ಪುತ್ತೂರು : ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಅರ್ಪಿಸುವ “ನರ್ತನಾವರ್ತನ-2023” ಮಾ.5 ಭಾನುವಾರ ಸಂಜೆ 5.30 ಕ್ಕೆ ನಗರದ ಜೈನ ಭವನದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ನೃತ್ಯಗುರು ವಿದುಷಿ ಪ್ರೀತಿಕಲಾ ತಿಳಿಸಿದ್ದಾರೆ.
ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ಆರು ವರ್ಷಗಳಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಾ ಬಂದಿದ್ದು, ಈ ಬಾರಿ 7ನೇ ವರ್ಷದ ಕಾರ್ಯಕ್ರಮವಾಗಿದೆ. ಈ ಬಾರಿ ನರ್ತನಾವರ್ತನದಲ್ಲಿ ಭರತನಾಟ್ಯ ಪ್ರಸ್ತುತಿಯನ್ನು ರೆಂಜಿತ್ ಮತ್ತು ವಿಜ್ಞಾ ಚೆನ್ನೈ ಮಾಡಲಿದ್ದಾರೆ. ಅವರಿಗೆ ಹಿಮ್ಮೇಳದಲ್ಲಿ ಕೆ.ಎಸ್.ಬಾಲಕೃಷ್ಣನ್ ನಟುವಾಂಗದಲ್ಲಿ, ಬಿನು ವೇಣುಗೋಪಾಲ್ ಗಾಯನ, ಪಿ.ಕೆ.ಶಿವಪ್ರಸಾದ್ ಮೃದಂಗ, ಟಿ.ವಿ.ಸುಕನ್ಯಾ ಪಿಟೀಲುನಲ್ಲಿ ಸಾಥ್ ನೀಡಲಿದ್ದಾರೆ. ಮಂಗಳೂರಿನ ದೇವ್ ಪ್ರೋ ಸೌಂಡ್ಸ್ ಧ್ವನಿ ಮತ್ತು ಬೆಳಕು ಹಾಗೂ ಪುತ್ತೂರಿನ ಭಾವನಾ ಕಲಾ ಆರ್ಟ್ಸ್ ರಂಗಾಲಂಕಾರ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.

ಭರತನಾಟ್ಯ ಪ್ರದರ್ಶನದ ಮೊದಲು ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮಂಗಳೂರಿನ ಶಾಂತಲಾ ನಾಟ್ಯ ಪ್ರಶಸ್ತಿ ಪುರಸ್ಕೃತ ಗುರು ಶ್ರೀ ಉಳ್ಳಾಲ ಮೋಹನ ಕುಮಾರ್ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಮುಖ್ಯ ಅಭ್ಯಾಗತರಾಗಿ ದ್ವಾರಕಾ ಸಮೂಹ ಸಂಸ್ಥೆಗಳ ಮ್ಯಾನೆಜಿಂಗ್ ನಿರ್ದೇಶಕ ಗೋಪಾಲಕೃಷ್ಣ ಭಟ್ ಎ. ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮಂಗಳೂರು ಉರ್ವದ ನಾಟ್ಯಾರಾಧನಾ ಮತ್ತು ಯಕ್ಷಾರಾಧನ ಕಲಾಕೇಂದ್ರದ ನಿರ್ದೇಶಕಿ ವಿದುಷಿ ಸುಮಂಗಲಾ ರತ್ನಾಕರ್ ಅವರಿಗೆ ಕಲಾಶ್ರಯ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶ, ನೃತ್ಯಗುರು ವಿದ್ವಾನ್ ಬಿ.ದೀಪಕ್ ಕುಮಾರ್, ನೃತ್ಯಗುರು ವಿದ್ವಾನ್ ಗಿರೀಶ್ ಕುಮಾರ್ ಉಪಸ್ಥಿತರಿದ್ದರು.
























