ಮಂಗಳೂರು: ಮಾ. 28 ರಂದು ಮಂಗಳ ಗಂಗೋತ್ರಿ, ಮಂಗಳೂರು ವಿಶ್ವವಿದ್ಯಾಲಯದ 44 ನೇ ಘಟಿಕೋತ್ಸವವು ನಡೆಯಲಿದ್ದು ಈ ಸಂದರ್ಭದಲ್ಲಿ ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ ಕಾರ್ಯಕ್ರಮ ನಡೆಯಲಿದೆ.
ಶಿಕ್ಷಣ ಕ್ಷೇತ್ರದ ಸಾಧಕ ಪದ್ಮಶ್ರೀ ಹರೇಕಳ ಹಾಜಬ್ಬ, ಮರಣೋತ್ತರವಾಗಿ ಇತ್ತೀಚೆಗೆ ಮೃತರಾದ ಯಕ್ಷಗಾನದ ಮೇರು ನಟ ಸೂರಿಕುಮೇರು ಗೋವಿಂದ ಭಟ್, ದೈವನರ್ತಕ ಡಾ. ರವೀಶ್ ಪಡುಮಲೆ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ನಡೆಯಲಿರುವುದಾಗಿ ಕುಲಪತಿ ಪ್ರೊ. ಕೆ. ಎಲ್. ಧರ್ಮ ತಿಳಿಸಿದ್ದಾರೆ.
ಹರೇಕಳ ಹಾಜಬ್ಬ: ಇವರು ಕಿತ್ತಳೆ ಮಾರಾಟ ಮಾಡಿ ಶಾಲೆ ಕಟ್ಟಿದ ಸಾಧಕ. ಮಂಗಳೂರಿನ ಹರೇಕಳ-ನ್ಯೂಪಡ್ಡು ಗ್ರಾಮದಲ್ಲಿ ಶಾಲೆಯನ್ನು ನಿರ್ಮಿಸುವ ಮೂಲಕ ಗ್ರಾಮೀಣ ಶಿಕ್ಷಣದಲ್ಲಿ ಕ್ರಾಂತಿ ಮಾಡಿದ ಹಾಜಬ್ಬ ಅವರಿಗೆ 2020ರಲ್ಲಿ ಪದ್ಮಶ್ರೀ ಪ್ರಶಸ್ತಿ ಮುಡಿಗೇರಿತ್ತು.
ಸೂರಿಕುಮೇರು ಗೋವಿಂದ ಭಟ್: ಇವರು ತೆಂಕುತಿಟ್ಟು ಯಕ್ಷಗಾನ ರಂಗದ ದಿಗ್ಗಜರಾಗಿದ್ದು, ದಶಾವತಾರಿ ಎಂದೇ ಬಿರುದು ಪಡೆದವರು. ದಕ್ಷಿಣ ಕನ್ನಡ ಜಿಲ್ಲೆಯವರಾದ ಇವರು 7 ದಶಕಗಳ ಕಾಲ, ವಿಶೇಷವಾಗಿ ಧರ್ಮಸ್ಥಳ ಮೇಳದಲ್ಲಿ 50 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ. ರಕ್ತಬೀಜ, ಕೌರವ, ಭೀಷ್ಮ ಪಾತ್ರಗಳಿಗೆ ಪ್ರಸಿದ್ಧರಾಗಿದ್ದ ಇವರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ (2016) ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ದೊರೆತಿವೆ.
ಡಾ. ರವೀಶ್ ಪಡುಮಲೆ: ಇವರು ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ದ ದೈವ ನರ್ತಕರಾಗಿದ್ದು, ಚಿಂತಕರು, ವಾಗ್ಮಿ ಮತ್ತು ಶಿಕ್ಷಣ ತಜ್ಞರು. ಉಜಿರೆಯ ಎಸ್ಡಿಎಂ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದೈವ ನರ್ತನದ ಸಂಪ್ರದಾಯವನ್ನು ಪಾಲಿಸುತ್ತಾ, ಹಿಂದೂ ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

























