ಬೇಹುಗಾರಿಕೆ ಮಾಡುತ್ತಿದ್ದ 11 ಮಂದಿ ಸೆರೆ
ನವದೆಹಲಿ: ಇರಾನ್ ರಾಜಧಾನಿ ಟೆಹ್ರಾನ್ನ ಸಿಸಿ ಕ್ಯಾಮರಾ ಹ್ಯಾಕ್ ಮಾಡಿ ಪರಮೋಚ್ಚ ನಾಯಕ ಆಯತೊಲ್ಲಾ ಖಮೇನಿ ಮತ್ತು ಆಪ್ತರ ಮೇಲೆ ದೂರದಲ್ಲೆಲ್ಲೋ ಕುಳಿತು ಇಸ್ರೇಲ್ ಕಣ್ಣಿಟ್ಟಿದ್ದ ರೀತಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಕೂಡ ಭಾರತದ ಮೇಲೆ ಕಣ್ಣಿಟ್ಟಿದ್ದ ಆಘಾತಕಾರಿ ವಿಚಾರ ಬಯಲಾಗಿದೆ. 4 ರಾಜ್ಯಗಳ ಹಲವು ನಗರಗಳ ಆಯಕಟ್ಟಿನ ಜಾಗದಲ್ಲಿ ಭಾರತದ ಸೇನೆಯ ಚಲನವಲನಗಳನ್ನು ವೀಕ್ಷಿಸಲು ಪಾಕ್ ಸಿಸಿಟಿವಿ ಅಳವಡಿಸಿರುವುದು ಗೊತ್ತಾಗಿದೆ.
ನಿಷೇಧಿತ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ ಉಗ್ರ ಸಂಘಟನೆಯ ಸ್ಥಳೀಯ ಕಾರ್ಯಕರ್ತರನ್ನು ಬಳಸಿಕೊಂಡು ಕಾರ್ಯನಿರ್ವಹಿಸುತ್ತಿದ್ದ ಶಸ್ತ್ರಾಸ್ತ್ರ ಹಾಗೂ ಬೇಹುಗಾರಿಕಾ ಜಾಲವೊಂದನ್ನು ದೆಹಲಿ ಪೊಲೀಸರ ವಿಶೇಷ ಪಡೆ ಭೇದಿಸಿದೆ. ಈ ಪ್ರಕರಣದಲ್ಲಿ 11 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಪಂಜಾಬ್, ರಾಜಸ್ತಾನ, ಹರ್ಯಾಣ, ಕಾಶ್ಮೀರದ ಗಡಿಯಲ್ಲಿನ ಸೂಕ್ಷ್ಮ ಮಿಲಿಟರಿ ನೆಲೆಗಳ ಸಮೀಪ ಸೋಲಾರ್ ಆಧಾರಿತ ಸಿಸಿಟಿವಿ ಕ್ಯಾಮೆರಾಗಳನ್ನು ರಹಸ್ಯವಾಗಿ ಅಳವಡಿಸುವ ಮೂಲಕ ಪಾಕಿಸ್ತಾನಕ್ಕೆ ರಿಯಲ್ ಟೈಮ್ನಲ್ಲಿ ಸೇನಾ ಪಡೆಗಳ ಓಡಾಟದ ಮಾಹಿತಿ ರವಾನಿಸುತ್ತಿದ್ದರು. ಈ ಬಂಧನದಿಂದ ಸಂಭಾವ್ಯ ಭಯೋತ್ಪಾದನಾ ದಾಳಿಯನ್ನು ತಪ್ಪಿಸಿದಂತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ವಿಶೇಷ ಪಡೆ ಮೊದಲು ಪಂಜಾಬ್ ಮತ್ತು ದೆಹಲಿಯಲ್ಲಿ ಆರು ಮಂದಿಯನ್ನು ಬಂಧಿಸಿದ್ದು, ಸಿಸಿಟಿವಿ ಕ್ಯಾಮರಾ, ನಾಲ್ಕು ಪಿಸ್ತೂಲ್ಗಳು ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆದಿದೆ. ಎರಡನೇ ಕಾರ್ಯಾಚರಣೆಯನ್ನು ಮಿಲಿಟರಿ ಗುಪ್ತಚರ ಮಾಹಿತಿ ಆಧಾರದ ಮೇಲೆ ನಡೆಸಲಾಗಿದ್ದು, ಅದರಂತೆ ಪಂಜಾಬ್ನಲ್ಲಿ ಮತ್ತೆ 5 ಮಂದಿ ಬಂಧಿಸಲಾಗಿದೆ.
ದೇಶದ ಗಡಿ ಪ್ರದೇಶ, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿನ ಸೇನಾಪಡೆಗಳು ಓಡಾಡುವ ಪ್ರಮುಖ ಸ್ಥಳಗಳಲ್ಲಿ ಮೊಬೈಲ್ ಸಿಮ್ ಸಹಿತ ಕನಿಷ್ಠ 9 ಸೋಲಾರ್ ಸಿಸಿ ಕ್ಯಾಮೆರಾ ಅಳವಡಿಸಿತ್ತು. ರಾತ್ರಿ ಹೊತ್ತಲ್ಲೂ ಮತ್ತು ವಿದ್ಯುತ್ ಇಲ್ಲದಿದ್ದಾಗಲೂ ಸಿಸಿಟಿವಿ ದೃಶ್ಯಗಳು ಲಭ್ಯವಾಗಲಿ ಎಂದು ಸೌರಶಕ್ತಿ ಆಧರಿತ ಸಿಸಿಟಿವಿ ಕ್ಯಾಮೆರಾಗಳನ್ನು ಬಳಸಲಾಗಿತ್ತು.
ಪಂಜಾಬ್ನ ಕಪುರ್ಥಲಾ, ಜಲಂಧರ್, ಪಠಾಣ್ಕೋಟ್, ಪಟಿಯಾಲ ಮತ್ತು ಮೊಗಾ, ಹರ್ಯಾಣದ ಅಂಬಾಲಾ, ಜಮ್ಮು ಮತ್ತು ಕಾಶ್ಮೀರದ ಕಥುವಾ, ರಾಜಸ್ಥಾನದ ಬಿಕಾನೆರ್ ಮತ್ತು ಅಲ್ಟರ್ನಲ್ಲಿ ಈ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಸಿಸಿಟೀವಿ ಸೆರೆಹಿಡಿದ ಮಾಹಿತಿ ನೇರವಾಗಿ ಪಾಕ್ನಲ್ಲಿರುವ ನಿಯಂತ್ರಕರಿಗೆ ಮೊಬೈಲ್ ಆ್ಯಪ್ ಮೂಲಕ ಲೈವ್ ಆಗಿ ರವಾನೆಯಾಗುತ್ತಿತ್ತು. ಬಂಧಿತರಲ್ಲಿ ಪ್ರಮುಖ ಆರೋಪಿಯಾದ ಪಂಜಾಬ್ನ ಮನ್ಪ್ರೀತ್ ಸಿಂಗ್ ಪಾಕ್ನಲ್ಲಿ ನೆಲೆಸಿರುವವರ ಉಗ್ರರ ಜತೆ ನೇರ ಸಂಪರ್ಕದಲ್ಲಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆ.

























