ಉಡುಪಿ: ಜೀವನದಲ್ಲಿ ಸೋತು ಹೋದ ತಾಯಿಯೊಬ್ಬಳು ತನ್ನ ಐದು ವರ್ಷದ ಹೆಣ್ಣು ಮಗುವನ್ನು ಉಡುಪಿ ಬಸ್ಸು ನಿಲ್ದಾಣದಲ್ಲಿ ತ್ಯಜಿಸಿದ್ದು, ಬಳಿಕ ಅಕ್ಕ ಪಡೆ ಆ ನೊಂದ ತಾಯಿ ಮತ್ತು ಏನೂ ಅರಿಯದ ಮಗುವನ್ನು ಒಂದುಗೂಡಿಸಿರುವ ಘಟನೆ ನಡೆದಿದೆ.
ಮೂಲತಃ ಗದಗ ಜಿಲ್ಲೆಯವರಾದ ತಾಯಿ ಮಗುವಿನ ಕಣ್ಣೀರ ಕಥೆ ಇದು. ಮನೆಗೆ ಆಧಾರವಾಗಿದ್ದ ಯಜಮಾನನನ್ನು ಕಳೆದುಕೊಂಡು ಅನಾಥವಾದ ಮಹಿಳೆ ತನ್ನ ಐದು ವರ್ಷದ ಮಗುವಿನ ಜೊತೆಗೆ ಬದುಕು ಕಟ್ಟಿಕೊಳ್ಳುವ ಸಲುವಾಗಿ ಉಡುಪಿಗೆ ಬಂದಿದ್ದಳು. ಆದರೆ ಇಲ್ಲಿ ಆಕೆಗೆ ಕೆಲಸವೇನೋ ಸಿಕ್ಕಿತ್ತು, ಆದರೆ ಇರಲು ವಸತಿ ಇಲ್ಲದೆ ಬಸ್ ತಂಗುದಾಣದಲ್ಲೇ ಇರುವ ಸ್ಥಿತಿ ನಿರ್ಮಾಣವಾಗಿತ್ತು. ಬದುಕಿನಲ್ಲಿ ಗೆಲ್ಲಲು ಬಂದಾಕೆ ಸಮಾಜದಲ್ಲಿ ಸೋತು ನನ್ನ ಮಗಳಿಗಾದರೂ ಒಳ್ಳೆ ಭವಿಷ್ಯ ದೊರೆಯಲಿ ಎಂಬ ಆಸೆಯಿಂದ ಬಸ್ಸ್ಚ್ಯಾಂಡ್ನಲ್ಲೇ ಮಗುವನ್ನು ತ್ಯಜಿಸಿ ಹೋಗಿದ್ದಾರೆ.
ಬನ್ನಂಜೆ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಆದರೆ ಈ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದು ಸರಿಯಾದ ಸಮಯಕ್ಕೆ ಬಂದ ಅಕ್ಕ ಪಡೆ, ತಾಯಿ ಮಗುವನ್ನು ಒಂದಾಗಿಸಿದೆ. ಮಗುವನ್ನು ತ್ಯಜಿಸಿ ಎಲ್ಲೋ ಕಣ್ಣೀರು ಹಾಕುತ್ತಿದ್ದ ತಾಯಿಯನ್ನು ಪತ್ತೆಹಚ್ಚಿ ದೊಡ್ಡಣಗುಡ್ಡೆಯ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿದೆ.
ಸಮಿತಿಯ ಆದೇಶದಂತೆ ಸದ್ಯ ಲಕ್ಷ್ಮೀ ನಗರದ ಕೃಷ್ಣಾನುಗ್ರಹ ದತ್ತು ಸ್ವೀಕಾರ ಕೇಂದ್ರದಲ್ಲಿ ಮಗುವಿಗೆ ಸುರಕ್ಷಿತ ಪುನರ್ವಸತಿ ಕಲ್ಪಿಸಲಾಗಿದೆ. ಸದ್ಯ ತಾಯಿ ಮಗು ಇಬ್ಬರೂ ಸುರಕ್ಷಿತವಾಗಿದ್ದಾರೆ.



























