ಕೊಂಬೆ ಬಿದ್ದು ವಾಹನಗಳು ಜಖಂ, ಗೋಡೆ ಕುಸಿದು ಕಾರುಗಳು ನಜ್ಜುಗುಜ್ಜು
ಮಂಗಳೂರು : ಬುಧವಾರ ಮುಂಜಾನೆ ಸುಮಾರು 3.30ರ ವೇಳೆಗೆ ಮಂಗಳೂರು ನಗರಾದ್ಯಂತ ಗುಡುಗು ಸಿಡಿಲಿನ ಜೊತೆಗೆ ಭಾರಿ ಮಳೆಯಾಗಿ ಸುಡುತ್ತಿರುವ ಇಳೆಗೆ ತಂಪೆರೆದಿದೆ. ಆದರೆ ಈ ಅಕಾಲಿಕ ಮಳೆಯಿಂದ ವಿವಿಧೆಡೆ ಹಲವು ಹಾನಿಗಳು ಸಂಭವಿಸಿವೆ.
ಭಾರಿ ಮಳೆ ಹಾಗೂ ಬೀಸಿದ ಬಿರುಗಾಳಿಯಿಂದ ನಗರದ ಚಮ್ಮಾರ ಗಲ್ಲಿಯ ಬಸವನಗುಡಿಯ ಅಶ್ವತ್ಥ ಕಟ್ಟೆಯಲ್ಲಿದ್ದ ಬೃಹತ್ ಅಶ್ವತ್ಥ ಮರದ ಕೊಂಬೆ ಮುರಿದು ಬಿದ್ದ ಪರಿಣಾಮ ಎರಡು ಮನೆಗಳು ಹಾಗೂ ಮೂರು ದ್ವಿಚಕ್ರ ವಾಹನಗಳಿಗೆ ಹಾನಿಯಾಗಿದೆ. ಕೊಂಬೆ ಅಡಿಯಲ್ಲಿ ಸಿಲುಕಿದ್ದ ಎರಡು ದ್ವಿಚಕ್ರ ವಾಹನಗಳಿಗೆ ಹಾನಿಯಾಗಿದೆ. ಎರಡು ದ್ವಿಚಕ್ರ ವಾಹನಗಳು ಸಂಪೂರ್ಣ ನಜ್ಜುಗುಜ್ಜಾಗಿವೆ. ಕೊಂಬೆ ಬಿದ್ದ ಪರಿಣಾಮ ಎರಡು ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಘಟನೆಯ ಹಿನ್ನೆಲೆಯಲ್ಲಿ ರಸ್ತೆ ಸಂಚಾರವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಅತ್ತಾವರದಲ್ಲಿ ಗೋಡೆ ಕುಸಿದು ಕಾರುಗಳು ಜಖಂ
ಅತ್ತಾವರದ ಅಯ್ಯಪ್ಪ ಮಂದಿರದ ಬಳಿ ತಡೆಗೋಡೆ ಕುಸಿದು ಬಿದ್ದು ಹಲವು ಕಾರುಗಳಿಗೆ ಹಾನಿಯಾಗಿದೆ. ಗೋಡೆಗೆ ಒತ್ತಿಕೊಂಡು ರಾತ್ರಿ ಹಲವು ಕಾರುಗಳನ್ನು ಪಾರ್ಕ್ ಮಾಡಲಾಗಿತ್ತು. ಈ ಕಾರುಗಳ ಮೇಲೆಯೇ ಗೋಡೆ ಕುಸಿದು ಬಿದ್ದಿದೆ.

























