ಬೆಂಗಳೂರು: ಬೇಸಿಗೆಯ ಬಿಸಿ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದೆ. ದಿನೇ ದಿನೇ ಸೂರ್ಯನ ತಾಪ ಹೆಚ್ಚಾಗುತ್ತಿದೆ.
ಬೆಂಗಳೂರು ನಗರ ಸೇರಿದಂತೆ ರಾಜ್ಯದ ಇನ್ನೂ ಹಲವು ಪ್ರದೇಶಗಳಲ್ಲಿ ತಾಪಮಾನ ಏರಿಕೆಯಾಗಿದೆ. ಮುಂದಿನ ಎರಡು ದಿನಗಳಲ್ಲಿ ಬಿಸಿಗಾಳಿ ತೀವ್ರತೆ ಪಡೆದುಕೊಳ್ಳುವ ಸಾಧ್ಯತೆ ಇದ್ದು ಜನರು ಎಚ್ಚರದಿಂದ ಇದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಹವಾಮಾನ ಇಲಾಖೆ ಸೂಚಿಸಿದೆ.
ಕರ್ನಾಟಕದ ಕರಾವಳಿ ಭಾಗ ಮತ್ತು ಕಲ್ಯಾಣ ಕರ್ನಾಟಕ ಈಗಾಗಲೇ ಕಾದ ಕಾವಲಿಯಂತಾಗಿವೆ. ಕೆಲವು ಪ್ರದೇಶಗಳಲ್ಲಿ ತಾಪಮಾನ 45% ಗಿಂತ ಅಧಿಕವಾಗುವ ಸಾಧ್ಯತೆ ಸಹ ಇದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ರ ವರೆಗಿನ ಬಿಸಿಲಿಗೆ ಒಡ್ಡಿಕೊಳ್ಳದಂತೆ, ಆದಷ್ಟು ತಣ್ಣಗಿನ ಪ್ರದೇಶಗಳಲ್ಲೇ ಇರುವಂತೆ, ಬಿಸಿಲಿಗೆ ಅನಗತ್ಯ ಹೊರ ಹೋಗದಂತೆ ತಜ್ಞರು ಸಲಹೆ ನೀಡಿದ್ದಾರೆ.

























