ಬೆಂಗಳೂರು: ರಾಜ್ಯದ ಚಾರಣಕ್ಕೆ ಸೂಕ್ತ ಪ್ರದೇಶಗಳಲ್ಲಿ ಚಾರಣಿಗರಿಗೆ ಅಪಾಯ ಎದುರಾಗುವ ಪರಿಸ್ಥಿತಿ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊಸ, ಕಠಿಣ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ರಾಜ್ಯದಲ್ಲಿ ಈಗ 44 ಚಾರಣ ಪ್ರದೇಶ ಗಳಿದ್ದು, ಇದರಲ್ಲಿ ಶರಣ್ಯಾ ಎಂಬ ಯುವತಿ ಕಾಣೆಯಾದ ಕೊಡಗಿನ ತಡಿಯಾಂಡಮೋಳ್ ಮತ್ತು ಕೇರಳದ ಬಾಲಕಿ ಮೃತಪಟ್ಟ ಚಿಕ್ಕಮಗಳೂರಿನ ಚಾರಣ ಪ್ರದೇಶಗಳೂ ಸೇರಿವೆ. ಇಲ್ಲಿ ನಡೆದ ಎಲ್ಲಾ ಅಪಘಾತಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಚಾರಣಿಗರ ಸುರಕ್ಷತಾ ದೃಷ್ಟಿಯಿಂದ ಕರ್ನಾಟಕ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿರುವುದಾಗಿದೆ.
ಮಾರ್ಗಸೂಚಿಯಲ್ಲೇನಿದೆ?:
ಚಾರಣ ಹೋಗಲು ಬಯಸುವವರು ಮೊದಲು ಆನ್ಲೈನ್ ಮೂಲಕ ಬುಕ್ಕಿಂಗ್ ಮಾಡಿಕೊಳ್ಳಬೇಕು. ಗೈಡ್ನ ಹೊರತಾಗಿ ಟ್ರಕ್ಕಿಂಗ್ ಮಾಡುವಂತಿಲ್ಲ, ಹತ್ತು ಜನ ಚಾರಣಿಗರಿಗೆ ಒಬ್ಬ ಗೈಡ್ ಕಡ್ಡಾಯ. ಚಾರಣಿಗರ ಮೊಬೈಲ್ನಲ್ಲಿ ಟ್ರ್ಯಾಕಿಂಗ್ ಆ್ಯಪ್ ಇರಬೇಕು. ಗೈಡ್ಗಳ ಜೊತೆ ಜಿಪಿಎಸ್ ಕನೆಕ್ಷನ್ ಇರುವ ವಾಕಿಟಾಕಿ ಕಡ್ಡಾಯ. ಏಕಕಾಲಕ್ಕೆ 150 ಮಂದಿಗೆ ಮಾತ್ರ ಚಾರಣಕ್ಕೆ ಅವಕಾಶ. ಟಾರ್ಚ್, ಹೆಡ್ಲ್ಯಾಂಪ್ ಸೇರಿದಂತೆ ಅಗತ್ಯವಾದ ಸುರಕ್ಷತಾ ಕ್ರಮಗಳನ್ನು ಚಾರಣಿಗರು ಕಡ್ಡಾಯವಾಗಿ ಹೊಂದಿರಬೇಕು.

























