ಮಂಗಳೂರು: ರಜೆಯ ಮೋಜು ಇಬ್ಬರು ವಿದ್ಯಾರ್ಥಿನಿಯರ ಪ್ರಾಣಕ್ಕೆ ಎರವಾದ ಘಟನೆ ಕಡಬದಲ್ಲಿ ಶುಕ್ರವಾರ ಸಂಜೆ ಸಂಭವಿಸಿದೆ. ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ನಾಲ್ವರಲ್ಲಿ ಇಬ್ಬರು ವಿದ್ಯಾರ್ಥಿನಿಯರು ನೀರಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಕಡಬದ ಕುಟ್ರುಪ್ಪಾಡಿ ಗ್ರಾಮದ ಕೊಲ್ಯದಕಟ್ಟ ಎಂಬಲ್ಲಿ ಗುಂಡ್ಯ ಹೊಳೆಯಲ್ಲಿ ಈ ದಾರುಣ ಘಟನೆ ನಡೆದಿದೆ. ಕುಟ್ರುಪ್ಪಾಡಿ ನಿವಾಸಿಗಳಾದ ಸುನೀತಾ (21), ಅರ್ಪಿತಾ (15) ಎಂಬ ವಿದ್ಯಾರ್ಥಿನಿಯರು ಮೃತಪಟ್ಟಿದ್ದಾರೆ.
ನಾಲ್ವರು ವಿದ್ಯಾರ್ಥಿನಿಯರು ಶಾಲೆ-ಕಾಲೇಜಿಗೆ ರಜೆ ಇರುವ ಕಾರಣ ಸಂಜೆ ಹೊತ್ತು ಈಜಾಡಲು ನದಿಗಿಳಿದಿದ್ದರು. ಈ ಪೈಕಿ ಸುನೀತಾ ಮತ್ತು ಅರ್ಪಿತಾ ನೀರಿನ ಆಳ ತಿಳಿಯದೆ ಮುಂದೆ ಮುಂದೆ ಹೋಗಿ ಮುಳುಗಿದ್ದು, ಅವರನ್ನು ರಕ್ಷಿಸುವ ಪ್ರಯತ್ನ ಫಲಕೊಡಲಿಲ್ಲ. ಇಬ್ಬರೂ ಒಂದೇ ಕುಟುಂಬದ ಯುವತಿಯರು.
ಸ್ಥಳೀಯರು ಇವರಿಬ್ಬರ ಮೃತದೇಹ ಹೊರ ತೆಗೆದರು. ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಕ್ಕಳ ಸಾವಿನಲ್ಲಿ ಯಾವುದೇ ಅನುಮಾನ ಇಲ್ಲ ಎಂಬುದಾಗಿ ಮೃತರ ಸಂಬಂಧಿಕರು ಹೇಳಿದ್ದಾರೆ. ಕರುಳ ಕುಡಿಗಳನ್ನು ಕಳೆದುಕೊಂಡ ಕುಟುಂಬದ ದುಃಖ ಮುಗಿಲುಮುಟ್ಟಿದೆ.
























