ಡಾಕ್ಟರ್ ಕೊಟ್ನೀಸ್ ಕೀ ಅಮರ್ ಕಹಾನಿ

ಈ ಭಾರತದ ವೈದ್ಯರು ಚೀನದ ಹೃದಯವನ್ನು ಗೆದ್ದದ್ದು ಹೇಗೆ?

ಭಾರತ ಮತ್ತು ಚೀನ ಸಂಬಂಧ ಇವತ್ತಿಗೂ ಮಧುರವಾಗಿ ಇಲ್ಲ. ಆ ಕಮ್ಯುನಿಸ್ಟ್ ಸರಕಾರ ಭಾರತದ ವಿರುದ್ಧ ಸಂಚು ಹೂಡಿದ್ದೆ ಹೆಚ್ಚು. ಅಂತಹ ರಾಷ್ಟ್ರ ಭಾರತದ ಒಬ್ಬ ವೈದ್ಯರಿಗೆ ಸ್ಮಾರಕ ನಿರ್ಮಾಣ ಮಾಡಿ ರಾಷ್ಟ್ರೀಯ ಗೌರವ ಕೊಟ್ಟಿತು ಎಂದರೆ ನಮಗೆ ನಿಮಗೆ ನಂಬುವುದು ಭಾರಿ ಕಷ್ಟ ಆಗಬಹುದು!
ಚೀನಾದಲ್ಲಿ ಪ್ರತಿಯೊಬ್ಬ ವೈದ್ಯ ತನ್ನ ಪದವಿಯನ್ನು ಪಡೆಯುವ ಮೊದಲು ಆ ಸ್ಮಾರಕಕ್ಕೆ ವಂದಿಸಿ ಬರುತ್ತಾರೆ ಅಂದರೆ ನಮಗೆ ಇನ್ನೂ ಆಶ್ಚರ್ಯ ಆಗಬಹುದು. ಚೀನದ ಅಧ್ಯಕ್ಷರು ಅಥವಾ ಯಾರೇ ರಾಜತಾಂತ್ರಿಕ ಪ್ರಮುಖರು ಭಾರತಕ್ಕೆ ಭೇಟಿ ಕೊಡುವ ಸಂದರ್ಭದಲ್ಲಿ ಮಹಾರಾಷ್ಟ್ರದ ಸೋಲಾಪುರದಲ್ಲಿ ಇರುವ ಅವರ ಕುಟುಂಬವನ್ನು ಈಗಲೂ ಭೇಟಿ ಮಾಡಿ ಗೌರವ ಸಲ್ಲಿಸುತ್ತಾರೆ ಎಂದರೆ ಆ ವೈದ್ಯರ ಪ್ರಭಾವ ಏನು?

ಅವರೇ ಡಾಕ್ಟರ್ ದ್ವಾರಕಾನಾಥ್ ಕೊಟ್ನೀಸ್





























 
 

ಭಾರತ ಮತ್ತು ಚೀನ ನಡುವಿನ ಸಂಬಂಧಗಳ ಕುರಿತು ಪ್ರಸ್ತಾವ ಮಾಡುವಾಗಲೆಲ್ಲ ಅವರ ಹೆಸರನ್ನು ಉಲ್ಲೇಖ ಮಾಡದೆ ಮುಂದೆ ಹೋಗಲು ಸಾಧ್ಯವೇ ಇಲ್ಲ. ಕೇವಲ 32 ವರ್ಷ ಬದುಕಿದ್ದ ಹಾಗೂ ತನ್ನ ಬದುಕಿನ ಪ್ರತಿ ಕ್ಷಣವನ್ನೂ ರೋಗಿಗಳ ಸೇವೆಗೆ ಮೀಸಲಿಟ್ಟ ಡಾಕ್ಟರ್ ಕೊಟ್ನೀಸ್ ಅಜರಾಮರ. ಅವರ ಬದುಕೇ ಒಂದು ಅದ್ಭುತ ಯಶೋಗಾಥೆ.
ಮಹಾರಾಷ್ಟ್ರದ ಸೋಲಾಪುರ ಎಂಬ ನಗರದ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಅವರು ಸ್ವಂತ ಪರಿಶ್ರಮದಿಂದ ವೈದ್ಯಕೀಯ ಪದವಿಯನ್ನು ಪಡೆದವರು. ಸ್ನಾತಕೋತ್ತರ ಪದವಿಗೆ ಅವರ ಸಿದ್ಧತೆ ನಡೆದಿತ್ತು. ಅದೇ ಹೊತ್ತಿಗೆ(1938) ಚೀನ ಮತ್ತು ಜಪಾನ್ ನಡುವೆ ಯುದ್ಧ ಆರಂಭವಾಯಿತು. ಇಡೀ ವರ್ಷ ಯುದ್ಧ ಮುಂದುವರಿದಾಗ ಚೀನದಲ್ಲಿ ಯುದ್ಧದ ಗಾಯಾಳುಗಳ ಚಿಕಿತ್ಸೆ ತುಂಬ ಕಷ್ಟವಾಯಿತು. ಚೀನದಲ್ಲಿ ಆಧುನಿಕ ಮೆಡಿಕಲ್ ಕಾಲೇಜು ಇರಲಿಲ್ಲ. ವೃತ್ತಿಪರ ವೈದ್ಯರ ಕೊರತೆಯಿಂದ ಚೀನ ಸಂತ್ರಸ್ತವಾಯಿತು. ಆಗ ಅನಿವಾರ್ಯವಾಗಿ ಚೀನ ಭಾರತದ ಮೊರೆ ಹೋಯಿತು. ಸ್ವಯಂಸೇವಾ ಮನೋಭಾವದ ವೈದ್ಯರು ಬಂದು ಯುದ್ಧ ಸಂತ್ರಸ್ತರಿಗೆ ಚಿಕಿತ್ಸೆ ಒದಗಿಸಬೇಕೆಂದು ಕರೆಕೊಟ್ಟಿತು.

ನೇತಾಜಿ ಸುಭಾಸ್ ಚಂದ್ರರು ಭಾರತದ ವೈದ್ಯರಿಗೆ ಕರೆ ನೀಡಿದರು

ಆಗ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ನೇತಾಜಿ ಸುಭಾಸ್ಚಂದ್ರ ಬೋಸರು ಈ ಬಗ್ಗೆ ಒಂದು ಪತ್ರಿಕಾಗೋಷ್ಠಿ ನಡೆಸಿದರು. ಭಾರತೀಯ ವೈದ್ಯರಿಗೆ ಚೀನಕ್ಕೆ ಹೋಗಿ ಸೇವೆ ಸಲ್ಲಿಸಲು ಕರೆ ನೀಡಿದರು. ಅವರ ವಿನಂತಿಗೆ ಸ್ಪಂದನೆ ನೀಡಿದ ಐದು ಮಂದಿ ಭಾರತೀಯ ವೈದ್ಯರು ಚೀನಾಕ್ಕೆ ಹೊರಟರು. ಅವರಲ್ಲೊಬ್ಬರು ಡಾಕ್ಟರ್ ದ್ವಾರಕಾ ನಾಥ್ ಕೋಟ್ನೀಸ್.

ಸೇವೆ ಎಂಬ ಯಜ್ಞಕ್ಕೆ ಹವಿಸ್ಸಾಗಲು ಹೊರಟರು

ಡಾಕ್ಟರ್ ಕೋಟ್ನೀಸ್ ಅವರಿಗೆ ಮದುವೆ ಆಗಿರಲಿಲ್ಲ. ಮನೆಯವರು ಹುಡುಗಿ ಹುಡುಕುತ್ತಿದ್ದರು. ಆತ ಸ್ಫುರದ್ರೂಪಿ ತರುಣ. ಅವರಿಗೆ ಹತ್ತಾರು ಪ್ರಪೋಸಲ್‌ಗಳು ಆಗಲೇ ಬಂದಿದ್ದವು. ಆದರೆ ಚೀನಕ್ಕೆ ಹೋಗಲೇಬೇಕು ಎಂದು ನಿರ್ಧಾರ ಮಾಡಿದ ವೈದ್ಯರಿಗೆ ತನ್ನ ಮನೆಯವರನ್ನು ಒಪ್ಪಿಸುವುದು ತುಂಬ ಕಷ್ಟದ ಕೆಲಸವಾಗಿತ್ತು. ಹೆತ್ತವರ ಆತಂಕ ಸಹಜವಾಗಿತ್ತು. ಆದರೆ ಕೊಟ್ನೀಸ್ ಅವರ ನಿರ್ಧಾರ ಅಚಲವಾಗಿತ್ತು.

ಚೀನಾದಲ್ಲಿ ಪರಿಸ್ಥಿತಿ ಕೈಮೀರಿ ಹೋಗಿತ್ತು

ಚೀನಾಕ್ಕೆ ಬಂದ ವೈದ್ಯರ ತಂಡ ತಕ್ಷಣ ರೋಗಿಗಳ ಸೇವೆಗೆ ನಿಲ್ಲಬೇಕಾಯಿತು. ಅಲ್ಲಿ ಪರಿಸ್ಥಿತಿ ಕೈಮೀರಿ ಹೋಗಿತ್ತು. ಆಸ್ಪತ್ರೆಗಳು ಮಾರಕವಾಗಿ ಗಾಯಗೊಂಡ ಸೈನಿಕರಿಂದ ತುಂಬಿ ತುಳುಕುತ್ತಿದ್ದವು. ಸಾಂಕ್ರಾಮಿಕ ಕಾಯಿಲೆಗಳು ಹರಡುತ್ತಿದ್ದವು.
ಆ ವೈದ್ಯರ ತಂಡ ಸಂಚಾರಿ ಕ್ಲಿನಿಕ್ ಮೂಲಕ ಗುಡ್ಡಗಾಡು ಪ್ರದೇಶಗಳಲ್ಲಿ ಸಂಚರಿಸಿ ಚಿಕಿತ್ಸೆ ನೀಡಲು ತೊಡಗಿತು. ಆದರೆ ಒಂದು ವರ್ಷ ಆದರೂ ಯುದ್ಧ ನಿಲ್ಲಲಿಲ್ಲ. ಔಷಧಿಗಳ ಸಂಗ್ರಹ ಬರಿದಾಯಿತು. ನಿದ್ದೆ, ವಿಶ್ರಾಂತಿ ಪಡೆಯಲು ಅವರಿಗೆ ಪುರುಸೊತ್ತೇ ಇಲ್ಲ. ಒಮ್ಮೆಯಂತೂ 72 ಘಂಟೆ ನಿದ್ದೆ ಮಾಡದೆ ಸರಣಿ ಆಪರೇಷನ್ ಮಾಡಬೇಕಾಯಿತು. ಒತ್ತಡಗಳ ನಡುವೆ ಕೂಡ ಅವರು ಮನೆಗೆ ವಾರಕ್ಕೊಮ್ಮೆ ಪತ್ರ ಬರೆಯುವುದನ್ನು ಮರೆಯಲಿಲ್ಲ. ಉಳಿದ ನಾಲ್ಕು ವೈದ್ಯರು ಸೋತು ಸುಣ್ಣವಾಗಿ ಒಂದೇ ವರ್ಷದಲ್ಲಿ ಭಾರತಕ್ಕೆ ಹಿಂದಿರುಗುತ್ತಾರೆ. ಆದರೆ ಕೋಟ್ನೀಸ್ ಚೀನದಲ್ಲಿಯೇ ಉಳಿದುಬಿಡುತ್ತಾರೆ ಮತ್ತು ತನ್ನ ಹೆಸರನ್ನು ಕೆ ದಿಹುವಾ ಎಂದು ಬದಲಿಸುತ್ತಾರೆ. ತಮ್ಮೊಂದಿಗೆ ನರ್ಸ್ ಆಗಿದ್ದ ಗುವೋ ಕಿಂಗ್ಲಾನ್ ಎಂಬ ಸುಂದರ ಹುಡುಗಿಯನ್ನು ಪ್ರೀತಿಸಿ ಅವರು ಮದುವೆಯಾಗುತ್ತಾರೆ. ಭಾರತ-ಚೀನ ನಡುವಿನ ಮೊದಲ ಅತ್ಯಂತ ಸುಂದರ ಪ್ರೇಮಕತೆ ಅದು.
ಆ ದಂಪತಿಗಳಿಗೆ ಗಂಡು ಮಗು ಹುಟ್ಟಿತು. ಮಗುವಿಗೆ ‘ಯಿನ್ ಹುವಾ’ ಎಂದು ಹೆಸರಿಡುತ್ತಾರೆ. ಯಿನ್ ಎಂದರೆ ಚೀನ ಭಾಷೆಯಲ್ಲಿ ಭಾರತ, ಹುವಾ ಎಂದರೆ ಚೀನ ಎಂದರ್ಥ.

ಡಾಕ್ಟರ್ ಕೊಟ್ನೀಸ್ ಆರೋಗ್ಯ ಕೈ ಕೊಟ್ಟಿತು.

ಮುಂದೆ ಅವಿಶ್ರಾಂತವಾದ ದುಡಿಮೆಯಿಂದ ಅವರ ಆರೋಗ್ಯ ಹಾಳಾಯಿತು. ಚೀನ ಸರಕಾರ ಕೊಟ್ಟ ಒಂದು ಹಳೆಯ ಜೀಪಿನಲ್ಲಿ ಅವರು ದಿನವೂ ಮೈಲುಗಟ್ಟಲೆ ದೂರ ಪ್ರಯಾಣ ಮಾಡಿ ರೋಗಿಗಳ ಚಿಕಿತ್ಸೆ ನೀಡುತ್ತಿದ್ದರು. ಔಷಧಿಗಳ ಕೊರತೆ ಇದ್ದರೂ ಗೊಣಗದೆ ವೈದ್ಯಕೀಯ ಸೇವೆ ನೀಡುತ್ತಾ ಮುಂದುವರಿದರು. ತನ್ನ ಆರೋಗ್ಯದ ಬಗ್ಗೆ ಯೋಚನೆಯನ್ನೇ ಮಾಡಲಿಲ್ಲ.
ಮಗು ಹುಟ್ಟಿದ ಕೆಲವೇ ತಿಂಗಳುಗಳಲ್ಲಿ ತೀವ್ರವಾದ ಅಪಸ್ಮಾರದಿಂದ ಅವರು ಅಸುನೀಗಿದರು. ಆಗ ಅವರಿಗೆ ಕೇವಲ 32 ವರ್ಷ ಪ್ರಾಯ ಆಗಿತ್ತು!

ಚೀನ ಸರಕಾರ ಕಂಬನಿ ಮಿಡಿಯಿತು

ಒಟ್ಟು ನಾಲ್ಕು ವರ್ಷಗಳ ಅವಧಿಯಲ್ಲಿ ಅವರುಸಾವಿರಾರು ಸೈನಿಕರ ಪ್ರಾಣ ಉಳಿಸಿದ್ದನ್ನು ಚೀನ ಸರಕಾರ ಮರೆಯಲಿಲ್ಲ. ಚೀನದ ಆಗಿನ ಮುಖ್ಯಸ್ಥ ಮಾವೋ ಕಣ್ಣೀರು ಸುರಿಸುತ್ತ ಹೇಳಿದ ಮಾತು ತುಂಬಾ ಸ್ಮರಣೀಯ.
‘The army has lost a helping hand. The nation has lost a friend. Let’s always bear in mind his internationalist spirit!’ ಎಂದು ಶ್ರದ್ಧಾಂಜಲಿ ಅರ್ಪಿಸುತ್ತಾರೆ. ಶಿಜಿಯಾಝವಂಗ್ ಎಂಬಲ್ಲಿ ಚೀನ ಸರಕಾರ ಅವರಿಗೆ ಸ್ಮಾರಕ ನಿರ್ಮಿಸಿತು. ಈ ಕಡೆ ಭಾರತ ಸರಕಾರ ಅವರ ಹುಟ್ಟೂರು ಸೋಲಾಪುರದಲ್ಲಿ ಅವರ ಪ್ರತಿಮೆ ನಿರ್ಮಿಸಿತು. ಎರಡೂ ರಾಷ್ಟ್ರಗಳು ಅವರ ಸ್ಮಾರಕ ಅಂಚೆ ಚೀಟಿಗಳನ್ನು ಹೊರತಂದವು. ಮುಂದೆ ಚೀನದ ಮುಖ್ಯಸ್ಥರು ಭಾರತಕ್ಕೆ ಬಂದಾಗಲೆಲ್ಲ ಅವರ ಹುಟ್ಟೂರಿಗೆ ಹೋಗಿ ಅವರ ಕುಟುಂಬವನ್ನು ಭೇಟಿ ಮಾಡುವ ಸಂಪ್ರದಾಯ ಆರಂಭವಾಯಿತು.

ಯಶೋಗಾಥೆ ಜನಪ್ರಿಯ ಸಿನೆಮಾ ಆಯಿತು

ಮುಂದೆ ಖ್ಯಾತ ನಿರ್ದೇಶಕ ಶಾಂತಾರಾಮ್ ಅವರು ಅದೇ ವೈದ್ಯರ ಬದುಕನ್ನು ಆಧರಿಸಿ ಡಾ. ಕೋಟ್ನಿ‌ಸ್ ಕೀ ಅಮರ್ ಕಹಾನಿ ಎಂಬ ಹಿಂದಿ ಸಿನೆಮಾ ಹೊರತಂದು ಅದೂ ಜನಪ್ರಿಯ ಆಯಿತು. ಅವರ ಬಗ್ಗೆ ಹಲವು ಪುಸ್ತಕಗಳು ಭಾರತದ ಎಲ್ಲ ಭಾಷೆಯಲ್ಲಿಯೂ ಹೊರಬಂದವು. ಅವರು ನಿಜವಾದ ಅರ್ಥದಲ್ಲಿ ವಿಶ್ವ ಮಾನವ ಆದರು. ಕೊಟ್ನೀಸ್ ಮರಣದ ನಂತರ ಅವರ ಚೀನದ ಪತ್ನಿ ತನ್ನ ಮಗುವಿನ ಜತೆ ಭಾರತಕ್ಕೆ ಬಂದು ಅವರ ಸೋಲಾಪುರದ ಮನೆಯವರನ್ನು ಭೇಟಿ ಮಾಡಿ ಕಣ್ಣೀರು ಹಾಕಿದ್ದು, ಅವರನ್ನು ವೈದ್ಯರ ಮನೆಯವರು ಮನೆಯ ಸೊಸೆಯಾಗಿ ಸ್ವೀಕಾರ ಮಾಡಿದ್ದು ಮರೆಯುವ ದೃಶ್ಯವೇ ಅಲ್ಲ.

ಭರತ ವಾಕ್ಯ
ಮಾನವ ಸೋದರತೆಯು ರಾಷ್ಟ್ರಗಳ ಎಲ್ಲೆಗಳನ್ನು ಮೀರಿ ನಿಲ್ಲುವ ಅದ್ಭುತವಾದ ವ್ಯಕ್ತಿತ್ವ ಅವರದ್ದು. ಡಾಕ್ಟರ್ ದ್ವಾರಕಾನಾಥ ಕೊಟ್ನೀಸ್ ಸೇವೆ, ಅವರ ದಣಿವರಿಯದ ಜೀವನೋತ್ಸಾಹ ಅಜರಾಮರ.
✒️ರಾಜೇಂದ್ರ ಭಟ್ ಕೆ.
ಜೇಸಿ ರಾಷ್ಟ್ರೀಯ ತರಬೇತಿದಾರ

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top