ಹೊಸದಿಲ್ಲಿ: ಇಸ್ರೇಲ್ ದೇಶ ಎದುರಿಸುತ್ತಿರುವ ಸಂಕಷ್ಟದ ಸನ್ನಿವೇಶದಲ್ಲಿ ಭಾರತ ದೇಶದ ಜನರು ಇಸ್ರೇಲ್ ಜನತೆಯ ಪರವಾಗಿ ಬಲವಾಗಿ ನಿಲ್ಲುತ್ತಾರೆ ಎಂದು ಪ್ರಧಾನಿ ಮೋದಿ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಭರವಸೆ ನೀಡಿದ್ದಾರೆ.
ಇಸ್ರೇಲ್ ಪ್ರಧಾನಿ ಜೊತೆ ದೂರವಾಣಿ ಮೂಲಕ ಮಾತನಾಡಿದ ಪ್ರಧಾನಿ ಮೋದಿ ಅವರಿಗೆ ಇಸ್ರೇಲ್ನ ಸದ್ಯದ ಸ್ಥಿತಿಗತಿಗಳ ಕುರಿತಾಗಿ ಬೆಂಜಮಿನ್ ನೆತನ್ಯಾಹು ಮಾಹಿತಿ ನೀಡಿದರು.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ದೂರವಾಣಿ ಕರೆ ಮಾಡಿದ್ದಕ್ಕೆ ಧನ್ಯವಾದ ಅರ್ಪಿಸುತ್ತೇನೆ ಎಂದಿದ್ದಾರೆ. ಇಸ್ರೇಲ್ ಪ್ರಧಾನಿಗಳು ತಮ್ಮ ದೇಶದ ಸ್ಥಿತಿಗತಿ ಬಗ್ಗೆ ಮಾಹಿತಿ ನೀಡಿದರು. ಇಸ್ರೇಲ್ ದೇಶ ಸಂಕಷ್ಟದಲ್ಲಿ ಇರುವ ಈ ಸನ್ನಿವೇಶದಲ್ಲಿ ಭಾರತ ದೇಶದ ಜನರು ದೃಢವಾಗಿ ಅವರ ಪರ ನಿಲ್ಲುತ್ತಾರೆ. ಭಾರತವು ಇಸ್ರೇಲ್ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಉಗ್ರವಾಗಿ ಖಂಡಿಸುತ್ತದೆ ಎಂದು ಪ್ರಧಾನಿ ಮೋದಿ ಟ್ವೀಟ್ (ಎಕ್ಸ್) ಮಾಡಿದ್ದಾರೆ.
ಶನಿವಾರ ಸಾವಿರಾರು ಹಮಾಸ್ ಉಗ್ರರು ನೆಲ, ಜಲ ಹಾಗೂ ವಾಯು ಮಾರ್ಗದಲ್ಲಿ ಹಠಾತ್ ದಾಳಿ ನಡೆಸಿದ ಇಸ್ರೇಲ್ ಕಂಗಾಲಾಗಿತ್ತು. ಯಹೂದಿಗಳ ಹಬ್ಬದ ದಿನವೇ ಈ ದಾಳಿ ನಡೆದಿತ್ತು. ಬಳಿಕ ಚೇತರಿಸಿಕೊಂಡ ಇಸ್ರೇಲ್, ಪ್ರತಿ ದಾಳಿ ನಡೆಸಿತು. ಗಾಜಾಪಟ್ಟಿಯಲ್ಲಿ ಇಸ್ರೇಲ್ ವಾಯು ಪಡೆ ಬರೋಬ್ಬರಿ 500ಕ್ಕೂ ಹೆಚ್ಚು ಸ್ಥಳಗಳಲ್ಲಿ ಬಾಂಬ್ಗಳ ಸುರಿಮಳೆಯನ್ನೇ ಮಾಡಿದೆ. ಇದರ ಜೊತೆಯಲ್ಲೇ ಇಸ್ರೇಲ್ ಭೂ ಸೇನೆಗೆ 3 ಲಕ್ಷ ಮೀಸಲು ಯೋಧರು ಸೇರ್ಪಡೆಯಾಗಿದ್ದು, ಇಸ್ರೇಲ್ ಒಳಗೆ ನುಗ್ಗಿರುವ ಹಮಾಸ್ ಉಗ್ರರನ್ನು ಹಿಮ್ಮೆಟ್ಟಿಸುವ ಜೊತೆಯಲ್ಲೇ, ಗಾಜಾಪಟ್ಟಿಯಲ್ಲಿ ಇರುವ ಹಮಾಸ್ ಉಗ್ರರನ್ನೂ ಹುಟ್ಟಡಗಿಸಲು ಮುನ್ನುಗ್ಗಿದೆ. ಇಸ್ರೇಲ್ ಹಾಗೂ ಹಮಾಸ್ ನಡುವಣ ಸಂಘರ್ಷದಲ್ಲಿ ಈವರೆಗೆ 1,600 ಮಂದಿ ಮೃತಪಟ್ಟಿರುವ ಮಾಹಿತಿ ಲಭ್ಯವಾಗುತ್ತಿದೆ. ಇದೀಗ ಭಾರತ ದೇಶವು ಇಸ್ರೇಲ್ಗೆ ತನ್ನ ಬೆಂಬಲ ಘೋಷಿಸಿರೋದು ಭಾರೀ ಮಹತ್ವ ಪಡೆದುಕೊಂಡಿದೆ.
























