ಉಡುಪಿ: ಮಕ್ಕಳು ಪ್ರತಿದಿನವೂ ಶ್ರದ್ಧೆ, ದೃಢಸಂಕಲ್ಪ, ಕಾರ್ಯ ತತ್ಪರತೆಯಿಂದ ಓದುವುದರ ಮೂಲಕ ಶಿಕ್ಷಣದಲ್ಲಿ ಯಶಸ್ಸನ್ನು ಪಡೆಯಬಹುದು. ಅವರು ಕಿರಿಯರಿಗೆ ಮಾದರಿಯಾಗಿ ಬೆಳೆಯಬಹುದು ಎಂದು ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಇದರ ಅಧ್ಯಕ್ಷ ಪಾಂಡುರಂಗ ಪೈ ಸಿದ್ದಾಪುರ ಅಭಿಪ್ರಾಯಪಟ್ಟರು.
ಅವರು ಡ್ಯುಯಲ್ ಸ್ಟಾರ್ ಎಜುಕೇಶನ್ ಇನ್ಸ್ಟಿಟ್ಯೂಷನ್ ಅಮಾಸೆಬೈಲು ಇಲ್ಲಿಯ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ 614 ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನವನ್ನು ಪಡೆದಿರುವ ಪೃತ್ವಿಕ್ ಶೇಖರ್ ಪೂಜಾರಿ ಅವರ ಮನೆಯಲ್ಲಿ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಆಯೋಜಿಸಿದ ಅಂಗಳ – 2026 ಎಂಬ ಕಾರ್ಯಕ್ರಮದ ಅಡಿಯಲ್ಲಿ ಸನ್ಮಾನಿಸಿ ಮಾತನಾಡಿ, ಶಿಕ್ಷಣದಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿದಾಗ ಶಾಲೆ ಸಮಾಜ ಗೌರವಿಸುತ್ತದೆ ಆ ಗೌರವ ಹೆತ್ತವರಿಗೆ ಆನಂದವನ್ನು ತರುತ್ತದೆ ಎಂದು ಹೇಳಿದರು.
ಸಭೆಯಲ್ಲಿ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಉಪಾಧ್ಯಕ್ಷ ವಡ್ದರ್ಸೆ ಪ್ರಕಾಶ್ ಆಚಾರ್ಯ, ಪೋಷಕರಾದ ಶೇಖರ್ ಪೂಜಾರಿ, ವಸಂತಿ ಪೂಜಾರಿ, ರಾಮ ಪೂಜಾರಿ, ಮೋಹನ್ ನಾಯಕ್, ಗ್ರಾಮ ಪಂಚಾಯತ್ ಸದಸ್ಯ ಗಣೇಶ ಶೆಟ್ಟಿ ಮಠದ ಜಡ್ಡು ಉಪಸ್ಥಿತರಿದ್ದರು.
ವಡ್ಡರ್ಸೆ ಪ್ರಕಾಶ್ ಆಚಾರ್ಯ ಸ್ವಾಗತಿಸಿದರು, ಶಿಕ್ಷಕ ವಿಘ್ನೇಶ್ ಜಿ. ಎಲ್. ಅವರು ಸನ್ಮಾನ ಪತ್ರ ವಾಚಿಸಿದರು, ವಿದ್ಯಾ ಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಕಾರ್ಯದರ್ಶಿ ಮಹೇಶ್ ಹೈಕಾಡಿ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
























