ಪುತ್ತೂರು: ತೆಂಗಿನ ಮರದ ಮೌಲ್ಯವರ್ಧನೆ ಹಾಗೂ ಉತ್ಪಾದಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆ ‘ಕಲ್ಪವಿಕಾಸ’ ಯೋಜನೆಯನ್ನು ಆರಂಭಿಸಿದೆ ಎಂದು ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆ ಪುತ್ತೂರು ಶಾಖಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚೇತನ್ ತಿಳಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿ ತೆಂಗು ಬೆಳೆ ಪ್ರಮುಖ ಸ್ಥಾನಗಳನ್ನು ಪಡೆದಿದ್ದರೂ ಪ್ರಾಕೃತಿಕ ವಿಕೋಪ, ರೋಗಗಳು ಮುಂತಾದವುಗಳಿಗೆ ತುತ್ತಾಗಿ ಹಾನಿಗೊಳಗಾದ ತೆಂಗಿನ ಮರಗಳಿಗೆ ನ್ಯಾಯಯುತ ಪರಿಹಾರ ಸಿಗದೆ ರೈತ ಕಂಗೆಟ್ಟಿದ್ದಾನೆ. ಈ ನಿಟ್ಟಿನಲ್ಲಿ ರೈತರಿಗೋಸ್ಕರ ವಿನ್ಯಾಸಗೊಳಿಸಿದ ‘ಕಲ್ಪವಿಕಾಸ’ ಯೋಜನೆ ಆರಂಭಿಸಲಾಗಿದ್ದು, ತೆಂಗಿನ ಮರಗಳ ಖರೀದಿ ಹಾಗೂ ಪುನರುಜ್ಜೀವನಕ್ಕೆ ಹೆಚ್ಚಿನ ಒತ್ತು ನೀಡುವುದು ಯೋಜನೆಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಅರ್ಹ ಅನುತ್ಪಾದಕ ತೆಂಗಿನ ಮರಗಳನ್ನು ಸಂಸ್ಥೆ ಕಲ್ಪವಿಕಾಸ ಯೋಜನೆಯಡಿ ಖರೀದಿಸಿ ಮೌಲ್ಯವರ್ಧನೆಗೊಳಿಸಲು ತೀರ್ಮಾನಿಸಿದ್ದು, ತಮ್ಮಲ್ಲಿರುವ ಅನುತ್ಪಾದಕ ಹಾಗೂ ನೈಸರ್ಗಿಕವಾಗಿ ಹಾನಿಗೊಳಗಾದ ಮರಗಳನ್ನು ಪರಿಶೀಲಿಸಿ ಗರಿಷ್ಠ 2 ಸಾವಿರವರೆಗೆ ಪರಿಹಾರ ಪಡೆಯಬಹುದಾಗಿದೆ. ಈ ಯೋಜನೆಗೆ ನೋಂದಣಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಡಿ. 23 ಕೊನೆ ದಿನಾಂಕವಾಗಿದ್ದು, ಕೆಳಗೆ ನೀಡಿರುವ ಕ್ಯೂಆರ್ ಕೋಡ್ ಹಾಗೂ ವೆಬ್ಸೈಟ್ https://zfrmz.com/FMLTyJxWKIQSAoyljsuz ಲಿಂಕ್ ಮೂಲಕ ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ರೈತರು ನೋಂದಾಯಿಸಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಕುಸುಮಾಧರ, ಸಲಹಾ ಸಮಿತಿ ಸದಸ್ಯ ಕುಮಾರ್ ಪೆರ್ನಾಜೆ, ಡಾ.ರಾಜೇಶ್ ಬೆಜ್ಜಂಗಳ, ಲತಾ ಉಪಸ್ಥಿತರಿದ್ದರು.

























