ಜೀವದ ಮೇಲೆ ಆಸೆ ಬಿಟ್ಟು ನಾವಿನ್ನು ಬರುವುದಿಲ್ಲ ಎಂದು ಸಂದೇಶ ಕಳುಹಿಸಿದ ಪ್ರಯಾಣಿಕರು
ಹುಬ್ಬಳ್ಳಿ: ತಾಂತ್ರಿಕ ದೋಷದಿಂದ ನಿಯಂತ್ರಣ ಕಳೆದುಕೊಂಡು 4 ಗಂಟೆಗಳ ಕಾಲ ವಿಮಾನ ಆಗಸದಲ್ಲೇ ಸುತ್ತಾಟ ನಡೆಸಿದ್ದು, ಹುಬ್ಬಳ್ಳಿಯಲ್ಲಿ ಮಹಾ ದುರಂತವೊಂದು ತಪ್ಪಿದೆ. ಫ್ಲೈಟ್ನ್ನು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲು ಹರಸಾಹಸ ಪಡಲಾಗಿದ್ದು, ಅಂತಿಮವಾಗಿ ವಿಮಾನವನ್ನು ಬೆಂಗಳೂರಿನಲ್ಲಿ ಲ್ಯಾಂಡಿಂಗ್ ಮಾಡಲಾಗಿದೆ.
Fly91 ಏರ್ಲೈನ್ಸ್ IC3401(ATRTURBOPROP AT7) ಫ್ಲೈಟ್ ಹೈದರಾಬಾದ್ನಿಂದ ಹುಬ್ಬಳ್ಳಿಗೆ ಹೊರಟಿತ್ತು. ನಿನ್ನೆ ಮಧ್ಯಾಹ್ನ 3 ಗಂಟೆ ಹೈದರಾಬಾದ್ ರಾಜೀವ್ ಗಾಂಧಿ ಇಂಟರ್ನ್ಯಾಷನಲ್ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿತ್ತು. ಸಂಜೆ 4.30 ಕ್ಕೆ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಹುಬ್ಬಳ್ಳಿ ಸಮೀಪಿಸುತ್ತಿದ್ದಂತೆ ಏಕಾಏಕಿ ತಾಂತ್ರಿಕ ದೋಷದಿಂದ ವಿಮಾನ ನಿಯಂತ್ರಣ ಕಳೆದುಕೊಂಡಿತು. ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗದೆ ಸುಮಾರು ನಾಲ್ಕು ಗಂಟೆ ಆಗಸದಲ್ಲಿಯೇ ಮುಂಡಗೋಡ, ದಾವಣಗೆರೆ, ಶಿವಮೊಗ್ಗದಲ್ಲಿ ಸುತ್ತಾಟ ನಡೆಸಿದೆ. ಎಲ್ಲಿಯೂ ಫ್ಲೈಟ್ ಲ್ಯಾಂಡ್ ಆಗಲಿಲ್ಲ. ಕೊನೆಗೆ ಸಂಜೆ 7.30ಕ್ಕೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆಗಿದೆ.
ಇದರಿಂದ ಕಂಗಾಲಾದ ಪ್ರಯಾಣಿಕರು ಫ್ಲೈಟ್ನಲ್ಲಿಯೇ ದೇವರಿಗೆ ಕೈಮುಗಿದು ಬೇಡಿಕೊಂಡು ಕಣ್ಣೀರಿಟ್ಟಿದ್ದರು. 4 ಗಂಟೆ ಜೀವ ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಕರು ವಿಮಾನದಲ್ಲಿದ್ದರು. ನಾವಿನ್ನು ಜೀವಂತವಾಗಿ ಬರುವುದು ಅನುಮಾನ ಅಂತ ಕುಟುಂಬಸ್ಥರಿಗೆ ಮೊಬೈಲ್ನಲ್ಲಿ ಸಂದೇಶ ಕಳುಹಿಸಿದ್ದರು. ಮತ್ತೊಂದು ಕಡೆ Fly91 ಏರ್ಲೈನ್ಸ್ ವಿರುದ್ಧ ಪ್ರಯಾಣಿಕರ ಕುಟುಂಬಸ್ಥರು ಅಸಮಾಧಾನಗೊಂಡಿದ್ದರು. ಫ್ಲೈಟ್ ಘಟನೆ ಬಗ್ಗೆ ಯಾವುದೇ ಮಾಹಿತಿ ನೀಡದೆ ನಿರ್ಲಕ್ಷ್ಯ ತೋರಿದ್ದಾರೆಂದು ಆರೋಪಿಸಿ ಕಿಡಿಕಾರಿದ್ದರು.
ವಿಮಾನದ ಲ್ಯಾಂಡಿಂಗ್ ವೇಳೆ ಅಸಲಿಗೆ ಆದ ಸಮಸ್ಯೆ ಏನು ಎಂಬ ಬಗ್ಗೆ ಇನ್ನೂ ನಿಖರ ಮಾಹಿತಿ ಸಿಕ್ಕಿಲ್ಲ. ಪ್ರಯಾಣಿಕರು ಹೇಳುವಂತೆ ತಾಂತ್ರಿಕದೋಷದಿಂದ ವಿಮಾನ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಲು ಸಾಧ್ಯವಾಗಿಲ್ಲ. ಆದರೆ ಮೂಲಗಳ ಪ್ರಕಾರ ಹವಾಮಾನ ವೈಪರಿತ್ಯವೇ ಘಟನೆಗೆ ಕಾರಣ ಎನ್ನಲಾಗಿದೆ.

























