ಶಿವಮೊಗ್ಗದಿಂದ ಬೆಂಗಳೂರಿಗೆ ರೈಲಿನಲ್ಲಿ ಬರುತ್ತಿದ್ದ ಗೃಹಿಣಿಯೋರ್ವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತಪಟ್ಟವರನ್ನು ಅನ್ನಪೂರ್ಣ ಎಂದು ಗುರುತಿಸಲಾಗಿದೆ. ಮೃತಳ ಕುಟುಂಬಸ್ಥರು ಅನ್ನಪೂರ್ಣ ಅವರು ಕೊಲೆಯಾಗಿರಬಹುದೆಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಮಹಿಳೆಯೂ ಅಲ್ಲ. ಯಾವುದೇ ಅನಾರೋಗ್ಯ ಕೂಡ ಇರಲಿಲ್ಲ. ಹೀಗಾಗಿ ಯಾರೋ ದುಷ್ಕರ್ಮಿಗಳು ಅನ್ನಪೂರ್ಣರನ್ನ ಕೊಂದು ರೈಲಿನಿಂದ ತಳ್ಳಿದ್ದಾರೆ ಎಂದು ಆರೋಪಿಸಿದ್ದಾರೆ.
ಮಂಗಳವಾರ ರಾತ್ರಿ ಶಿವಮೊಗ್ಗದಿಂದ ಮಹಿಳೆಯರಿಗಾಗಿ ಮೀಸಲಿದ್ದ ರೈಲ್ವೆ ಬೋಗಿಯಲ್ಲಿ ಬೆಂಗಳೂರಿನತ್ತ ಹೊರಟಿದ್ದರು. ಮಹಿಳೆಯರಿಗೆ ಪ್ರತ್ಯೇಕ ಇರುವ ಬೋಗಿಯಲ್ಲಿ ಪ್ರಯಾಣ ಬೆಳೆಸಿದ್ದರು. ಜೊತೆಗೆ ಸಹೋದರ ಕೂಡ ಬಂದಿದ್ದರು. ಆದರೆ ಸಹೋದರ ಬ್ರಹ್ಮಾನಂದ ರಾನಡೆ ಬೇರೆ ಬೋಗಿಯಲ್ಲಿದ್ದರು. ರೈಲು ಬೆಂಗಳೂರು ತಲುಪಿದಾಗ, ಅನ್ನಪೂರ್ಣ ರೈಲಿನಿಂದ ಇಳಿದಿಲ್ಲ. ಈ ನಡುವೆ ದಾರಿ ನಡುವೆ ಅನ್ನಪೂರ್ಣ ಅವರ ಶವ ಪತ್ತೆಯಾಗಿದೆ.
ಅನ್ನಪೂರ್ಣ ಅವರು ಬೆಂಗಳೂರಿನ ಅರಣ್ಯ ಭವನದಲ್ಲಿ ಸ್ಟೆನೋ ಆಗಿ ಕೆಲಸ ಮಾಡುತ್ತಿದ್ದರು. ಇವರ ಕುಟುಂಬಸ್ಥರು ಕೂಡ ಒಳ್ಳೆಯ ಕೆಲಸದಲ್ಲಿದ್ದರು. ಬೆಂಗಳೂರಿನಲ್ಲಿ ತನ್ನ ಮಗನ ಜೊತೆ ವಾಸವಿದ್ದ ಅನ್ನಪೂರ್ಣ ಕೆಲಸದ ನಿಮಿತ್ತ ಶಿವಮೊಗ್ಗಕ್ಕೆ ಹೋಗಿದ್ದರಂತೆ. ಶಿವಮೊಗ್ಗದಲ್ಲಿ ತಮ್ಮ ಸಹೋದರರ ಮನೆಗಳಿಗೆ ಭೇಟಿ ನೀಡಿ ಕೆಲಸ ಮುಗಿಸಿ ಮತ್ತೆ ಬೆಂಗಳೂರಿನತ್ತ ವಾಪಸ್ ಆಗುತ್ತಿದ್ದರು.
ಮೃತದೇಹದ ಕುತ್ತಿಗೆ ಭಾಗ ಹಾಗೂ ತಲೆ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಅಲ್ಲದೇ ಫೋನ್ ಕೂಡ ಆನ್ ನಲ್ಲಿದ್ದು, ಸುಮಾರು 20 ಕಿಲೋ ಮೀಟರ್ ದೂರದಲ್ಲಿ ಎರಡು ಲಗೇಜ್ ಬ್ಯಾಗ್ ಗಳು ಸಿಕ್ಕಿವೆ. ಇನ್ನೆರಡು ಬ್ಯಾಗ್ ಗಳು ಪತ್ತೆಯಾಗಿಲ್ಲ. ಅಲ್ಲದೇ ಮೈ ಮೇಲೆ ಒಡವೆಗಳಿದ್ದವು. ಅವು ಕಾಣಿಸುತ್ತಿಲ್ಲ. ಹೀಗಾಗಿ ಯಾರೋ ಒಡವೆಗಳಿಗೆ ಕೊಲೆಗೈದಿರಬಹುದು ಎಂದು ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿದ್ದಾರೆ.
ಯಶವಂತಪುರ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
























