ಉಪ್ಪಿನಂಗಡಿ: ಪಾರದರ್ಶಕತೆಯಿಂದ ಸಮಾಜ ಸೇವಾ ಕಾರ್ಯಗಳನ್ನು ಮಾಡುವ ಸಂಸ್ಥೆಗಳಿಗೆ ಜನರ ಬೆಂಬಲವಿದ್ದು ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಸೇವಾ ಕಾರ್ಯಗಳನ್ನು ನಡೆಸಲು ಕರ್ನಾಟಕ ಸೇವಾ ಭಾರತೀ ಸಂಸ್ಥೆಯು ಮಾರ್ಗದರ್ಶನ ನೀಡಲು ಬದ್ಧವಾಗಿದೆ ಎಂದು ಸೇವಾ ಭಾರತಿ ಸಂಸ್ಥೆಯ ದಕ್ಷಿಣ ಪ್ರಾಂತ್ಯದ ಸಂಚಾಲಕ ಕೆ. ಚೆನ್ನಯ್ಯ ಸ್ವಾಮಿ ದೇರೆಬೈಲು ತಿಳಿಸಿದರು.

ಉಪ್ಪಿನಂಗಡಿಯ ಪಾತಾಳ ನಿವಾಸದಲ್ಲಿ ಜರಗಿದ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ರಿ. ಮೆಲ್ಕಾರು ಬಂಟ್ವಾಳ ಇದರ ಕೇಂದ್ರ ಸಮಿತಿಯ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಸಿದ್ಧ ಕಲಾವಿದ ದಿ. ಪಾತಾಳ ವೆಂಕಟರಮಣ ಭಟ್ಟರ ಪುತ್ರ ರಾಮ ಪಾತಾಳ ಅವರ ನಿವಾಸದಲ್ಲಿ ಜರಗಿದ ಕಾರ್ಯಕ್ರಮವನ್ನು ಗೌರಿ ಪಾತಾಳ ದೀಪ ಬೆಳಗಿಸಿ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷ ಕೆಯ್ಯೂರು ನಾರಾಯಣ ಭಟ್ ವಹಿಸಿದ್ದು, ಪ್ರತಿಷ್ಠಾನದ ವತಿಯಿಂದ ಸಹಕಾರಿ ಸಂಸ್ಥೆಯನ್ನು ಸ್ಥಾಪಿಸಲು ಎಲ್ಲರೂ ಸಹಕರಿಸಬೇಕೆಂದರು.
ಅತಿಥಿ ನಿವೃತ್ತ ಬಿಎಸ್ಎಫ್ ಕಮಾಂಡೆಂಟ್ ಮತ್ತು ಉಪ್ಪಿನಂಗಡಿ ಅಮೂಲ್ಯ ಗ್ಯಾಸಿನ ಮಾಲಕ ಚಂದಪ್ಪ ಮೂಲ್ಯ ಮಾತನಾಡಿ, ಗಳಿಸಿದ ಆದಾಯದಿಂದ ಸಮಾಜ ಸೇವಾ ಕಾರ್ಯಗಳಿಗೆ ನಿರ್ದಿಷ್ಟ ಅಂಶವನ್ನು ವಿನಿಯೋಗಿಸುವ ಸಂಪ್ರದಾಯವನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕೆಂದು ತಿಳಿಸಿದರು.
ಪ್ರತಿಷ್ಠಾನದ ಖಜಾಂಜಿ ಅನಾರಕೃಷ್ಣ ಶರ್ಮ ಪರಿಶೋಧಿತ ಲೆಕ್ಕಪತ್ರಮಂಡನೆ ಮಾಡಿದರು.
ಕೃಷ್ಣ ಭಟ್ ಲಕ್ಷ್ಮಿ ನಗರ, ಜಿ .ಕೃಷ್ಣರಾವ್ ಅರ್ತಿಲ, ಅಂಬಾ ಪ್ರಸಾದ ಪಾತಾಳ, ಎಲ್. ಕೇಶವ, ಜಯಂತಿ ಎ. ಪ್ರಸಾದ, ಅಕ್ಷತಾ ಪಾತಾಳ, ಉಮೇಶ ಶೆಣೈ ರಾಮನಗರ, ರಾಜೇಶ ಪ್ರಭು ಉಪ್ಪಿನಂಗಡಿ, ಶಿವರಾಮ ಪ್ರಸಾದ, ವೇದಾವತಿ ಮೊದಲಾದವರು ಉಪಸ್ಥಿತರಿದ್ದರು.
ಉದಯಶಂಕರ ರೈ ಪುಣಚ ಪ್ರಾರ್ಥಿಸಿ, ಪುತ್ತೂರು ಘಟಕದ ಉಪಾಧ್ಯಕ್ಷ ಈಶ್ವರ ಭಟ್ ಗುಂಡ್ಯಡ್ಕ ಸ್ವಾಗತಿಸಿದರು.ಪ್ರತಿಷ್ಠಾನದ ಕಾರ್ಯದರ್ಶಿ ದಿವಾಕರ ಅಚಾರ್ಯ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
ಭವಾನಿ ಶಂಕರ ಶೆಟ್ಟಿ ಪುತ್ತೂರು ವಂದಿಸಿದರು.


























