ಪುತ್ತೂರು: ವೈದಿಕ ಕಾರ್ಯಕ್ರಮ ಮುಗಿಸಿ ಮರಳುತ್ತಿದ್ದ ಪುರೋಹಿತರೊಬ್ಬರ ಕಾರನ್ನು ತಡೆದು ನಿಲ್ಲಿಸಿದ ಅಪರಿಚಿತನೊಬ್ಬ ಅವರನ್ನು ನಿಂದಿಸಿ, ಹಲ್ಲೆ ನಡೆಸಿದ ಘಟನೆ ಕಬಕದ ವಿದ್ಯಾಪುರ ಎಂಬಲ್ಲಿ ನಡೆದಿದೆ.
ಅರ್ಚಕ ಗಣೇಶ್ ವಿ.(39) ಎಂಬವರ ಮೇಲೆ ಹಲ್ಲೆ ನಡೆದಿದ್ದು, ಈ ಬಗ್ಗೆ ಅವರು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದಾರೆ.
ಮೇ 4 ರಂದು ತಾನು ಕಾರಿನಲ್ಲಿ ಕಲ್ಲಡ್ಕದ ಉಮಾಶಿವ ಕ್ಷೇತ್ರದಲ್ಲಿ ಕಾರ್ಯಕ್ರಮ ಮುಗಿಸಿ ಮರಳುತ್ತಿದ್ದಾಗ ವಿದ್ಯಾಪುರದಲ್ಲಿ ನನ್ನ ಮೇಲೆ ಹಲ್ಲೆ ನಡೆದಿದೆ. ಅಲ್ಲೇ ಸಮೀಪದ ಮನೆಯೊಂದರಲ್ಲಿ ಯಾವುದೋ ಕಾರ್ಯಕ್ರಮ ನಡೆಯುತ್ತಿದ್ದು ವಾಹನ ದಟ್ಟಣೆ ಮತ್ತು ಜನ ದಟ್ಟಣೆ ಇದ್ದ ಕಾರಣ ತಾನು ಕಾರನ್ನು ನಿಧಾನಕ್ಕೆ ಚಲಾಯಿಸಿಕೊಂಡು ಬರುತ್ತಿದ್ದೆ. ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ನನ್ನ ಕಾರನ್ನು ತಡೆದು ನಿಲ್ಲಿಸಿ, ಅವಾಚ್ಯವಾಗಿ ನಿಂದಿಸಿದ್ದು ಮಾತ್ರವಲ್ಲದೆ ಹಲ್ಲೆ ನಡೆಸಿದ್ದಾನೆ.
ಈ ಸಂದರ್ಭದಲ್ಲಿ ಕಾರಿನಿಂದ ಇಳಿದ ನನ್ನ ಮೇಲೆ ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದಾನೆ. ಜೊತೆಗೆ ಈ ಘಟನೆ ಬಗ್ಗೆ ಪೊಲೀಸ್ ದೂರು ನೀಡಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಸಹ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ
























