ಮೈಸೂರು: ಕೆಲಸ ಮುಗಿದ ಮೇಲೆ ಪತ್ನಿ ತಡವಾಗಿ ಮನೆಗೆ ಬರುತ್ತಾಳೆ ಎನ್ನುವ ಕ್ಷುಲ್ಲಕ ಕಾರಣವನ್ನಿಟ್ಟುಕೊಂಡು ಪತ್ನಿಯನ್ನು ಪತಿಯೇ ಕೊಡಲಿಯಿಂದ ಕೊಚ್ಚಿ ಕೊಂದ ಘಟನೆ ಹಳೆ ಕೆಸರೆ ಗ್ರಾಮದಲ್ಲಿ ನಡೆದಿದೆ.
ಮೃತಳನ್ನು ಪುಷ್ಪ (24) ಎಂದು ಗುರುತಿಸಲಾಗಿದೆ. ಪುಷ್ಪ ಪತಿ ಮಹೇಶ್ ಎಂಬಾತನೇ ಹತ್ಯೆ ಮಾಡಿದ ಆರೋಪಿ. ಪತ್ನಿ ಮನೆಗೆ ಬರುತ್ತಿದ್ದ ಹಾಗೆ ಆಕೆಗೆ ಕೊಡಲಿಯಿಂದ ಹಲ್ಲೆ ನಡೆಸಿ, ನೆಲಕ್ಕೆ ಬಿದ್ದಾಗ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ಪುಷ್ಪ ನಗರದ ಬಟ್ಟೆ ಅಂಗಡಿ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರು ಕೆಲಸ ಮುಗಿಸಿ ಸಂಜೆ ತಡವಾಗಿ ಮನೆಗೆ ಬರುತ್ತಾರೆ ಎಂದು ಕೋಪದಿಂದ ಪತಿ ಈ ಕೃತ್ಯ ಎಸಗಿದ್ದಾನೆ. ಆಕೆ ತಡವಾಗಿ ಬರುವುದು ಹಿಂದೆ ಬೇರೆ ಏನಾದರೂ ಸಂಬಂಧ ಇರಬಹುದೇ? ಎನ್ನುವ ಸಂದೇಹದಿಂದ ಮಹೇಶ್ ಈ ಕೊಲೆ ನಡೆಸಿದ್ದಾನೆ. ಕೆಲಸ ಬಿಟ್ಟು ತಡವಾಗಿ ಮನೆಗೆ ಬರುತ್ತಿದ್ದ ಪತ್ನಿಯ ಜೊತೆಗೆ ಮಹೇಶ್ ನಿತ್ಯ ಜಗಳ ಮಾಡುತ್ತಿದ್ದ ಎಂದೂ ತಿಳಿದು ಬಂದಿದೆ.
ಪತ್ನಿಯನ್ನು ಕೊಲೆ ಮಾಡಿದ ಬಳಿಕ ತಾನೇ ಪೊಲೀಸ್ ಠಾಣೆಗೆ ಹೋಗಿ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

























