ಬೆಂಗಳೂರು: ತನ್ನ ತಾಯಿಯ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದವನ ಪತ್ನಿ ಮತ್ತು ಅವಳ ಸಹೋದರನಿಗೆ ಚಾಕು ಚುಚ್ಚಿ ಕೊಲೆ ಮಾಡಿರುವ ಘಟನೆ ಪೀಣ್ಯಾದ ನೆಲಗೆದರನಹಳ್ಳಿಯಲ್ಲಿ ನಡೆದಿದೆ.
ಮೃತರನ್ನು ತಿಗಳರಪಾಳ್ಯದ ಯಮುನಾ (36) ಮತ್ತು ಆಕೆಯ ಸಹೋದರ ಸುದೀಪ್ (34) ಎಂದು ಗುರುತಿಸಲಾಗಿದೆ.
ಈ ಕೃತ್ಯವನ್ನು ಅಪರಾಧಿಗಳಾದ ಛಾಯಾ ಮತ್ತು ಆಕೆಯ ಅಪ್ರಾಪ್ತ ಪುತ್ರ ಎಸಗಿದ್ದಾಗಿದೆ. ಎಚ್ಎಂಟಿ ಲೇ ಔಟ್ನ ಛಾಯಾಳ ಮನೆಯಲ್ಲೇ ಈ ಹತ್ಯೆ ನಡೆದಿದ್ದು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಯಮುನಾ ಎಂಬವರ ಗಂಡ ಮಲ್ಲೇಗೌಡನಿಗೆ ಮತ್ತು ಎದುರು ಮನೆಯ ಛಾಯಾಳಿಗೆ ಅಕ್ರಮ ಸಂಬಂಧ ಇತ್ತು. ಈ ಬಗ್ಗೆ ಯಮುನಾ ಅವರು ತನ್ನ ಗಂಡನಿಂದ ದೂರ ಇರುವಂತೆ ಛಾಯಾಳಿಗೆ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದರು. ಜೊತೆಗೆ ಈ ಬಗ್ಗೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲೂ ಯಮುನಾ ದೂರು ದಾಖಲು ಮಾಡಿದ್ದರು.
ಆದರೆ ಪತಿ ಮತ್ತು ಛಾಯಾ ನಡುವಿನ ಅಕ್ರಮ ಸಂಬಂಧ ಮತ್ತೆ ಮುಂದುವರಿದಿದೆ. ಪತಿಯಿಂದ ದೂರ ಇರುವಂತೆ ಸೂಚಿಸಿದರೂ ಮತ್ತೆ ಸಂಬಂಧ ಮುಂದುವರೆದ ಬಗ್ಗೆ ಯಮುನಾ ಮತ್ತು ಛಾಯಾ ನಡುವೆ ಮತ್ತೆ ಗಲಾಟೆ ನಡೆದಿದೆ. ಇದರಿಂದ ಕೆರಳಿದ್ದ ಛಾಯಾಳ ಪುತ್ರ ಯಮುನಾಗೆ ಕರೆ ಮಾಡಿ ಮನೆಗೆ ಕರೆಸಿಕೊಂಡಿದ್ದಾನೆ. ಯಮುನಾ ತನ್ನ ಸಹೋದರನ ಜೊತೆ ಛಾಯಾ ಮನೆಗೆ ಹೋಗಿದ್ದಾರೆ.
ಈ ಸಮಯದಲ್ಲಿ ಅಲ್ಲಿ ಚರ್ಚೆ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಛಾಯಾಳ ಮಗ ಅಡುಗೆ ಮನೆಯಿಂದ ಚಾಕು ತಂದು ಯಮುನಾಗೆ ಚುಚ್ಚಿದ್ದಾನೆ. ಸುದೀಪ್ಗೂ ಇರಿದಿದ್ದಾನೆ. ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

























