ಪುತ್ತೂರು: ಅಂಕ ಪಡೆಯುವುದಷ್ಟೇ ಶಿಕ್ಷಣ ಅಲ್ಲ, ಬದಲಾಗಿ ಭಾರತದ ಸಂಸ್ಕೃತಿ ಮತ್ತು ದೇಶ ಪ್ರೇಮ ಶಿಕ್ಷಣದಲ್ಲಿ ಅಡಕವಾಗಿರಬೇಕು. ಹಾಗಾಗಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಟ್ಟು ರಾಷ್ಟ್ರಸಂಪತ್ತನ್ನು ಬೆಳೆಸಬೇಕು ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.
ಅವರು ಅಂಬಿಕಾ ಪದವಿಪೂರ್ವ ವಿದ್ಯಾಲಯಗಳ ಆಶ್ರಯದಲ್ಲಿ ಬಪ್ಪಳಿಗೆಯ ಶ್ರೀ ಶಂಕರ ಸಭಾಭವನದಲ್ಲಿ ಆಯೋಜಿಸಲಾದ ನೂತನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೇಶದ ಅವ್ಯವಸ್ಥೆಗಳಿಗೆ ಶಿಕ್ಷಣ ಸಂಸ್ಥೆಗಳೇ ಹೊಣೆ. ಸಂಸ್ಕಾರಯುತ ಶಿಕ್ಷಣ ಕೊಟ್ಟಾಗ ಅಂಕಗಳೂ ತನ್ನಿಂತಾನೇ ಒದಗಿಬರುತ್ತವೆ, ಶಿಸ್ತು ಬದ್ಧ ಜೀವನದಿಂದ ಉದ್ದೇಶ ಸಾಧನೆ ಸಾಧ್ಯ. ಆದರೆ ಸಂಸ್ಕಾರಯುತ ಶಿಕ್ಷಣವನ್ನು ಸಂಸ್ಥೆಗಳು ಕೊಡದೇ ಇದ್ದರೆ ಸಮಸ್ಯೆಗಳು ಸೃಷ್ಟಿಯಾಗುತ್ತವೆ ಎಂದರಲ್ಲದೆ, ಹೆತ್ತವರು ನಿರಂತರವಾಗಿ ಸಂಸ್ಥೆಯೊಂದಿಗಿನ ಸಂಪರ್ಕದಲ್ಲಿರಬೇಕು. ಆಗ ಮಕ್ಕಳು ಹಾದಿ ತಪ್ಪುವುದಿಲ್ಲ ಎಂದು ತಿಳಿಸಿದರು.
ಆಡಳಿತ ಮಂಡಳಿ ಸದಸ್ಯ ಸುರೇಶ ಶೆಟ್ಟಿ ಮಾತನಾಡಿ, ಎಲ್ಲಾ ವಿದ್ಯೆಗಳು ಭಾರತದಲ್ಲಿವೆ. ಆದಾಗ್ಯೂ ವಿದೇಶಕ್ಕೆ ಹೋಗಿ ಕಲಿಯುತ್ತೇವೆ. ಆದರೆ ಕನಿಷ್ಟ ಮುಂದಿನ ನಮ್ಮ ಸೇವೆಯಾದರೂ ನಮ್ಮ ದೇಶವಾದ ಭಾರತಕ್ಕೆ ಇರಬೇಕು ಎಂದರು.
ಬಪ್ಪಳಿಗೆಯ ಅಂಬಿಕಾ ವಸತಿಯುತ ವಿದ್ಯಾಲಯದ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಸತ್ಯನಾರಾಯಣ ಶರ್ಮ, ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಶಿವರಾಮ ಆಳ್ವ ಶುಭ ಹಾರೈಸಿದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್. ನಟ್ಟೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹತ್ತನೇ ತರಗತಿಯಲ್ಲಿ ತಾಲೂಕು ಪ್ರಥಮ ಸ್ಥಾನಿಯಾದ ಶ್ರೀಲಕ್ಷ್ಮಿ, ದ್ವಿತೀಯ ಪಿಯುಸಿಯಲ್ಲಿ ತಾಲೂಕು ಪ್ರಥಮ ಸ್ಥಾನಿಯಾದ ವರುಣ ಎಂ, ಜೆಇಇ ಪ್ರಥಮ ಸ್ಥಾನಿ ಪ್ರಮಿತ್ ರೈ, ದ್ವಿತೀಯ ಪಿಯುಸಿ ಕಾಮರ್ಸ್ ವಿಭಾಗದಲ್ಲಿ ತಾಲೂಕಿಗೆ ಪ್ರಥಮ ಸ್ಥಾನಿಯಾದ ಅಭಿರಾಮ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪಟ್ಟಿಯನ್ನು ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಉಪ ಪ್ರಾಂಶುಪಾಲೆ ಶೈನಿ ಕೆ ಜೆ ವಾಚಿಸಿದರು.
ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಸ್ವಾಗತಿಸಿ, ಪ್ರಸ್ತಾವನೆಗೈದರು. ಬಪ್ಪಳಿಗೆಯ ಅಂಬಿಕಾ ವಸತಿಯುತ ಪದವಿ ಪೂರ್ವ ವಿದ್ಯಾಲಯದ ಪ್ರಾಚಾರ್ಯೆ ಸುಚಿತ್ರಾ ಪ್ರಭು ವಂದಿಸಿದರು. ಉಪನ್ಯಾಸಕ ಸತೀಶ್ ಇರ್ದೆ ಕಾರ್ಯಕ್ರಮ ನಿರೂಪಿಸಿದರು. ಆಡಳಿತ ಅಧಿಕಾರಿ ಗಣೇಶ್ ಪ್ರಸಾದ್ ಇವರು ಅತಿಥಿಗಳಿಗೆ ಸ್ಮರಣಿಕೆಗಳನ್ನು ನೀಡಿ ಗೌರವಿಸಿದರು.
























