ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಚಂಪಾಷಷ್ಟಿ ಜಾತ್ರೋತ್ಸವ ನಡೆಯುವ ಸಂದರ್ಭ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಕ್ಷೇತ್ರಕ್ಕೆ ಆಗಮಿಸುವ ಹಿನ್ನಲೆಯಲ್ಲಿ ಶುಚಿತ್ವ ವಹಿಸುವಂತೆ ವ್ಯಾಪಾರಿಗಳಿಗೆ ಸೂಚನೆ ನೀಡಲಾಗಿದೆ.
ಆರೋಗ್ಯ ಹಾಗೂ ಶುಚಿತ್ವ ಕಾಪಾಡುವ ದೃಷ್ಟಿಯಿಂದ ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾl ತ್ರಿಮೂರ್ತಿ ಅವರ ಸೂಚನೆಯಂತೆ ಹಿರಿಯ ಆರೋಗ್ಯ ನಿರೀಕ್ಷಕ ಬಸವರಾಜ್ ಹಾಗೂ ಆರೋಗ್ಯ ನಿರೀಕ್ಷಕ ಉಮ್ಮರ್ ಖಾನ್ ನೋಟೀಸ್ ನೀಡುವ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಜಾತ್ರೋತ್ಸವ ಸಂದರ್ಭದಲ್ಲಿ ಬೇಕರಿ, ಸಣ್ಣ ಚಹಾದ ಅಂಗಡಿ, ಸಣ್ಣ ಪುಟ್ಟ ತಿಂಡಿ ತಿನಿಸು ಅಂಗಡಿ ಹಾಗೂ ಹೊಟೇಲ್ಗಳಿಗೆ ಭೇಟಿ ನೀಡಿ ತಮ್ಮ ವಠಾರವನ್ನು ಶುಚಿಯಾಗಿ ಇಟ್ಟುಕೊಳ್ಳಲು, ಸಾರ್ವಜನಿಕರಿಗೆ ಕುದಿಸಿ ಆರಿಸಿದ ನೀರನ್ನು ಒದಗಿಸುವುದು, ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಧೂಮಪಾನ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸುವುದು, ಧೂಮಪಾನ ನಿಷೇಧಿತ ಪ್ರದೇಶ ಎಂದು ಸೂಚಿಸುವ 60× 45 ಸೆಂ.ಮೀ ಗಾತ್ರದ ಫಲಕವನ್ನು ಕಡ್ಡಾಯವಾಗಿ ಅಳವಡಿಸುವುದು, ಆಹಾರ ಪದಾರ್ಥಗಳನ್ನು ತೆರೆದಿಟ್ಟು ಮಾರಾಟ ಮಾಡುವುದನ್ನು ನಿಷೇಧಿಸುವುದು, ಕತ್ತರಿಸಿದ ಹಣ್ಣು ಹಂಪಲುಗಳನ್ನು ತೆರೆದಿಟ್ಟು ಮಾರಾಟ ಮಾಡುವುದನ್ನು ನಿಷೇಧಿಸುವುದು, ಅಲ್ಲದೆ ತ್ಯಾಜ್ಯ ವಸ್ತುಗಳ ವಿಲೇವಾರಿ ಸರಿಯಾಗಿ ಮಾಡಬೇಕೆಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.
























