಗೌರವದಿಂದ ಕಾಣುವುದು ಮತ್ತು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ತಪಸ್ಸಿಗೆ ಸಮಾನ. ಅವರ ಸ್ಮರಣೆಯಲ್ಲಿ ಸಾಧಕರನ್ನು ಗುರುತಿಸಿ ಸನ್ಮಾನಿಸುವುದು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವುದೆಂದು ಕುಂಟಾರು ಶ್ರೀಧರ ತಂತ್ರಿಗಳು ತಿಳಿಸಿದರು.
ಪರ್ಲಡ್ಕದ ಅಗಸ್ತ್ಯ ನಿವಾಸದ ಶಾರದಮ್ಮ ವೇದಿಕೆಯಲ್ಲಿ ಜರಗಿದ ಸಮಾರಂಭದಲ್ಲಿ 26ನೇ ವರ್ಷದ ಬಾರ್ಯ ಪ್ರಶಸ್ತಿಯನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೆಂಕಟೇಶ ಸುಬ್ರಹ್ಮಣ್ಯ ಭಟ್ ಅವರಿಗೆ ಪ್ರದಾನ ಮಾಡಿ ಮಾತನಾಡಿದರು.
ಸನ್ಮಾನ ಸ್ವೀಕರಿಸಿದ ವಿ. ಎಸ್. ಭಟ್ ಮಾತನಾಡಿ, ಕಳೆದ ನಾಲ್ಕು ದಶಕಗಳಿಂದ ಮಹಾಲಿಂಗೇಶ್ವರ ದೇವರ ಸೇವೆಯನ್ನು ಮಾಡುತ್ತಿದ್ದು ಜೀವನೋಪಾಯಕ್ಕಾಗಿ ಬೇರೆ ಬೇರೆ ವೃತ್ತಿಗಳನ್ನು ಮಾಡಿ ಕೊಂಡಿದ್ದೆ. ನನಗೆ ಅರ್ಚಕ ವೃತ್ತಿ ಸಾರ್ಥಕತೆಯನ್ನು ನೀಡಿದೆ ಎಂದರು.
ವಿಜಯಕುಮಾರ ತಂತ್ರಿ ಬೆಳ್ಮಣ್ಣು, ಪ್ರತ್ಯೂಷ್ ಬಾರ್ಯ, ಪ್ರಜ್ಞಾ ಬಾರ್ಯ, ಗುರುಪ್ರಸಾದ್ ನೂರಿತ್ತಾಯ, ಡಾ. ಆದಿತ್ಯ ತಂತ್ರಿ ಮೊದಲಾದವರು ಉಪಸ್ಥಿತರಿದ್ದರು.
ವಿಷ್ಣುಮೂರ್ತಿ ನೂರಿತ್ತಾಯ ಪ್ರತಿಷ್ಠಾನದ ಅಧ್ಯಕ್ಷ ಭಾಸ್ಕರ ಬಾರ್ಯ ಪ್ರಸ್ತಾವನೆಯೊಂದಿಗೆ ಅಭಿನಂದನಾ ಭಾಷಣ ಮಾಡಿದರು. ಟಿ. ರಂಗನಾಥರಾವ್ ಬೊಳುವಾರು ಸನ್ಮಾನ ಪತ್ರ ವಾಚಿಸಿದರು. ವೈದಿಕರಾದ ಶಿವಕುಮಾರ್ ಎಡಮಂಗಲ, ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಪುತ್ತೂರು ಘಟಕದ ಅಧ್ಯಕ್ಷ ಚಂದ್ರಶೇಖರ ಆಳ್ವ ಪಡುಮಲೆ ಇವರನ್ನು ಗೌರವಿಸಲಾಯಿತು.
ಸ್ವರ್ಣಲತಾ ಭಾಸ್ಕರ ಸ್ವಾಗತಿಸಿ, ಪ್ರತಿಷ್ಠಾನದ ಸಂಚಾಲಕ ದಿವಾಕರ ಆಚಾರ್ಯ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

























