ಮನೆಯಲ್ಲಿದ್ದ ಗೃಹಿಣಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದಲ್ಲಿ ನಡೆದಿದೆ.
ಗೃಹಿಣಿ ಶ್ವೇತಾ (31) ಅನುಮಾನಾಸ್ಪದವಾಗಿ ಮೃತಪಟ್ಟಿರುವ ದುರ್ದೈವಿ. ಮೃತ ಗೃಹಿಣಿ ಪೋಷಕರಿಂದ ಪತಿಯ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ.
ಪತ್ನಿ ಶ್ವೇತಾ ಮೃತಪಟ್ಟ ಬಳಿಕ ತರಾತುರಿಯಲ್ಲಿ ಅಂತ್ಯಕ್ರಿಯೆಗೆ ಸಿದ್ದತೆ ನಡೆಸಿದ್ದ ಪತಿ. ಆದರೆ ಮನೆಯವರಿಗೆ ಮಗಳ ಸಾವಿನ ಬಗ್ಗೆ ಅನುಮಾನಗೊಂಡು ಅಂತ್ಯಕ್ರಿಯೆ ತಡೆದು ಶವ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಿದ್ದರು. ಆರೋಗ್ಯವಾಗಿ ಮಗಳು ಸುಖಾಸುಮ್ಮನೆ ಸಾವಿಗೀಡಾಗಲು ಸಾಧ್ಯವಿಲ್ಲ. ನಮ್ಮ ಮಗಳಿಗೆ ಪಾಯಿಸನ್ ಇಂಜೆಕ್ಷನ್ ಚುಚ್ಚಿ ಪತಿ, ಕುಟುಂಬಸ್ಥರೇ ಕೊಲೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ ಶ್ವೇತಾ ಪೋಷಕರು.
ಮೂರು ವರ್ಷದ ಹಿಂದೆಯಷ್ಟೆ ದರ್ಶನ್ ಜೊತೆ ವಿವಾಹವಾಗಿದ್ದ ಶ್ವೇತಾ. ಪತಿ ದರ್ಶನ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ. ನಾಲ್ಕು ದಿನಗಳ ಹಿಂದೆಯಷ್ಟೇ ಬೆಂಗಳೂರಿನಿಂದ ದೇವವೃಂದಕ್ಕೆ ಆಗಮಿಸಿದ್ದರು ದರ್ಶನ್ ಮತ್ತು ಶ್ವೇತಾ. ಆದರೆ ಇದ್ದಕ್ಕಿದ್ದಂತೆ ಹಾರ್ಟ್ ಅಟ್ಯಾಕ್ ಆಗಿ ಮೃತಪಟ್ಟಿದ್ದಾಳೆಂದು ಸಾವಿನ ಸುದ್ದಿ ಶ್ವೇತಾ ಪೋಷಕರಿಗೆ ತಿಳಿಸಿದ್ದ ದರ್ಶನ. ಪೋಷಕರು ಬರುವ ಮೊದಲೇ ಅಂತ್ಯಕ್ರಿಯೆಗೆ ತರಾತುರಿಯಲ್ಲಿ ಸಿದ್ಧತೆ ನಡೆಸಿದ್ದ ದರ್ಶನ್ ಹಾಗೂ ಆತನ ಪೋಷಕರು. ಆದರೆ ಶ್ವೇತಾ ಪೋಷಕರು ಅಂತ್ಯಕ್ರಿಯೆ ತಡೆದಿದ್ದಾರೆ. ಇದು ಸಾವಲ್ಲ, ಕೊಲೆಯಾಗಿದೆ ಎಂದು ಆರೋಪಿಸಿದ್ದಾರೆ. ಬಳಿಕ ಶ್ವೇತಾಳ ಮೃತದೇಹವನ್ನು ಆಸ್ಪತ್ರೆಗೆ ಕಳುಹಿಸಿದ್ದಾರೆ.
ಪತಿಯ ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತ್ನಿಗೆ ಇಂಜೆಕ್ಷನ್ ನೀಡಿ ಕೊಲೆ ಮಾಡಿದ್ದಾರೆಂದು ಆರೋಪಿಸಿರುವ ಶ್ವೇತಾ ಪೋಷಕರು. ಸದ್ಯ ಮೃತದೇಹ ಚಿಕ್ಕಮಗಳೂರಿನ ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಶವಪರೀಕ್ಷೆ ಬಳಿಕ ಕೊಲೆಯೋ ಹಾರ್ಟ್ ಅಟ್ಯಾಕ್ ಆಗಿ ಸಾವನ್ನಾಪ್ಪಿದ್ದಾರೆಯೋ ಎಂಬುದು ಗೊತ್ತಾಗಲಿದೆ. ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
























