ಮಡಿಕೇರಿ: ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ 34 ವರ್ಷದ ನರಹಂತಕ ಕಾಡಾನೆಯನ್ನು ಪಾಲಿಬೆಟ್ಟ ಸಮೀಪದ ಚೆನ್ನಯ್ಯನಕೋಟೆಯ ಬಾಡಗ ಬಾಣಂಗಾಲ ಎಂಬಲ್ಲಿಯ ಕಾಫಿ ತೋಟದಲ್ಲಿ ಸೆರೆ ಹಿಡಿಯಲಾಗಿದೆ.
ಈ ಆನೆ ಹಾಡುಹಗಲೇ ಕಾಫಿ ಬೆಳೆಗಾರರೊಬ್ಬರನ್ನು ಬಲಿ ಪಡೆದಿತ್ತು. ನರಹಂತಕ ಆನೆಯ ಸೆರೆಗೆ ಅರಣ್ಯ ಇಲಾಖೆಯು ಸಾಕಾನೆಗಳಾದ ಕಂಜನ್, ಸುಗ್ರೀವ, ಧನಂಜಯ, ಪ್ರಶಾಂತ್, ಹರ್ಷ, ಅಯ್ಯಪ್ಪನನ್ನು ಬಳಕೆ ಮಾಡಿಕೊಂಡಿದ್ದರು.
ಪಶುವೈದ್ಯರು ಕಾಡಾನೆಗೆ ಅರಿವಳಿಕೆ ಔಷಧ ನೀಡಿದ್ದು, ಬಳಿಕ ಸಾಕಾನೆಗಳು ಕಾಡಾನೆಯನ್ನು ಸುತ್ತುವರಿದು ಯಶಸ್ವಿಯಾಗಿ ಬಂಧಿಸಲಾಗಿದೆ.


























