ರನ್ವೇಗೆ ಅಪ್ಪಳಿಸಿದ ಇಳಿಯುತ್ತಿದ್ದ ವಿಮಾನದ ಹಿಂಭಾಗ
ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಿಮಾನ ಅವಘಡವೊಂದು ಸ್ವಲ್ಪದರಲ್ಲೇ ತಪ್ಪಿದೆ. ದೆಹಲಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಏರ್ ಇಂಡಿಯಾ ವಿಮಾನದ ಬಾಲವು ನೆಲಕ್ಕೆ ಅಪ್ಪಳಿಸಿದ್ದು, ಭಾರಿ ಅವಘಡ ತಪ್ಪಿದೆ.
ಗುರುವಾರ ಬೆಳಗ್ಗೆ 181 ಪ್ರಯಾಣಿಕರನ್ನು ಹೊತ್ತು ದೆಹಲಿಯಿಂದ ಆಗಮಿಸುತ್ತಿದ್ದ ಏರ್ ಇಂಡಿಯಾ AI2651 ವಿಮಾನ ಬೆಂಗಳೂರಿನಲ್ಲಿ ಲ್ಯಾಂಡಿಂಗ್ ಆಗುತ್ತಿತ್ತು. ಈ ವೇಳೆ ಇನ್ನೊಂದು ವಿಮಾನ ಅದೇ ರನ್ವೇಯಿಂದ ಟೇಕ್-ಆಫ್ ಆಗುತ್ತಿತ್ತು. ಇದರಿಂದಾಗಿ ಗಾಳಿಯಲ್ಲಿ ಅಸಮತೋಲನ ಉಂಟಾದಂತೆ ಕಂಡುಬಂದಿದೆ. ಕೂಡಲೇ ಪೈಲಟ್ ಮುನ್ನೆಚ್ಚರಿಕೆ ಕ್ರಮವಾಗಿ ಲ್ಯಾಂಡಿಂಗ್ ಕೈಬಿಟ್ಟು ವಿಮಾನವನ್ನು ಮತ್ತೆ ಟೇಕ್ ಆಫ್ ಮಾಡಲು ಯತ್ನಸಿದ್ದಾರೆ. ಈ ವೇಳೆ ವಿಮಾನದ ತಳಭಾಗದ ಹಿಂಭಾಗ ರನ್ವೇಗೆ ತಾಗಿದೆ ಎನ್ನಲಾಗಿದೆ.
ಘಟನೆಯ ನಂತರ ಪೈಲಟ್ ವಿಮಾನವನ್ನು ಸುರಕ್ಷಿತವಾಗಿ ರನ್ವೇಯಲ್ಲಿ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿ ಯಾವುದೇ ತೊಂದರೆಯಿಲ್ಲದೆ ಸುರಕ್ಷಿತವಾಗಿ ಕೆಳಗೆ ಇಳಿದಿದ್ದಾರೆ. ವಿಮಾನದಲ್ಲಿದ್ದ 181 ಪ್ರಯಾಣಿಕರು ಸುರಕ್ಷಿತವಾಗಿದ್ದು, ವಿಮಾನವನ್ನು ಸಂಪೂರ್ಣ ಪರಿಶೀಲನೆಗೆ ಒಳಪಡಿಸಲಾಗಿದೆ.
ಈ ಅಪಘಾತದ ಹಿನ್ನೆಲೆ ಬೆಂಗಳೂರಿನಿಂದ ದೆಹಲಿಗೆ ಮರಳಬೇಕಾಗಿದ್ದ AI2652 ವಿಮಾನವನ್ನು ರದ್ದುಗೊಳಿಸಲಾಗಿದೆ. ಪರ್ಯಾಯ ವಿಮಾನಗಳ ಮೂಲಕ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ. ಮತ್ತೊಂದೆಡೆ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ಅಧಿಕೃತ ತನಿಖೆಯನ್ನು ಆರಂಭಿಸಿದೆ.
























