ಐಸಿಯುನಲ್ಲಿದ್ದ ರೋಗಿಗಳು ಉಸಿರುಕಟ್ಟಿ ಒದ್ದಾಡಿ ಸಾವು
ಕಟಕ್ : ಒಡಿಶಾದ ಕಟಕ್ ನಗರದಲ್ಲಿರುವ ಆಸ್ಪತ್ರೆಯೊಂದರಲ್ಲಿ ಬೆಂಕಿ ಅವಘಡಕ್ಕೆ 10 ರೋಗಿಗಳು ಬಲಿಯಾಗಿದ್ದಾರೆ. 11ಕ್ಕೂ ಹೆಚ್ಚು ಆಸ್ಪತ್ರೆ ಸಿಬ್ಬಂದಿಗೆ ಗಾಯಗಳಾಗಿವೆ. ಎಸ್ಸಿಬಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಈ ದುರಂತ ಸಂಭವಿಸಿದೆ. ಮಧ್ಯರಾತ್ರಿಯ ನಂತರ 2.30ರಿಂದ 3 ಗಂಟೆಯ ಸಮಯದಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿರಬಹುದು ಎಂದು ಶಂಕಿಸಲಾಗಿದೆ.
ಆಸ್ಪತ್ರೆಯ ಟ್ರಾಮಾ ಕೇರ್ ವಿಭಾಗದ ಐಸಿಯುನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಗಂಭೀರವಾಗಿ ಗಾಯಗೊಂಡಿರುವ ರೋಗಿಗಳು ಈ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಘಟನೆಯಲ್ಲಿ ಐಸಿಯುನಲ್ಲಿದ್ದ 10 ರೋಗಿಗಳು ಬಲಿಯಾಗಿದ್ದಾರೆ. ಅವರನ್ನು ರಕ್ಷಿಸಲು ಯತ್ನಿಸಿದ ಸಿಬ್ಬಂದಿ ಪೈಕಿ 11 ಮಂದಿಗೆ ಗಾಯಗಳಾಗಿವೆ.
ಬೆಂಕಿ ಅವಘಡ ಸಂಭವಿಸಿದ ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಐಸಿಯುನಲ್ಲಿದ್ದ ಇತರ ರೋಗಿಗಳನ್ನು ಆಸ್ಪತ್ರೆಯ ಬೇರೆ ವಾರ್ಡ್ಗಳಿಗೆ ಶಿಫ್ಟ್ ಮಾಡಲಾಗಿದೆ. ಒಟ್ಟು 23 ರೋಗಿಗಳನ್ನು ಬೇರೆಡೆ ವರ್ಗಾಯಿಸಲಾಗಿದೆ. ಹೀಗೆ ಬೇರೆಡೆ ಸಾಗಿಸುವ ಹಂತದಲ್ಲಿ 7 ಮಂದಿ ರೋಗಿಗಳು ಅಸುನೀಗಿದ್ದಾರೆ. ಮೂರು ರೋಗಿಗಳು ನಂತರ ಮೃತಪಟ್ಟಿದ್ದಾರೆ ಎನ್ನಲಾಗಿದೆ.
25 ಲಕ್ಷ ರೂ ಪರಿಹಾರ
ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ, ಆರೋಗ್ಯ ಸಚಿವ ಮುಕೇಶ್ ಮಹಾಲಿಂಗ್ ಅವರು ಖುದ್ದಾಗಿ ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಮೃತಪಟ್ಟಿರುವ ರೋಗಿಗಳ ಸಂಬಂಧಿಕರಿಗೆ 25 ಲಕ್ಷ ರೂ ಪರಿಹಾರವನ್ನು ಸಿಎಂ ಘೋಷಿಸಿದ್ದಾರೆ. ಹಾಗೆಯೇ, ಗಾಯಗೊಂಡಿರುವ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ಲಭ್ಯವಾಗುವಂತೆ ನೋಡಿಕೊಳ್ಳಲು ಸಂಬಂಧಿತ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.


























