ಪ್ಲಾಸ್ಟಿಕ್ ಚೀಲ, ಬ್ಯಾಗ್ಗಳಲ್ಲಿ 500 ರೂ. ನೋಟುಗಳನ್ನು ತುಂಬಿ ಹೂತಿಟ್ಟಿದ್ದರು
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬದುರಿಯಾದಲ್ಲಿ ಬುಧವಾರ ಅತ್ಯಂತ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ತೃಣಮೂಲ ಕಾಂಗ್ರೆಸ್ ಪಕ್ಷದ ಕಚೇರಿ ಬಳಿ ಭೂಮಿಯಡಿಯಲ್ಲಿ ಹೂತಿಡಲಾಗಿದ್ದ 500 ರೂಪಾಯಿ ಮುಖಬೆಲೆಯ ನೋಟುಗಳ ಕಟ್ಟುಗಳಿಂದ ತುಂಬಿದ್ದ ಚೀಲಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬದುರಿಯಾ ಪುರಸಭೆಯ ಅಧ್ಯಕ್ಷ ದೀಪಂಕರ್ ಭಟ್ಟಾಚಾರ್ಯ ಅವರನ್ನು ಸರ್ಕಾರದ ಪರಿಹಾರ ಸಾಮಗ್ರಿ ದುರುಪಯೋಗ ಮತ್ತು ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಬಂಧಿಸಿದ ನಂತರ, ಪೊಲೀಸರಿಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಗಿದೆ. ಟಿಎಂಸಿ ಕಚೇರಿ ಸಮೀಪದ ಜಾಗವನ್ನು ಅಗೆದಾಗ ಪೊಲೀಸರಿಗೆ 500 ರೂ. ನೋಟುಗಳಿದ್ದ ನಾಲ್ಕು ದೊಡ್ಡ ಬ್ಯಾಗ್ಗಳು ಮತ್ತು ಒಂದು ಗೋಣಿಚೀಲ ಪತ್ತೆಯಾಗಿವೆ. ಪ್ರಾಥಮಿಕ ಅಂದಾಜಿನ ಪ್ರಕಾರ ಈ ಹಣದ ಮೌಲ್ಯ ನೂರಾರು ಕೋಟಿ ರೂಪಾಯಿ ಆಗಬಹುದು ಎಂದು ಹೇಳಲಾಗಿದ್ದು, ನೋಟು ಎಣಿಕೆ ಕಾರ್ಯ ಇನ್ನೂ ಮುಗಿದಿಲ್ಲ.
ಇದಕ್ಕೂ ಮುನ್ನ ದೀಪಂಕರ್ ಭಟ್ಟಾಚಾರ್ಯ ಅವರಿಗೆ ಸೇರಿದ ಸ್ಥಳಗಳ ಮೇಲೆ ನಡೆದಿದ್ದ ದಾಳಿಯಲ್ಲಿ ಸುಮಾರು 80 ಲಕ್ಷ ರೂ. ನಗದು ಮತ್ತು ವಿಪತ್ತು ಪರಿಹಾರಕ್ಕಾಗಿ ಮೀಸಲಿಟ್ಟಿದ್ದ 4,000 ಸರ್ಕಾರಿ ಟಾರ್ಪಾಲುಗಳನ್ನು ಜಪ್ತಿ ಮಾಡಲಾಗಿತ್ತು. ಸ್ಥಳೀಯರು ರಾತ್ರೋರಾತ್ರಿ ಅವರ ಕಚೇರಿಯಿಂದ ಟಾರ್ಪಾಲುಗಳನ್ನು ಸಾಗಿಸುತ್ತಿರುವುದನ್ನು ಮತ್ತು ಅಧಿಕೃತ ದಾಖಲೆಗಳನ್ನು ಸುಡುತ್ತಿರುವುದನ್ನು ಗಮನಿಸಿದ್ದರು. ತನಿಖೆ ಮುಂದುವರಿಸಿದ ಪೊಲೀಸರು, ಭಟ್ಟಾಚಾರ್ಯ ಅವರ ನಿವಾಸದ ಪಕ್ಕದಲ್ಲಿದ್ದ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲೂ ನಗದು ಮತ್ತು ಪರಿಹಾರ ಸಾಮಗ್ರಿಗಳನ್ನು ಪತ್ತೆ ಹಚ್ಚಿದ್ದು, ಸರ್ಕಾರಿ ಆಸ್ತಿ ದುರುಪಯೋಗಕ್ಕೆ ಸಂಬಂಧಿಸಿದಂತೆ ಹಲವು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ಜಾರಿ ನಿರ್ದೇಶನಾಲಯದ ತನಿಖೆ ಹಾಗೂ ಪೊಲೀಸ್ ಕಾರ್ಯಾಚರಣೆ ತೀವ್ರಗೊಂಡಿದ್ದು, ಇದರ ಭಾಗವಾಗಿ ಹಲವು ಟಿಎಂಸಿ ನಾಯಕರನ್ನು ಬಂಧಿಸಲಾಗಿದೆ. ಕೇಂದ್ರ ಸಶಸ್ತ್ರ ಪಡೆಗಳ ಬೆಂಬಲದೊಂದಿಗೆ ರಾಜ್ಯ ಪೊಲೀಸರು ಬಂಧಿತ ಟಿಎಂಸಿ ನಾಯಕರನ್ನು ಸಾರ್ವಜನಿಕವಾಗಿ ಮೆರವಣಿಗೆ ನಡೆಸುತ್ತಿರುವುದಕ್ಕೆ ಟಿಎಂಸಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಕಾನೂನು ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಇದೆಲ್ಲವೂ ರಾಜಕೀಯ ಪ್ರೇರಿತ ಕ್ರಮ ಎಂದು ಟಿಎಂಸಿ ಹಿರಿಯ ನಾಯಕರು ದೂರಿದ್ದಾರೆ.
ಸ್ಥಳೀಯ ಮೂಲಗಳ ಪ್ರಕಾರ, ಪೂರಾ ಪ್ರದೇಶದಲ್ಲಿರುವ ಟಿಎಂಸಿ ಕಚೇರಿ ಬಳಿ ತಡರಾತ್ರಿಯಲ್ಲಿ ಅನುಮಾನಾಸ್ಪದ ಚಟುವಟಿಕೆಗಳು ನಡೆಯುತ್ತಿರುವುದನ್ನು ನಿವಾಸಿಗಳು ಗಮನಿಸಿದ್ದರು. ಕಚೇರಿಯಿಂದ ಸರಕುಗಳನ್ನು ಹೊತ್ತ ವಾಹನಗಳು ಹೊರಹೋಗುತ್ತಿರುವುದು ಮತ್ತು ಕೆಲವರು ಕಚೇರಿಯ ಹೊರಗೆ ಅಧಿಕೃತ ದಾಖಲೆಗಳನ್ನು ಸುಡುತ್ತಿರುವುದು ಕಂಡುಬಂದಿತ್ತು. ಸದ್ಯ ಜಪ್ತಿ ಮಾಡಲಾದ ನಿಧಿಯ ಮೂಲ ಮತ್ತು ಪರಿಹಾರ ಸಾಮಗ್ರಿಗಳನ್ನು ಎಲ್ಲಿಂದ ತರಲಾಗಿತ್ತು ಎಂಬ ಬಗ್ಗೆ ತನಿಖೆ ಮುಂದುವರಿದಿದೆ.
























