ಗುಂಪು ಕಟ್ಟಿಕೊಂಡು ಹೊಡೆದಾಟ; ಹಲವರಿಗೆ ಗಾಯ
ಬಂಟ್ವಾಳ : ಉಳ್ಳಾಲ ತಾಲೂಕಿನ ಸಜಿಪಪಡು ಗ್ರಾಮದ ತಲೆಮೊಗರು ಮಸೀದಿಯ ವಿಚಾರಕ್ಕೆ ಸಂಬಂಧಿಸಿದಂತೆ ಭಾರಿ ಮಾರಾಮಾರಿ ನಡೆದಿದ್ದು, ಕೆಲವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಈ ಹೊಡೆದಾಟದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಮೊದಲ ಪ್ರಕರಣದಲ್ಲಿ ಸಜಿಪಪಡು ನಿವಾಸಿ ಅಬ್ದುಲ್ ನವಾಝ್ (42) ಎಂಬವರು ನೀಡಿದ ದೂರಿನಂತೆ ಮಾರ್ಚ್ 22ರಂದು ಬೆಳಗ್ಗೆ ಇವರು ಮತ್ತು ಅವರ ಸಂಬಂಧಿ ದಾವೂದ್ ಜೊತೆಯಲ್ಲಿ ತಲೆಮೊಗರು ಮಸೀದಿಯಿಂದ ಬರುತ್ತಿರುವಾಗ ಮಸೀದಿಗೆ ಸಂಬಂಧಿಸಿದ ಕಟ್ಟಡದಲ್ಲಿರುವ ಶೌಕತ್ ಎಂಬಾತನ ಅಂಗಡಿಯ ಬಳಿ ಆರೋಪಿಗಳಾದ ಶೌಕತ್, ಇಸಾಕ್, ಶಫೀಕ್, ಯಾಕೂಬ್, ಮಹಮ್ಮದ್ ಮುಸ್ತಫಾ, ನಾಸಿರ್ ಹಾಗೂ ನಿಝಾಲ್ ಎಂಬವರು ಗುಂಪು ಕಟ್ಟಿಕೊಂಡು ನಿಂತಿದ್ದು, ನವಾಝ್ ಹಾಗೂ ದಾವೂದ್ ಸ್ಥಳಕ್ಕೆ ಬಂದಾಗ ಆರೋಪಿಗಳು ಮಸೀದಿಯ ವಿಚಾರದಲ್ಲಿ ತಕರಾರು ತೆಗೆದು ಅವಾಚ್ಯವಾಗಿ ನಿಂದಿಸಿ, ಕತ್ತಿ ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆ. ಹಲ್ಲೆಯಿಂದ ಗಾಯಗೊಂಡ ನವಾಝ್ ಹಾಗೂ ದಾವೂದ್ ಬಂಟ್ವಾಳ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2ನೇ ಪ್ರಕರಣದಲ್ಲಿ ಸಜಿಪಪಡು ನಿವಾಸಿ ಅಬ್ದುಲ್ ಗಫೂರ್ (48) ಎಂಬವರು ನೀಡಿದ ದೂರಿನಂತೆ, ಆರೋಪಿಗಳಾದ ಯಾಕೂಬ್, ಶಫೀಕ್, ಇಸಾಕ್, ಸಫ್ವಾನ್, ಅಶ್ರಫ್ ಸಾಹೇಬ್ ಎಂಬವರು ಸಜಿಪಪಡು ಗ್ರಾಮದ ತಲೆಮೊಗರು ಮಸೀದಿ ಬಳಿ ಗಫೂರ್ ಅವರನ್ನು ತಡೆದು ನಿಲ್ಲಿಸಿ ಬೈದು, ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ದೂರಲಾಗಿದ್ದು, ಹಲ್ಲೆಯಿಂದ ಗಾಯಗೊಂಡ ಗಫೂರ್ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದೇ ಘಟನೆಗೆ ಸಂಬಂಧಿಸಿದಂತೆ 3ನೇ ಪ್ರಕರಣದಲ್ಲಿ ಸಜಿಪಪಡು ನಿವಾಸಿ ಶೌಕತ್ ಆಲಿ (40) ಎಂಬವರು ನೀಡಿದ ದೂರಿನಂತೆ ಶೌಕತ್ ಮಾ. 22ರಂದು ಬೆಳಗ್ಗೆ ಸಜಿಪಪಡು ಗ್ರಾಮದ ತಲೆಮೊಗರು ಮಸೀದಿ ಬಳಿಯ ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡಿದ್ದಾಗ ಆರೋಪಿಗಳಾದ ದಾವೂದ್, ಜುಬೈರ್, ಸೈದುದ್ದೀನ್, ನವಾಝ್, ಗಫೂರ್, ಶರೀಫ್, ಆಶಿಕ್ ಎಂಬವರು ಅಂಗಡಿಗೆ ಬಂದು ಮಸೀದಿ ವಿಚಾರದಲ್ಲಿ ತಕರಾರು ತೆಗೆದು ಶೌಕತ್ ಅವರ ಸಂಬಂಧಿ ರಬಿಯತ್ ಅವರಿಗೆ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.
ಈ ವೇಳೆ ಗಲಾಟೆ ಬಿಡಿಸಲು ಬಂದ ಸಫಾನಾ, ನಿಜಾಲ್, ಇಸಾಕ್, ಅಶ್ರಫ್ ಎಂಬವರಿಗೆ ಹಾಗೂ ಶೌಕತ್ ಅವರಿಗೂ ಅವಾಚ್ಯವಾಗಿ ಬೈದು ತಲವಾರಿನಿಂದ ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗಿದ್ದು, ಗಲಾಟೆ ಬಿಡಿಸಲು ಬಂದ ಸಂಬಂಧಿ ಆಯಿಷಾ ಎಂಬವರಿಗೆ ಆರೋಪಿಗಳು ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದಲ್ಲಿ ಭಾಗಿಯಾಗಿದ್ದ ಇತ್ತಂಡಗಳ ಪೈಕಿ ಗಾಯಾಳುಗಳು ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಯಾರಿಗೂ ಪ್ರಾಣಾಪಾಯದ ಗಾಯಗಳಾಗಿರುವುದಿಲ್ಲ. ಗಾಯಾಳುಗಳು ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

























