ಅಡಿಕೆ ಹಾನಿಕಾರಕ ಅಲ್ಲ ಎಂದು ತಿಳಿಸಿದ ಸಂಶೋಧನಾ ಮಧ್ಯಂತರ ವರದಿ
ಬೆಂಗಳೂರು: ಅಡಿಕೆಯಲ್ಲಿ ಆರೋಗ್ಯಕ್ಕೆ ಮಾರಕವಾಗುವ ಅಪಾಯಕಾರಿ ಅಂಶ ಇಲ್ಲ ಎಂದು ಸರ್ಕಾರ ಹೇಳಿದೆ. ಈ ಕುರಿತು ಕಲಾಪದಲ್ಲಿ ಹೇಳಿಕೆ ನೀಡಿರುವ ಕೃಷಿ ಸಚಿವ ಚಲುವರಾಯಸ್ವಾಮಿ ಅಡಿಕೆಯಲ್ಲಿ ಆರೋಗ್ಯಕ್ಕೆ ಹಾನಿಕಾರಕವಾದ ಅಂಶಗಳು ಇಲ್ಲ ಎಂಬುದು ಸಂಶೋಧನಾ ಮಧ್ಯಂತರ ವರದಿಯಲ್ಲಿ ತಿಳಿದುಬಂದಿದೆ ಎಂದಿದ್ದಾರೆ.
ವಿಧಾನ ಪರಿಷತ್ನಲ್ಲಿ ಬಿಜೆಪಿಯ ಪ್ರತಾಪ್ಸಿಂಹ ನಾಯಕ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಚಲುವರಾಯಸ್ವಾಮಿ, ಅಡಿಕೆ ಹಾನಿಕಾರಕವಲ್ಲ ಮತ್ತು ಅದರಿಂದ ಕ್ಯಾನ್ಸರ್ ಬರುವುದಿಲ್ಲ ಎಂಬುದನ್ನು ನಿರೂಪಿಸಲು ಸಂಶೋಧನೆಗಳು ನಡೆಯುತ್ತಿವೆ. ಅಂತಿಮ ವರದಿ ಬಂದ ನಂತರ ಜನರಿಗೆ ಸ್ಪಷ್ಟ ಸಂದೇಶ ನೀಡಲಾಗುತ್ತಿದೆ. ಮಧ್ಯಂತರ ವರದಿ ಅಡಿಕೆಯಲ್ಲಿ ಹಾನಿಕಾರಕ ಅಂಶ ಇಲ್ಲ ಎಂದು ತಿಳಿಸಿದೆ ಎಂಬುದಾಗಿ ಹೇಳಿದ್ದಾರೆ.
ಅಡಿಕೆ ಹಾಳೆಯ ತಟ್ಟೆಗಳಲ್ಲೂ ಅಲ್ಯುಲಾಯ್ಡ್ ಅಂಶ ಬಹಳ ಕಡಿಮೆ ಇರುವುದು ಸಂಶೋಧನೆಯಿಂದ ತಿಳಿದುಬಂದಿದೆ. ಬಲಿತ ಅಡಿಕೆಗೆ ಹೋಲಿಸಿದರೆ ಹಾಳೆಗಳ ತಟ್ಟೆಯಲ್ಲಿರುವ ಅಲ್ಯುಲಾಯ್ಡ್ ಅಂಶ ಸಾವಿರಾರು ಪಟ್ಟು ಕಡಿಮೆಯಿದೆ. ಇಷ್ಟು ಚಿಕ್ಕ ಪ್ರಮಾಣದ ಅಲ್ಯುಲಾಯ್ಡ್ ಆಹಾರಕ್ಕೆ ಸೇರುವ ಸಾಧ್ಯತೆ ಇಲ್ಲ. ಹೀಗಾಗಿ ಪರಿಸರಸ್ನೇಹಿ ಪರಿಕರವಾಗಿ ಅಡಿಕೆ ಹಾಳೆಯ ತಟ್ಟೆ ಮತ್ತಿತರ ಉತ್ಪನ್ನಗಳನ್ನು ಬಳಸಲು ಯಾವುದೇ ಆತಂಕವಿಲ್ಲ ಎಂದಿದ್ದಾರೆ.
ವಿಶ್ವಸಂಸ್ಥೆ ಪದೇಪದೆ ಅಡಿಕೆಯಲ್ಲಿ ಕ್ಯಾನ್ಸರ್ಕಾರಕ ಅಂಶ ಇರುವುದರಿಂದ ಅದನ್ನು ನಿಷೇಧಿಸಬೇಕೆಂದು ಹೇಳುತ್ತಿರುವುದರಿಂದ ಅಡಿಕೆ ಬೆಳೆಗಾಗರರಲ್ಲಿ ಆತಂಕ ಆವರಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವೇ ಅಡಿಕೆಯ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಅಡಿಕೆ ಬಾಯಿ ಕ್ಯಾನ್ಸರ್ಗೆ ಕಾರಣವಾಗುತ್ತದೆ ಎಂದು ಹಲವು ಸಲ ಹೇಳಿದೆ. ಇದರ ಪರಿಣಾಮವಾಗಿ ಕರಾವಳಿ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಪ್ರಧಾನ ತೋಟಗಾರಿಕೆ ಬೆಳೆಯಾಗಿರುವ ಅಡಿಕೆ ಬೆಳೆಯುವ ರೈತರಲ್ಲಿ ಆತಂಕ ಉಂಟಾಗಿದೆ.



























