ರಸ್ತೆ ಅಗಲೀಕರಣ ಕಾಮಗಾರಿ ನಡೆಯುವಾಗ ಸಂಭವಿಸಿದ ದುರಂತ
ಶಿವಮೊಗ್ಗ: ಹುಲಿಕಲ್ ಘಾಟ್ನಲ್ಲಿ (ಬಾಳೇಬರೆ) ರಸ್ತೆ ಅಗಲೀಕರಣ ವೇಳೆ ಗುಡ್ಡ ಕುಸಿತ ಸಂಭವಿಸಿ ಮೂವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಗುರುವಾರ ಸಂಜೆ ನಡೆದಿದೆ. ಸ್ಥಳದಲ್ಲಿಯೇ ಇದ್ದ ಕಾಮಗಾರಿ ಮೇಲ್ವಿಚಾರಕ ಸೇರಿ ಮೂವರು ಮೃತಪಟ್ಟಿದ್ದಾರೆ. ಕಾಮಗಾರಿ ಮೇಲ್ವಿಚಾರಕ ಚಕ್ಕಾರು ಗ್ರಾಮದ ರಾಘು (37), ಹಾವೇರಿ ಜಿಲ್ಲೆಯ ನೆಲಗಲು ಗ್ರಾಮದ ರಾಜು (30) ಹಾಗೂ ಶಬ್ಬೀರ್(40) ಮೃತ ಕಾರ್ಮಿಕರು.
ಮಲೆನಾಡು ಮತ್ತು ಕರಾವಳಿ ಸಂಪರ್ಕಕ್ಕೆ ಹುಲಿಕಲ್ ಘಾಟ್ ಮುಖ್ಯ ಸಂಪರ್ಕ ಸೇತುವೆಯಾಗಿದೆ. ರಾತ್ರಿ ವೇಳೆ ಆಗುಂಬೆ ಘಾಟಿಯಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಇಲ್ಲದ ಕಾರಣ ಎಲ್ಲ ರೀತಿಯ ವಾಹನಗಳು ಹುಲಿಕಲ್ ಘಾಟ್ನಲ್ಲೇ ಸಂಚರಿಸುತ್ತವೆ. ಗುರುವಾರ ಸಂಜೆಯಿಂದಲೇ ಘಾಟಿ ಮಾರ್ಗ ಬಂದ್ ಮಾಡಿದ್ದರಿಂದ ಈ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಶಿವಮೊಗ್ಗದಿಂದ ಗುರುವಾರ ಸಂಜೆ ಹುಲಿಕಲ್ ಘಾಟ್ ಮಾರ್ಗವಾಗಿ ಕರಾವಳಿ ಕಡೆಗೆ ಹೊರಟ ಸಾವಿರಾರು ವಾಹನಗಳು ಘಾಟಿವರೆಗೆ ಬಂದು ಬಳಿಕ ನಾಗೋಡಿ – ಕೊಲ್ಲೂರು ಮಾರ್ಗವಾಗಿ ಕರಾವಳಿ ಕಡೆಗೆ ಸಂಚರಿಸಿದವು.
ಗುರುವಾರ ಸಂಜೆ ತಡೆಗೋಡೆ ಕಾಮಗಾರಿ ಮಾಡುವಾಗ ದಿಢೀರ್ ಆಗಿ ಧರೆ ಕುಸಿತವಾಗಿದೆ. ಈ ವೇಳೆ ಅದರಡಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರೂ ಮಣ್ಣಿನಡಿ ಸಿಲುಕಿ ಸಾವನ್ನಪ್ಪಿದ್ದಾರೆ. ಸುಮಂತ್, ಪರಮೇಶ್, ಆಶೋಕ್ ಹಾಗೂ ಸಚಿನ್ ಎನ್ನುವ ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ನಗರ ಮತ್ತು ಹೊಸನಗರ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಹೊಸನಗರ ತಹಶೀಲ್ದಾರ್ ಭರತ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಕುಂದಾಪುರ-ಶಿವಮೊಗ್ಗ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತ ಉಂಟಾಗಿದೆ.

























