ಪುತ್ತೂರು: ಸಮುದಾಯದ ಸಂಘಟನೆ, ಸಮಾಜ ಬಲಿಷ್ಟವಾಗಲು ಗುರುಗಳನ್ನು ಮುಂದಿಟ್ಟುಕೊಳ್ಳಬೇಕು. ಇದರಿಂದ ಗುರಿಯನ್ನು ತಲುಪಬಹುದು ಎಂದ ಅವರು ವಿಚಾರ ಮಾಡುವ, ನೋಡುವ, ಕೇಳುವ ಶಕ್ತಿ ಹಾಗೂ ಸಮಾಜ ಸೇವೆ, ಧರ್ಮಸೇವೆ ಮಾಡಲು ಮಾನವನಿಗೆ ಮಾತ್ರ ಸಾಧ್ಯ ಎಂದು ಮಂಗಳೂರು ಶಾಖಾ ಮಠದ ಶ್ರೀ ಡಾ| ಧರ್ಮಪಾಲನಾಥ ಸ್ವಾಮೀಜಿ ಹೇಳಿದರು.
ಜ. ೨೨ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಲ್ಲಿ ನಡೆಯಲಿರುವ ಶ್ರೀ ಕ್ಷೇತ್ರ ಆದಿ ಚುಂಚನಗಿರಿ ಮಠದ ಭೈರವೈಕ್ಯ ಶ್ರೀ ಡಾ| ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ೭೮ನೇ ಜಯಂತ್ಯೋತ್ಸವ ಸಂಸ್ಮರಣೆ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ ಮಾಡಿ, ವಲಯ ಮಟ್ಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಡಿ. ೧೧ರಂದು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪ್ರಾಣಿಗಳಿಗೆ ಸಮಾಜ ಸೇವೆ, ಧರ್ಮಸೇವೆ ಮಾಡಲು ಪ್ರಾಣಿಗಳಿಗೆ ಗೊತ್ತಿಲ್ಲವಾದರೂ, ಅವು ತಮ್ಮ ಧರ್ಮ ನಿಷ್ಠೆಯಿಂದ ತಮ್ಮ ಕಾರ್ಯಗಳನ್ನು ಚಾಚೂ ತಪ್ಪದೆ ಮಾಡುವ ಮೂಲಕ ತಮ್ಮ ಜೀವನವನ್ನು ಸಾರ್ಥಕ್ಯ ಮಾಡುತ್ತವೆ. ತಿಳುವಳಿಕೆ ಇರುವ ಮಾನವ ಏನು ಮಾಡುತ್ತಾನೆ? ಯಾವ ಸೇವೆ ಮಾಡುತ್ತಾನೆ ಎಂಬುದನ್ನು ಅರಿತು ಮಾಡುವ ಮೂಲಕ ಜೀವನ ಸಾರ್ಥಕ್ಯ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ಭೈರವೈಕ್ಯ ಶ್ರೀಗಳ ಜಯಂತ್ಯೋತ್ಸವದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು. ರಾಜ್ಯದ ಎಲ್ಲಾ ಭಾಗದ ಜನರು ಕಾರ್ಯಕ್ರಮ ನೋಡುವಾಗ ಪುತ್ತೂರಿನಲ್ಲಿ ಅದ್ಭುತವಾಗಿ ಕಾರ್ಯಕ್ರಮ ಮಾಡಿದ್ದಾರೆ ಎಂಬ ವಿಚಾರ ಬರಬೇಕೆಂದು ಹೇಳಿದರು.
ಜನಸಂಖ್ಯೆ, ವಾಹನಗಳ ಪಟ್ಟಿ ನೀಡಿ: ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಅಧ್ಯಕ್ಷರಾಗಿರುವ ಶಾಸಕ ಸಂಜೀವ ಮಠಂದೂರು ಮಾತನಾಡಿ, ವ್ಯಕ್ತಿತ್ವ ಹಾಗೂ ಸಮಾಜದ ಅಭ್ಯುದಯದ ದೃಷ್ಟಿಯಿಂದ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಶ್ರದ್ಧೆ, ಪ್ರಾಮಾಣಿಕತೆ ಮತ್ತು ಮಠದ ಮೇಲಿನ ಭಕ್ತಿಯಿಂದ ಈ ಕಾರ್ಯಕ್ರಮ ಆಯೋಜನೆಯಾಗಿದೆ. ಆದ್ದರಿಂದ ಕಾರ್ಯಕ್ರಮದ ಯಶಸ್ಸಿಗಾಗಿ ಗ್ರಾಮಗಳಿಂದ ಬರುವ ಜನರ ಸಂಖ್ಯೆಗಳು ಮತ್ತು ವಾಹನಗಳ ಪಟ್ಟಿಯನ್ನು ನೀಡುವಂತೆ ತಿಳಿಸಿದರು.
ಸಮಿತಿ ರಚನೆ: ಸಭೆಯಲ್ಲಿ ಜಯಂತ್ಯೋತ್ಸವ ಸಂಸ್ಮರಣಾ ವಲಯ ಸಮಿತಿ ರಚನೆ ಮಾಡಲಾಯಿತು. ಪುತ್ತೂರು ವಲಯಕ್ಕೆ ಸಂಬಂಧಿಸಿ ಸಂಚಾಲಕ, ಸಹ ಸಂಚಾಲಕ ಹಾಗೂ ವಲಯಕ್ಕೆ ಬರುವ ಕಸಬ ಸೇರಿದಂತೆ ಗ್ರಾಮಗಳಿಂದಲೂ ತಲಾ ಇಬ್ಬರನ್ನು ಸಮಿತಿಗೆ ಸೇರಿಸಲಾಯಿತು. ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಉಪಾಧ್ಯಕ್ಷ ಚಿದಾನಂದ ಬೈಲಾಡಿ ಅವರು ಸಮಿತಿ ರಚನೆ ಮಾಡಿದರು. ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡರವರು ಪಟ್ಟಿ ಘೋಷಣೆ ಮಾಡಿದರು.
























