ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷಕ್ಕೆ ಅನ್ವಯಿಸುವಂತೆ ಕರ್ನಾಟಕದಲ್ಲಿ ಒಂದನೇ ತರಗತಿಗೆ ದಾಖಲಾಗಲು ಇದ್ದ 6 ರ ವಯೋಮಿತಿಯನ್ನು ಸಡಿಲಿಸಿರುವುದಾಗಿ ಮಹತ್ವದ ಘೋಷಣೆಯನ್ನು ರಾಜ್ಯ ಸರ್ಕಾರ ಮಾಡಿದೆ.
ಈ ಸಂಬಂಧ ಮಾತನಾಡಿರುವ ಸಚಿವ ಮಧು ಬಂಗಾರಪ್ಪ, ಒಂದನೇ ತರಗತಿಗೆ ದಾಖಲಾಗಲು ಇದ್ದ 6 ವರ್ಷದ ಮಿತಿಯನ್ನು 5 ವರ್ಷ 10 ತಿಂಗಳಿಗೆ ಸಡಿಲಿಕೆ ಮಾಡಲಾಗುವುದಾಗಿ ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಎಲ್ ಕೆಜಿ ಮತ್ತು ಯುಕೆಜಿ ಗೂ ಹೊಸದಾಗಿ ಕಾನೂನು ತಂದು ಶಾಶ್ವತ ಪರಿಹಾರ ನೀಡುವ ಬಗ್ಗೆ ಕೆಲಸ ಮಾಡುತ್ತಿದ್ದೇವೆ. ಇಲಾಖೆ ವತಿಯಿಂದ ಕಾನೂನು ತರುತ್ತೇವೆ. ಮಕ್ಕಳ ಪೋಷಕರು ಎಲ್ಲಾ ಕಡೆ ಓಡಾಡುತ್ತಿದ್ದು, ಗಾಬರಿಯಲ್ಲೂ ಇದ್ದಾರೆ. ಸರ್ಕಾರವು ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಶಾಲಾ ದಾಖಲಾತಿಗೆ ವಯೋಮಿತಿ ಸಡಿಲಿಕೆ ಮಾಡಿದೆ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕ ಶಿಕ್ಷಣ ಕಾಯ್ದೆ 1993ರ ಅಧ್ಯಾಯ 3 ಸೆಕ್ಷನ್ 20 ರ ಮಕ್ಕಳನ್ನು 1 ನೇ ತರಗತಿಗೆ ದಾಖಲಾತಿ ಮಾಡುವ ಸಂಬಂಧ 60 ದಿನಗಳ ವಿನಾಯಿತಿ ನೀಡಲಾಗುತ್ತಿದೆ. ದಾಖಲಾತಿ ತಂತ್ರಾಂಶದಲ್ಲಿಯೂ ಬದಲಾವಣೆ ಮಾಡಲಾಗುವುದಾಗಿ ಮಾಹಿತಿ ನೀಡಿದ್ದಾರೆ.

























