ಧಾರ್ಮಿಕ ಕಾರ್ಯಕ್ರಮಕ್ಕೆ ಪೊಲೀಸರಿಂದ ಅಡ್ಡಿ ಎಂದು ಮುಖಂಡರ ಆಕ್ರೋಶ
ಮಂಗಳೂರು : ಉಳ್ಳಾಲ ಸಮೀಪದ ಪೆರಿಬೈಲ್ ಮಸೀದಿಯಲ್ಲಿ ಧಾರ್ಮಿಕ ಕಾರ್ಯಕ್ರಮವೊಂದು ನಡೆಯುತ್ತಿದ್ದ ವೇಳೆ ಪೊಲೀಸರು ಮೈಕ್ ಬಂದ್ ಮಾಡಿಸಿದ ಆರೋಪ ಕೇಳಿಬಂದಿದೆ. ಅನುಮತಿ ಇರುವ ಸಮಯದಲ್ಲೇ ಮೈಕ್ ಬಳಸಿದ್ದರೂ ಪೊಲೀಸರು ತಡೆದಿದ್ದಾರೆ. ಇದರ ವಿರುದ್ಧ ನಾವು ಹೋರಾಟ ಮಾಡಲಿದ್ದೇವೆ ಎಂದು ಮಸೀದಿ ಆಡಳಿತ ಹೇಳಿದೆ.
ಪೆರಿಬೈಲ್ ಮಸೀದಿಯಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿತ್ತು. ಸಂಜೆ 7 ಗಂಟೆ ವೇಳೆಗೆ ಮಸೀದಿಯಲ್ಲಿ ಧ್ವನಿವರ್ಧಕ ಬಳಸಲಾಗಿತ್ತು. ಇದೇ ವೇಳೆ ಅನುಮಾನಾಸ್ಪದ ಚಟುವಟಿಕೆ ಆರೋಪಿಸಿ ಅಪರಿಚಿತರು 112 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ದೂರು ನೀಡಿದ್ದರು. ತಕ್ಷಣ ಮಸೀದಿಗೆ ದೌಡಾಯಿಸಿದ ಉಳ್ಳಾಲ ಪೊಲೀಸರು, ಧಾರ್ಮಿಕ ಕಾರ್ಯಕ್ರಮ ತಡೆದು ಗದರಿಸಿದ್ದಾರೆ. ವಿನಾಕಾರಣ ಕಾರ್ಯಕ್ರಮಕ್ಕೆ ಪೊಲೀಸರು ಅಡ್ಡಿಯುಂಟು ಮಾಡಿದ್ದಾರೆ ಮಸೀದಿಯ ಮುಖಂಡರು ಆರೋಪಿಸಿದ್ದಾರೆ.
ಪೊಲೀಸರ ನಡೆಯ ವಿರುದ್ಧ ಮುಸ್ಲಿಂ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಧಾರ್ಮಿಕ ಕಾರ್ಯಕ್ರಮದ ವೇಳೆ ಪೊಲೀಸರು ಬಂದು ಗದರಿಸಿದ್ದಾರೆ. ನಾವು ಸಮಯವಲ್ಲದ ಸಮಯದಲ್ಲಿ ಮೈಕ್ ಬಳಸಿಲ್ಲ. ಸಂಜೆ 7 ಗಂಟೆಗೆ ಮೈಕ್ ಹಾಕಿ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ರಾತ್ರಿ 10 ಗಂಟೆವರೆಗೆ ಮೈಕ್ ಬಳಸಲು ಅವಕಾಶ ಇದೆ, ಮತ್ತೆ ನಮಗ್ಯಾಕೆ ವಿರೋಧ ಎಂದು ಮುಸ್ಲಿಂ ಮುಖಂಡರು ಪ್ರಶ್ನಿಸಿದ್ದಾರೆ.
ನಾವು ರಾತ್ರಿ 10 ರಿಂದ ಬೆಳಗ್ಗೆ 6ವರೆಗೂ ಮೈಕ್ ಬಳಸುವುದಿಲ್ಲ ಎಂದು ಮುಚ್ಚಳಿಕೆ ಬರೆದಿದ್ದೇವೆ. ಪೊಲೀಸರು ಮಸೀದಿ, ಮದರಸದ ಬಳಿ ಗದರಿಸುವುದು ಹಾಗೂ ಬೆದರಿಸುವುದನ್ನು ನಿಲ್ಲಿಸಬೇಕು. ಜಿಲ್ಲಾಡಳಿತ ಈ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಬೇಕು. ಮಂಗಳೂರು ಪೊಲೀಸ್ ಕಮಿಷನರ್ ಗಮನಕ್ಕೆ ಬರುವವರೆಗೂ ಹೋರಾಡುತ್ತೇವೆ ಎಂದು ಪೆರಿಬೈಲ್ ಮಸೀದಿ ಅಧ್ಯಕ್ಷ ಅಬ್ಬಾಸ್ ಹಾಜಿ ಹೇಳಿದ್ದಾರೆ.
























