ಇವುಗಳಿಗೆಲ್ಲ ನೀವು ಕ್ಷಮೆ ಯಾಚಿಸುವುದು ಯಾವಾಗ ಎಂದು ಕೇಳಿದ ಬಿಜೆಪಿ
ಬೆಂಗಳೂರು : ಕಳೆದ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಬೃಹತ್ ಪ್ರಮಾಣದ ಮತ ವಂಚನೆಯಾಗಿದೆ ಎಂದು ಆರೋಪಿಸಿ ಇಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಕರ್ನಾಟಕ ಬಿಜೆಪಿ 13 ಪ್ರಶ್ನೆಗಳನ್ನು ಕೇಳುವ ಮೂಲಕ ತಿರುಗೇಟು ನೀಡಿದೆ.
- ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ಕಾಂಗ್ರೆಸ್ನ ಚುನಾವಣೆಯ ಖರ್ಚಿಗಾಗಿ ಕರ್ನಾಟಕದ ಮಹರ್ಷಿ ವಾಲ್ಮೀಕಿ ನಿಗಮದ 187 ಕೋಟಿ ರೂ. ಅಕ್ರಮವಾಗಿ ವರ್ಗಾಯಿಸಿ ದುರ್ಬಳಕೆ ಮಾಡಿಕೊಂಡ ಹಗರಣವನ್ನು ಇ.ಡಿ ಬಯಲು ಮಾಡಿದೆ. ಈ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಂದ್ರ ಅವರ ರಾಜೀನಾಮೆ ಹೊರತು ಬೇರೆ ಯಾವುದೇ ಕ್ರಮಗಳನ್ನು ನಿಮ್ಮ ಸರ್ಕಾರ ಕೈಗೊಂಡಿಲ್ಲ. ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಿದ್ದ ನಿಧಿಯನ್ನು ಕಾಂಗ್ರೆಸ್ ತನ್ನ ಪಾರ್ಟಿ ಫಂಡ್ಗೆ ಬಳಸಿದಕ್ಕಾಗಿ ನೀವುಕ್ಷಮೆಯಾಚಿಸುವುದಿಲ್ಲವೇ?
- ಮುಡಾ ಹಗರಣ, ಕಾರ್ಮಿಕ ಕಿಟ್ ಹಗರಣ, ವಸತಿ ಹಗರಣ, ಅಬಕಾರಿ ಲೈಸೆನ್ಸ್ ನವೀಕರಣ ಹಗರಣ, ವೈನ್ ವ್ಯಾಪಾರಿಗಳಿಂದ 200 ಕೋಟಿ ರೂ.ಲಂಚಕ್ಕೆ ಬೇಡಿಕೆ ಸೇರಿದಂತೆ ನಿಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಇದೇನಾ ನೀವು ದ್ವೇಷದ ಅಂಗಡಿಯಲ್ಲಿ ತೆರೆದ ಭ್ರಷ್ಟಾಚಾರದ ಮಾರುಕಟ್ಟೆ…?
*ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಾಗಿದ್ದ 40 ಸಾವಿರ ಕೋಟಿ ರೂ. ಅನುದಾನವನ್ನು ಅಲ್ಪಸಂಖ್ಯಾತರ ಕಲ್ಯಾಣಕ್ಕೆ ವಿನಿಯೋಗಿಸುವ ಮೂಲಕ ನಿಮ್ಮ ಸರ್ಕಾರ ಪರಿಶಿಷ್ಟರಿಗೆ ಮಹಾದ್ರೋಹ ಎಸಗಿದೆ. ನೀವು ನಮ್ಮ ಪರಿಶಿಷ್ಟ ಸಮುದಾಯದ ಸಹೋದರ-ಸಹೋದರಿಯರ ಬಳಿ ಯಾವಾಗ ಕ್ಷಮೆಯಾಚಿಸುತ್ತಿರಿ ಮತ್ತು ಅವರ ಹಣವನ್ನು ಯಾವಾಗ ಹಿಂದಿರುಗಿಸುತ್ತೀರಿ ಎಂದು ಹೇಳುವಿರಾ?
*ನಿಮ್ಮ ಸರ್ಕಾರದ ಡಿಸಿಎಂ ಡಿ.ಕೆ.ಶಿವಕುಮಾರ್ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಲು ಸಂವಿಧಾನವನ್ನೇ ಬದಲಾಯಿಸುತ್ತಾರಂತೆ. ನಿಮ್ಮ ಡಿಸಿಎಂ ಹೇಳಿಕೆಗೆ ನಿಮ್ಮ ಸಹಮತವಿದೆಯೇ? ಬಾಬಾ ಸಾಹೇಬ್ ಅಂಬೇಡ್ಕರ್ ವಿರಚಿತ ಸಂವಿಧಾನವನ್ನು ಬದಲಾಯಿಸಲು ನೀವು ಮಾಡಿದ ಪ್ರಯತ್ನಗಳಿಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸುವಿರಾ?
*ನಿಮ್ಮ ಪಕ್ಷ 2023ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ವಿದ್ಯುತ್, ಹಾಲು, ಇಂಧನ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿ ಪ್ರತಿಯೊಬ್ಬ ಕನ್ನಡಿಗನ ಬದುಕು ದುಸ್ತರವಾಗಿದೆ. ಜನಸಾಮಾನ್ಯರಿಗೆ ಬೆಲೆಯೇರಿಕೆಯ ಬರೆ ಎಳೆದ ನೀವು, ಅವರ ಬಳಿ ಕ್ಷಮೆಯಾಚಿಸುವುದಿಲ್ಲವೇ?
- ಕನ್ನಡ ಓದಲು, ಬರೆಯಲು ಬಾರದ ಮಂತ್ರಿಗೆ ಶಿಕ್ಷಣ ಸಚಿವನ ಪಟ್ಟ ನೀಡಿದ ಪರಿಣಾಮ ಕರ್ನಾಟಕದ ಶಿಕ್ಷಣ ಇಲಾಖೆ ಬೋರಲು ಬಿದ್ದಿದೆ. ಮಕ್ಕಳಿಗೆ ಶೂ, ಸಾಕ್ಸ್, ಸಮವಸ್ತ್ರ ಸಹ ನೀಡಲು ಬೊಕ್ಕಸದಲ್ಲಿ ದುಡ್ಡಿಲ್ಲದಷ್ಟು ಸರ್ಕಾರ ದಿವಾಳಿಯಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ತುಂಬಿ ತುಳುಕುತ್ತಿದ್ದ ಬೊಕ್ಕಸವನ್ನು ಬರಿದು ಮಾಡಿ ಕರ್ನಾಟಕವನ್ನು ದಿವಾಳಿ ಮಾಡಿರುವ ನೀವು ಈ ಬಗ್ಗೆ ಕನ್ನಡಿಗರ ಕ್ಷಮೆಯಾಚಿಸುತ್ತೀರಾ?
- ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಾದಕ ದ್ರವ್ಯ ಮತ್ತು ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಿವೆ. ಗುಜರಾತ್ ಎಟಿಎಸ್ ಬೆಂಗಳೂರಿನಲ್ಲಿ ಅಡಗಿಕೊಂಡಿದ್ದ ಅಲ್ ಖೈದಾ ಉಗ್ರನನ್ನು ಬಂಧಿಸಿದೆ. ಮುಂಬೈ ಪೊಲೀಸರು ಮೈಸೂರಿನಲ್ಲಿ ಮಾದಕ ದ್ರವ್ಯ ತಯಾರಿಕಾ ಘಟಕವನ್ನು ಪತ್ತೆ ಹಚ್ಚಿದ್ದಾರೆ. ಆದರೆ ಇದಾವುದು ಕರ್ನಾಟಕ ಪೊಲೀಸರ ಗಮನಕ್ಕೆ ಬಂದಿಲ್ಲ. ನಿಮ್ಮ ಸರ್ಕಾರದ ಆಂತರಿಕ ಭದ್ರತಾ ಲೋಪ ಮತ್ತು ಗುಪ್ತಚರ ವೈಫಲ್ಯಗಳ ಬಗ್ಗೆ ನೀವು ಕ್ಷಮೆಯಾಚಿಸುವುದಿಲ್ಲವೇ?
*ನಿಮ್ಮ ಸರ್ಕಾರದ ಆಡಳಿತದಲ್ಲಿ ಎಸ್ಟಿ ಮತ್ತು ಹಿಂದುಳಿದ ಸಮುದಾಯದ ಮಹಿಳೆಯರ ಮೇಲಿನ ದೌರ್ಜನ್ಯ ಮಿತಿ ಮೀರಿದೆ. ಬೆಳಗಾವಿ ಮತ್ತು ಬಾಗಲಕೋಟೆಯಲ್ಲಿ ತಳ ಸಮುದಾಯದ ಮಹಿಳೆಯರ ಮೇಲೆ ಮಾನವ ಕುಲ ತಲೆತಗ್ಗಿಸುವಂತಹ ಪೈಶಾಚಿಕ ಘಟನೆ ನಡೆದಿವೆ. ಆ ಮಹಿಳೆಯರಿಗೆ ನಿಮ್ಮ ಸರ್ಕಾರದಿಂದ ಇದುವರೆಗೂ ನ್ಯಾಯವು ದೊರೆತಿಲ್ಲ, ಆರೋಪಿಗಳ ಬಂಧನವೂ ಆಗಿಲ್ಲ. ಮಹಿಳೆಯರ ಮೇಲಾದ ಈ ದೌರ್ಜನ್ಯಗಳ ಬಗ್ಗೆ ನೀವು ಮೌನ ಮುರಿಯುವುದು ಯಾವಾಗ?
- ಕೇವಲ ವೋಟ್ ಬ್ಯಾಂಕ್ ಕಾಪಾಡಿಕೊಳ್ಳುವ ಸಲುವಾಗಿ ಡಿಜೆ ಹಳ್ಳಿ, ಕೆಜಿ ಹಳ್ಳಿ ಮತ್ತು ಉದಯಗಿರಿಯಲ್ಲಿ ನಡೆದ ಹಿಂಸಾತ್ಮಕ ಗಲಭೆಗಳಲ್ಲಿ ಭಾಗಿಯಾಗಿದ್ದ ನೂರಾರು ಜನರ ವಿರುದ್ಧದ ಪ್ರಕರಣಗಳನ್ನು ನಿಮ್ಮ ಸರ್ಕಾರ ಹಿಂತೆಗೆದುಕೊಂಡಿದೆ. ನಿಮ್ಮ ಬೆಂಬಲ ಕಾನೂನನ್ನು ಉಲ್ಲಂಘಿಸಿದವರ ಪರವೋ ಅಥವಾ ಕಾನೂನನ್ನು ಪಾಲಿಸಿದವರ ಪರವೋ? ಭಯೋತ್ಪಾದಕ ಗಲಭೆಕೋರರಿಗೆ ಬೆಂಬಲ ನೀಡಿದ ನೀವು ನಾಡಿನ ಜನರ ಕ್ಷಮೆಯಾಚಿಸುವುದಿಲ್ಲವೇ?
- ಕಾಳಸಂತೆಯಲ್ಲಿ ಗೊಬ್ಬರ ಮಾರಾಟ ಸೇರಿದಂತೆ ನಿಮ್ಮ ಸರ್ಕಾರದ ರೈತ ವಿರೋಧಿ ಧೋರಣೆಯಿಂದ ಅನೇಕ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಷ್ಟಾದರೂ ನಿಮ್ಮ ಸಚಿವರು ಮಾತ್ರ ನಾಟ್ ರೀಚೆಬಲ್! ಈ ಬಗ್ಗೆ ನೀವು ನಾಡಿನ ಅನ್ನದಾತರ ಕ್ಷಮೆಯಾಚಿಸುವುದಿಲ್ಲವೇ?
- ಸಿಲಿಕಾನ್ ಸಿಟಿ ಬೆಂಗಳೂರು ಇಂದು ಅಕ್ಷರಶಃ ರಸ್ತೆ ಗುಂಡಿಗಳಲ್ಲಿ ಮುಳುಗಿದೆ. ನಿಮ್ಮ ಬ್ರ್ಯಾಂಡ್ ಬೆಂಗಳೂರು ಯೋಜನೆ ಬೆಂಗಳೂರನ್ನು ಬ್ಯಾಡ್ ಬೆಂಗಳೂರನ್ನಾಗಿಸುತ್ತಿದೆ. ಅರ್ಧಂಬರ್ಧ ಫ್ಲೈಓವರ್ಗಳು, ಪಾಳುಬಿದ್ದ ಪಾದಚಾರಿ ಮಾರ್ಗಗಳು, ಗುಂಡಿಯೊಳಗಿನ ರಸ್ತೆಗಳು ಹೀಗೆ ಬೆಂಗಳೂರು ಸಂಪೂರ್ಣ ಹಾಳಾಗುತ್ತಿದೆ. ಡಿಸಿಎಂ ಶಿವಕುಮಾರ್ ಅವರಿಗೆ ಬೆಂಗಳೂರಿನ ಅಭಿವೃದ್ಧಿಗಿಂತ ತಮ್ಮ ಮುಖ್ಯಮಂತ್ರಿಯ ಕುರ್ಚಿ ಮೇಲೆ ಹೆಚ್ಚು ಗಮನ. ಬೆಂಗಳೂರನ್ನು ನರಕವನ್ನಾಗಿಸಿದಕ್ಕೆ ಬೆಂಗಳೂರಿಗರ ಬಳಿ ನೀವು ಕ್ಷಮೆಯಾಚಿಸುವುದಿಲ್ಲವೇ?
- ಆರ್ಸಿಬಿ ವಿಜಯೋತ್ಸವದ ಸಮಯದಲ್ಲಿ ಪೊಲೀಸರ ಎಚ್ಚರಿಕೆಯನ್ನು ಕಡೆಗಣಿಸಿ ಸಮಾರಂಭ ಆಯೋಜಿಸಿದ್ದಕ್ಕೆ ಹಾಗೂ ಕಾಂಗ್ರೆಸ್ಸಿಗರ ಫೋಟೊ ಹುಚ್ಚಿಗೆ ಅಮಾಯಕ 11 ಜನ ಬಲಿಯಾಗಿದ್ದಾರೆ. ಕಾಂಗ್ರೆಸ್ ಸರ್ಕಾರದ ಪ್ರಾಯೋಜಿತ ಈ ಕೊಲೆಗೆ ನೀವು ಕನ್ನಡಿಗರ ಬಳಿ ಕ್ಷಮೆಯಾಚಿಸುವುದಿಲ್ಲವೇ?
- ಹಾಲು-ಮೊಸರು-ವಿದ್ಯುತ್-ನೋಂದಣಿ ಶುಲ್ಕ ಹೀಗೆ ಪ್ರತಿಯೊಂದರ ದರ ನಿಮ್ಮ ಕಾಂಗ್ರೆಸ್ ಸರ್ಕಾರದ ಆಳ್ವಿಕೆಯಲ್ಲಿ ದ್ವಿಗುಣಗೊಂಡಿದೆ. ಬಡವರು ಹಾಗೂ ಮಧ್ಯಮ ವರ್ಗದವರಿಗೆ ಬೆಲೆಯೇರಿಕೆ ಬರೆ ಎಳೆದ ನೀವು ಅವರ ಬಳಿ ಕ್ಷಮೆಯಾಚಿಸುವುದಿಲ್ಲವೇ?
























