ಕಾಲ್ತುಳಿತ : ಪ್ರಮುಖ ಆರೋಪಿಗಳು ಪರಾರಿಯಾಗಲು ಸರ್ಕಾರವೇ ಕಾರಣ?

ಸಿಎಂ ನೀಡಿದ ಸುಳಿವಿನಿಂದಲೇ ಆರೋಪಿಗಳು ರಾತ್ರೋರಾತ್ರಿ ತಪ್ಪಿಸಿಕೊಂಡಿದ್ದಾರೆ ಎಂಬ ಆರೋಪ

ಬೆಂಗಳೂರು: ಆರ್‌ಸಿಬಿ ಐಪಿಎಲ್‌ ಗೆದ್ದಾಗ ಸನ್ಮಾನ ಏರ್ಪಡಿಸಿ ಪ್ರಚಾರ ಪಡೆಯಲು ಯತ್ನಿಸಿದ ರಾಜ್ಯ ಸರ್ಕಾರ ಎಡವಟ್ಟಿನ ಮೇಲೆ ಎಡವಟ್ಟು ಮಾಡಿಕೊಳ್ಳುತ್ತಿದೆ. ಕಾಲ್ತುಳಿತ ಘಟನೆಯ ಪ್ರಮುಖ ಆರೋಪಿಗಳೆಲ್ಲ ಪರಾರಿಯಾಗಿದ್ದು, ಇವರು ತಪ್ಪಿಸಿಕೊಳ್ಳಲು ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಕಾರಣ ಎಂಬ ಆರೋಪ ಈಗ ಕೇಳಿಬಂದಿದೆ.

ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ನೀಡಿದ ಸುಳಿವಿನಿಂದ ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣದ ಪ್ರಮುಖ ಆರೋಪಿಗಳು ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ. ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಸಿಬಿ, ಕರ್ನಾಟಕ ರಾಜ್ಯ ಕ್ರಿಕೆಟ್‌ ಮಂಡಳಿ (ಕೆಎಸ್‌ಸಿಎ) ಮತ್ತು ಕಾರ್ಯಕ್ರಮ ನಿರ್ವಹಣೆ ಮಾಡಿದ್ದ ಡಿಎನ್‌ಎ ಕಂಪನಿ ಮೇಲೆ ಎಫ್‌ಐಆರ್‌ ದಾಖಲಾಗಿದೆ. ಎಫ್‌ಐಆರ್‌ ದಾಖಲಾದ ನಂತರ ಈ ಮೂರು ಸಂಸ್ಥೆಗಳ ಪ್ರಮುಖರನ್ನು ಬಂಧಿಸಬೇಕಿತ್ತು. ಆದರೆ ಪೊಲೀಸರ ಬಂಧನಕ್ಕೂ ಮೊದಲೇ ಈ ಸಂಸ್ಥೆಗಳ ಪ್ರಮುಖರು ತಪ್ಪಿಸಿಕೊಂಡಿದ್ದಾರೆ.





















































 
 

ಗುರುವಾರ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ ಈ ಪ್ರಕರಣವನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ನಿರ್ಲಕ್ಷ್ಯ ವಹಿಸಿದ ವ್ಯಕ್ತಿಗಳ ವಿರುದ್ಧ ಕ್ರಮ ಆಗಲಿದೆ. ಮೂರು ಸಂಸ್ಥೆಗಳ ಮುಖ್ಯಸ್ಥರನ್ನು ಬಂಧಿಸುತ್ತೇವೆ ಎಂದು ಹೇಳಿದ್ದರು. ಸಿಎಂ ಬಂಧಿಸುತ್ತೇವೆ ಎಂದು ಲೈವ್‌ನಲ್ಲಿ ಹೇಳಿದ್ದರಿಂದ ಪೊಲೀಸರು ಸ್ಥಳಕ್ಕೆ ತೆರಳುವ ಮೊದಲೇ ಆರೋಪಿಗಳು ಪರಾರಿಯಾಗಿದ್ದಾರೆ. ಒಂದು ವೇಳೆ ಸಿಎಂ ತಪ್ಪಿತ್ತಸ್ಥರ ವಿರುದ್ಧ ಕ್ರಮ ಆಗಲಿದೆ ಎಂದಿದ್ದರೆ ಆರೋಪಿಗಳು ಪರಾರಿಯಾಗುವ ಸಾಧ್ಯತೆ ಕಡಿಮೆ ಇತ್ತು ಎಂದು ತರ್ಕಿಸಲಾಗುತ್ತಿದೆ.

ಡಿಎನ್‌ಎ ಇವೆಂಟ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆಯ ಮೂವರು ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಷನ್‌ನ ಒಬ್ಬರು ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಡಿಎನ್‌ಎ ಇವೆಂಟ್‌ ಮ್ಯಾನೇಜ್ಮೆಂಟ್‌ನ ಸುನೀಲ್ ಮ್ಯಾಥ್ಯೂ, ಕಿರಣ್ ಮತ್ತು ವಿನೋದ್ ಬಂಧನವಾಗಿದ್ದರೆ ಕೆಎಸ್‌ಸಿಎ ಪ್ರತಿನಿಧಿಯ ಹೆಸರು ಬಹಿರಂಗವಾಗಿಲ್ಲ. ಆರೋಪಿಗಳಾಗಬೇಕಿದ್ದ ಕೆಎಸ್‌ಸಿಎ ಪ್ರಮುಖರು ರಾತ್ರಿಯೇ ಪರಾರಿಯಾಗಿದ್ದು ಅವರ ಪತ್ತೆಗೆ ಪೊಲೀಸರು ಈಗ ಶೋಧ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top