ಪುತ್ತೂರು: ಮೊದಲು ಮದುವೆಯಾಗಿರುವ ಸಂಗತಿಯನ್ನು ರಹಸ್ಯವಾಗಿಟ್ಟು, ಎರಡನೇ ಮದುವೆ ಮಾಡಿಕೊಂಡ ವ್ಯಕ್ತಿಗೆ ಆತನ ಎರಡನೇ ಪತ್ನಿಯ ಕಡೆಯವರು ಮನೆಯೊಂದರಲ್ಲಿ ಕೂಡಿ ಹಾಕಿ, ಹಲ್ಲೆ ನಡೆಸಿದ್ದಾರೆ.
ಹಲ್ಲೆಗೊಳಗಾದ ವ್ಯಕ್ತಿಯನ್ನು ಕೆಮ್ಮಿಂಜೆಯ ಬೆಳ್ಳಗುಡ್ಡೆ ನಿವಾಸಿ ಮಹಮ್ಮದ್ ಅಶ್ರಫ್ (35) ಎಂದು ಗುರುತಿಸಲಾಗಿದೆ.
ಆರೋಪಿ ಅಶ್ರಫ್ಗೆ ಖತೀಜಮ್ಮ ಜೊತೆಗೆ ಮೊದಲೇ ಮದುವೆ ನಡೆದಿದ್ದರೂ, ಅದನ್ನು ರಹಸ್ಯವಾಗಿಟ್ಟು ಮೂಡಬಿದ್ರೆಯ ಐಸಮ್ಮ ಎಂಬವರ ಪುತ್ರಿ ರುಬಿಯಾ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದ. ಈ ವಿಚಾರ ತಿಳಿದ ಖತೀಜಮ್ಮ ಅಶ್ರಫ್ ವಿರುದ್ಧ ಪುತ್ತೂರು ಮಹಿಳಾ ಪೊಲೀಸರಿಗೆ ದೂರು ನೀಡಿದ್ದು, ಈ ಪ್ರಕರಣ ನ್ಯಾಯಾಲಯದಲ್ಲಿದೆ.
ಈ ವಿಷಯದಲ್ಲಿ ಎರಡನೇ ಪತ್ನಿ ರುಬಿಯಾಳ ತಾಯಿ ಐಸಮ್ಮ ಅಶ್ರಫ್ನನ್ನು ರುಬಿಯಾಳಿಂದ ಬೇರ್ಪಡಿಸುವ ಉದ್ದೇಶದಿಂದ ಅವರ ಜೊತೆಗೆ ಮೇ 1 ರಂದು ಅಶ್ರಫ್ನನ್ನು ರಾತ್ರಿ ವೇಳೆ ಕಿಡ್ನಾಪ್ ಮಾಡಿ, ವಿಟ್ಲದಲ್ಲಿರುವ ರುಬಿಯಾಳ ಅಣ್ಣನ ಮನೆಯ ಕೋಣೆಯೊಂದರಲ್ಲಿ ಕೂಡಿ ಹಾಕಿ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ಬಳಿಕ ಆತನನ್ನು ನೆಹರೂ ನಗರ ಸಮೀಪ ಬಿಟ್ಟು, ಜೀವ ಬೆದರಿಕೆ ಹಾಕಿ ತೆರಳಿದ್ದಾರೆ.
ಈ ಸಂಬಂಧ ಅಶ್ರಫ್ ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದಾರೆ.
























