ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಆಗಮನ
ಬೆಂಗಳೂರು: ಅಧ್ಯಕ್ಷರೂ ಆಯ್ಕೆಯೂ ಸೇರಿದಂತೆ ಹಲವು ಪ್ರಮುಖ ವಿಚಾರಗಳನ್ನು ಚರ್ಚಿಸುವ ಸಲುವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಬೆಂಗಳೂರಿಗೆ ಆಗಮಿಸಿದ್ದಾರೆ. ನಿತಿನ್ ನಬಿನ್ ಶನಿವಾರ ತಡರಾತ್ರಿ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಬೆಂಗಳೂರಿಗೆ ಚೊಚ್ಚಲ ಭೇಟಿ ನೀಡಿದ್ದು, ವಿಮಾನ ನಿಲ್ದಾಣದಲ್ಲಿ ಅವರನ್ನು ರಾಜ್ಯಾಧ್ಯಕ್ಷ ವಿಜಯೇಂದ್ರ ಸ್ವಾಗತಿಸಿದರು.
ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಿತಿನ್ ನಬಿನ್ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಹಿರಿಯ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವು ಪ್ರಮುಖ ನಾಯಕರು ಹೂಗುಚ್ಛ ನೀಡಿ, ಶಾಲು ಹೊದಿಸಿ ಭವ್ಯವಾಗಿ ಸ್ವಾಗತಿಸಿದರು.
ಅಲ್ಲಿಂದ ಅವರು ಹೆಬ್ಬಾಳದ ಹೋಟೆಲ್ಗೆ ಆಗಮಿಸಿದರು. ಕಾಕತಾಳೀಯ ಎಂಬಂತೆ ರಾಷ್ಟ್ರೀಯ ಅಧ್ಯಕ್ಷರ ಜನ್ಮದಿನವೂ ಆಗಿದ್ದರಿಂದ ಹೋಟೆಲ್ನಲ್ಲಿ ರಾಜ್ಯ ನಾಯಕರು ಸಿಹಿ ತಿನ್ನಿಸುವ ಮೂಲಕ ನಿತಿನ್ ನಬಿನ್ ಅವರ ಹುಟ್ಟುಹಬ್ಬವನ್ನು ಆಚರಿಸಿ ಶುಭ ಕೋರಿದರು. ಬಳಿಕ ಅವರು ಜಕ್ಕೂರಿನಲ್ಲಿರುವ ತಮ್ಮ ಸಹೋದರಿಯ ಮನೆಗೆ ತೆರಳಿ, ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡಿದ್ದಾರೆ.
ಇಂದು ಪಕ್ಷದ ಕಚೇರಿಯಲ್ಲಿ ನಿತಿನ್ ನಬಿನ್ ಅವರು ಸರಣಿ ಹೈವೋಲ್ಟೇಜ್ ಮೀಟಿಂಗ್ಗಳನ್ನು ನಡೆಸಲಿದ್ದಾರೆ. ರಾಜ್ಯದ ಹಾಲಿ-ಮಾಜಿ ಶಾಸಕರು, ಸಂಸದರು, ಎಂಎಲ್ಸಿಗಳು ಹಾಗೂ ಪದಾಧಿಕಾರಿಗಳ ಜೊತೆ ಅವರು ಪ್ರತ್ಯೇಕ ಸಭೆ ನಡೆಸಲಿದ್ದಾರೆ. ಸಂಜೆ ರಾಜ್ಯ ಕೋರ್ ಕಮಿಟಿ ಸಭೆಯೂ ನಡೆಯಲಿದೆ. ಮುಖ್ಯವಾಗಿ ರಾಜ್ಯ ಬಿಜೆಪಿಯಲ್ಲಿ ದೀರ್ಘಕಾಲದಿಂದ ಬೇರು ಬಿಟ್ಟಿರುವ ಆಂತರಿಕ ಸಂಘರ್ಷ ಹಾಗೂ ಭಿನ್ನಮತಕ್ಕೆ ಸಂಪೂರ್ಣ ಫುಲ್ಸ್ಟಾಪ್ ಇಡಲು ರಾಷ್ಟ್ರೀಯ ಅಧ್ಯಕ್ಷರು ಕಠಿಣ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಪಕ್ಷವನ್ನು ಅಧಿಕಾರಕ್ಕೆ ತರಲು ಒಟ್ಟಾಗಿ ಶ್ರಮಿಸಬೇಕೆಂದು ನಾಯಕರಿಗೆ ಒಗ್ಗಟ್ಟಿನ ಮಂತ್ರ ಬೋಧಿಸಲಿದ್ದಾರೆ.
























