ಮೂಡಬಿದಿರೆ: ಖಾಸಗಿ ಬಸ್ – ಕಾರಿನ ನಡುವೆ ಅಪಘಾತ ಸಂಭವಿಸಿದ ಘಟನೆ ಬೆಳುವಾಯಿ ಕಾಂತಾವರ ಕ್ರಾಸ್ ಬಳಿ ನಡೆದಿದೆ.
ಗುದ್ದಿದ ರಭಸಕ್ಕೆ ಎರಡೂ ವಾಹನಗಳಿಗೆ ತೀವ್ರ ಹಾನಿಯಾಗಿದೆ. ಕಾಂತಾವರ ಕ್ರಾಸ್ ಸಮೀಪ ಇರುವ ಯು ಟರ್ನ್ ಅನ್ನು ಬುಧವಾರದಿಂದ ಬಂದ್ ಮಾಡಲಾಗಿದೆ.
ಕಾಂತಾವರ ಕಡೆಯಿಂದ ಬರುವ ವಾಹನಗಳು ಮೂಡುಬಿದಿರೆ ಕಡೆಗೆ ಹೋಗುವ ಕ್ರಾಸ್ ರಸ್ತೆಯನ್ನು ಏಕಾಏಕಿ ಬಂದ್ ಮಾಡಿರುವುದರಿಂದ ಸಂಚಾರ ವ್ಯವಸ್ಥೆಯಲ್ಲಿ ಭಾರಿ ಗೊಂದಲ ಉಂಟಾಗಿದೆ. ರಸ್ತೆ ಬಂದ್ ಆಗಿರುವ ಹಿನ್ನೆಲೆಯಲ್ಲಿ ಕಾಂತಾವರ ಕಡೆಯಿಂದ ಬರುವ ವಾಹನಗಳು ಬೆಳುವಾಯಿ ಪೇಟೆಗೆ ಹೋಗಲು ಹರಸಾಹಸ ಪಡಬೇಕಾಗಿದೆ.
ವಾಹನ ಸವಾರರು ಅನಿವಾರ್ಯವಾಗಿ ಚಿಲಿಂಬಿ ತನಕ ಹೋಗಿ, ಅಲ್ಲಿಂದ ವಾಹನವನ್ನು ತಿರುಗಿಸಿಕೊಂಡು ಬರಬೇಕಾದ ಪರಿಸ್ಥಿತಿ ಇದೆ. ನಿಯಮಾವಳಿಗಳಿಲ್ಲದೆ ಏಕಾಏಕಿ ರಸ್ತೆ ಬಂದ್ ಮಾಡಿರುವುದರಿಂದ ರಸ್ತೆಯಲ್ಲಿ ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
























