ಮಹಿಳೆಯನ್ನು ಸೂಟ್ಕೇಸ್ನಲ್ಲಿ ತುಂಬಿಸಿ ಸಾಗಿಸಲೆತ್ನಿಸಿದ್ದ ಅಪರಾಧಿಗಳು
ಉಡುಪಿ : ನಾಲ್ಕು ವರ್ಷಗಳ ಹಿಂದೆ ಮಂಚಿಕುಮೇರಿಯಲ್ಲಿ ಮಹಿಳೆಯೊಬ್ಬರನ್ನು ಉಸಿರುಗಟ್ಟಿಸಿ ಕೊಲೆ ಮಾಡಲು ಪ್ರಯತ್ನಿಸಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಬೆಳ್ತಂಗಡಿ ನಿವಾಸಿಗಳಾದ ಮಿಥುನ್ ಹಾಗೂ ನಾಗೇಶ್ ಪೂಜಾರಿ ಜೀವಾವಧಿ ಶಿಕ್ಷೆಗೆ ಗುರಿಯಾದ ಆರೋಪಿಗಳು.
ಮಂಚಿಕುಮೇರಿ ನಿವಾಸಿ ರಮಾನಾಥ ರೈ ಮಣಿಪಾಲದ ಟೈಗರ್ ಸರ್ಕಲ್ ಬಳಿ ನಂದಿನಿ ಮಿಲ್ಕ್ ಪಾರ್ಲರ್ ನಡೆಸುತ್ತಿದ್ದು, 2022ರ ಫೆ.18ರಂದು ಅವರ ಪತ್ನಿ ಸುಮತಿ ಮನೆಯಲ್ಲಿ ಒಬ್ಬರೇ ಇದ್ದಾಗ ಸಂಜೆ 7 ಗಂಟೆ ಸುಮಾರಿಗೆ ಅವರ ಅಕ್ಕನ ಮಗ ಮಿಥುನ್ ಹಾಗೂ ಆತನ ಸ್ನೇಹಿತ ನಾಗೇಶ್ ಪೂಜಾರಿ ಮನೆಗೆ ಬಂದು ಕರೆಗಂಟೆ ಒತ್ತಿದ್ದಾರೆ. ಪರಿಚಿತರಾಗಿದ್ದರಿಂದ ಸುಮತಿ ಬಾಗಿಲು ತೆರೆದಿದ್ದಾರೆ. ಮನೆಗೆ ಒಳನುಗ್ಗಿದ ಇಬ್ಬರು ಆರೋಪಿಗಳು ಸುಮತಿ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಕುತ್ತಿಗೆಯನ್ನು ಹಿಸುಕಿದ್ದಾರೆ. ಪರಿಣಾಮವಾಗಿ ಸುಮತಿ ಪ್ರಜ್ಞಾಹೀನರಾಗಿದ್ದಾರೆ.
ನಂತರ ಆರೋಪಿಗಳು ಅವರನ್ನು ಚೀಲದಲ್ಲಿ ಹಾಕಿ ಸೂಟ್ಕೇಸಿನಲ್ಲಿ ತುಂಬಿಸಿ ಸ್ಥಳಾಂತರ ಮಾಡಲು ಯತ್ನಿಸುತ್ತಿದ್ದಾಗ, ರಮಾನಾಥ ರೈ ಹಾಗೂ ನೆರೆಹೊರೆಯವರು ಬಾಗಿಲು ತಟ್ಟಿದ ಹಿನ್ನೆಲೆಯಲ್ಲಿ ಆರೋಪಿಗಳು ಬಾಗಿಲು ತೆರೆದು ಓಡಿ ಹೋಗಲು ಪ್ರಯತ್ನಿಸಿದ್ದಾರೆ. ಆದರೆ ಸಾರ್ವಜನಿಕರು ಇಬ್ಬರನ್ನೂ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ನಂತರ ಸೂಟ್ಕೇಸನ್ನು ತೆರೆದು ನೋಡಿದಾಗ ಸುಮತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಕ್ಷಣ ಅವರನ್ನು ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಒಂದು ವಾರ ಚಿಕಿತ್ಸೆ ಬಳಿಕ ಅವರು ಚೇತರಿಸಿಕೊಂಡಿದ್ದಾರೆ.
ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್ ಗಂಗಣ್ಣವರ್ ಅವರು ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಿ, ಜೀವಾವಧಿ ಶಿಕ್ಷೆ ಹಾಗೂ ತಲಾ 20,000 ರೂ. ದಂಡ, ಕಲಂ 325ರಡಿ – 5 ವರ್ಷ ಕಠಿಣ ಶಿಕ್ಷೆ ಹಾಗೂ ತಲಾ 5,000ರೂ. ದಂಡ ವಿಧಿಸಿ ಆದೇಶ ನೀಡಿದ್ದಾರೆ. ಇದಲ್ಲದೆ, ವಸೂಲಾದ ದಂಡದಲ್ಲಿ 45,000ರೂ.ವನ್ನು ಗಾಯಾಳು ಸುಮತಿ ಅವರಿಗೆ ಪರಿಹಾರವಾಗಿ ನೀಡಲು ನ್ಯಾಯಾಲಯ ಆದೇಶಿಸಿದೆ.
























