ಸುಳ್ಳು ಸುದ್ದಿ ಪ್ರಸಾರ ಮಾಡಿದ ಮಾಧ್ಯಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ನಟಿ
ಮುಂಬೈ : ಹಿರಿಯ ನಟ ಧರ್ಮೇಂದ್ರ ನಿಧನರಾಗಿರುವ ಸುದ್ದಿ ಸುಳ್ಳು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಪತ್ನಿ ಹೇಮಮಾಲಿನಿ ತಿಳಿಸಿದ್ದಾರೆ. ಧರ್ಮೇಂದ್ರ ಮುಂಬೈಯ ಬ್ರೀಚ್ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಇಂದು ಈ ಮೊದಲು ವರದಿಯಾಗಿತ್ತು. ಇದು ಯಾರೋ ಅವಸರದಲ್ಲಿ ಹರಡಿದ ಸುಳ್ಳು ಸುದ್ದಿ ಎಂಬುದಾಗಿ ಧರ್ಮೇಂದ್ರ ಅವರ ಪುತ್ರಿ ಈಶಾ ಡಿಯೋಲ್ ಸ್ಪಷ್ಟೀಕರಣ ನೀಡಿದ್ದಾರೆ.
ಸುದ್ದಿವಾಹಿನಿಗಳ ವಿರುದ್ಧ ಕಿಡಿಕಾರಿದ ಹೇಮಮಾಲಿನಿ ಜವಾಬ್ದಾರಿಯುತ ಮಾಧ್ಯಮಗಳು ಸುದ್ದಿಯನ್ನು ದೃಢಪಡಿಸದೆ ಪ್ರಸಾರ ಮಾಡಿದ್ದು ಅಕ್ಷಮ್ಯ ಎಂದು ಹೇಳಿದ್ದಾರೆ. ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿರುವ ವ್ಯಕ್ತಿಯನ್ನು ತೀರಿಹೋಗಿದ್ದಾರೆ ಎಂದು ವರದಿ ಮಾಡಿರುವುದು ನಟನಿಗೆ ತೋರಿಸಿದ ಅಗೌರವ. ದಯವಿಟ್ಟು ಹಿರಿಯ ನಟನಿಗೆ ಗೌರವ ಕೊಡಿ ಮತ್ತು ಕುಟುಂಬದ ಖಾಸಗಿತನಕ್ಕೆ ಧಕ್ಕೆ ತರಬೇಡಿ ಎಂದು ಹೇಮಮಾಲಿನಿ ವಿನಂತಿಸಿದ್ದಾರೆ.
ತಂದೆಯ ಆರೋಗ್ಯ ಸ್ಥಿರವಾಗಿದೆ ಮತ್ತು ಚೇತರಿಕೆಯ ದಾರಿಯಲ್ಲಿದ್ದಾರೆ ಎಂದು ಈಶಾ ಡಿಯೋಲ್ ಕೂಡ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
























