ಇರಾನ್ ಆರ್ಥಿಕತೆಯ ಬೆನ್ನೆಲುಬಾದ ಖಾರ್ಗ್ ದ್ವೀಪ ಸರ್ವನಾಶ
ಟೆಹ್ರಾನ್ : ಮಧ್ಯಪ್ರಾಚ್ಯದ ಇತಿಹಾಸದಲ್ಲೇ ಹಿಂದೆಂದೂ ಕಾಣದಂತಹ ಭೀಕರ ಬಾಂಬ್ ದಾಳಿಯನ್ನು ಅಮೆರಿಕ ಇರಾನ್ ಮೇಲೆ ಮಾಡಿದೆ. ಇರಾನ್ನ ಮಿಲಿಟರಿ ಶಕ್ತಿ ಮತ್ತು ಆರ್ಥಿಕತೆಯ ಮೇಲೆ ಅಮೆರಿಕದ ಸೇನೆ ಮರಣಾಂತಿಕ ಪೆಟ್ಟು ನೀಡಿದ್ದು, ಈ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕೃತ ಘೋಷಣೆ ಮಾಡಿದ್ದಾರೆ. ಇರಾನ್ನ ಆರ್ಥಿಕತೆಯ ಬೆನ್ನೆಲುಬು ಎನ್ನಲಾದ ಖಾರ್ಗ್ ದ್ವೀಪದ ಮೇಲೆ ಅಮೆರಿಕ ಅತ್ಯಂತ ಶಕ್ತಿಶಾಲಿ ಬಾಂಬ್ಗಳ ಮಳೆ ಸುರಿಸಿದೆ. ಇದರಿಂದ ಇರಾನ್ನ ತೈಲ ರಫ್ತು ಮತ್ತು ಆರ್ಥಿಕ ವ್ಯವಸ್ಥೆಗೆ ಭಾರಿ ಹೊಡೆತ ಬಿದ್ದಿದೆ.
ಇರಾನ್ನ ಆರ್ಥಿಕತೆಯ ಬೆನ್ನೆಲುಬು ಎನ್ನಲಾದ ಖಾರ್ಗ್ ದ್ವೀಪದ ಮೇಲೆ ಅಮೆರಿಕ ಅತ್ಯಂತ ಶಕ್ತಿಶಾಲಿ ಬಾಂಬ್ಗಳ ಮಳೆ ಸುರಿಸಿದೆ. ಇದರಿಂದ ಇರಾನ್ನ ತೈಲ ರಫ್ತು ಮತ್ತು ಆರ್ಥಿಕ ವ್ಯವಸ್ಥೆಗೆ ಭಾರಿ ಹೊಡೆತ ಬಿದ್ದಿದೆ. ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಹೋರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಮುಕ್ತ ಸಂಚಾರಕ್ಕೆ ಯಾರಾದರೂ ಅಡ್ಡಿಪಡಿಸಿದರೆ ಅಮೆರಿಕ ಸುಮ್ಮನಿರುವುದಿಲ್ಲ ಎಂದು ಟ್ರಂಪ್ ಎಚ್ಚರಿಸಿದ್ದಾರೆ.
ಇರಾನ್ ಯಾವುದೇ ಕಾರಣಕ್ಕೂ ಪರಮಾಣು ಅಸ್ತ್ರ ಹೊಂದುವಂತಿಲ್ಲ. ವಿಶ್ವದ ಶಾಂತಿಗೆ ಧಕ್ಕೆ ತರುವ ಸಾಮರ್ಥ್ಯವನ್ನು ಇರಾನ್ಗೆ ಪಡೆಯಲು ಬಿಡುವುದಿಲ್ಲ ಎಂದು ಟ್ರಂಪ್ ಗುಡುಗಿದ್ದಾರೆ. ಇರಾನ್ ಮಿಲಿಟರಿ ಪಡೆಗಳು ಕೂಡಲೇ ಶರಣಾಗಬೇಕು. ಇನ್ನುಳಿದಿರುವ ದೇಶವನ್ನಾದರೂ ಉಳಿಸಿಕೊಳ್ಳಬೇಕಾದರೆ ಆಯುಧಗಳನ್ನು ಕೆಳಗಿಡಬೇಕು ಎಂದು ಇರಾನ್ಗೆ ಟ್ರಂಪ್ ಅಂತಿಮ ಎಚ್ಚರಿಕೆ ನೀಡಿದ್ದಾರೆ. ಈ ದಾಳಿಯು ಜಾಗತಿಕ ರಾಜಕೀಯದಲ್ಲಿ ಭಾರಿ ಕಂಪನ ಸೃಷ್ಟಿಸಿದ್ದು, ಕಚ್ಚಾತೈಲ ಬೆಲೆ ಏರಿಕೆಯಾಗುವ ಭೀತಿ ಎದುರಾಗಿದೆ.
ಮೊಜ್ತಾಬಾ ಖಮೇನಿ ತಲೆಗೆ 92.47 ಕೋ. ರೂ. ಬಹುಮಾನ ಘೋಷಣೆ
ಈ ನಡುವೆ ಇರಾನಿನ ಹೊಸ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿಯ ಬಗ್ಗೆ ಸುಳಿವು ನೀಡಿದವರಿಗೆ 10 ಮಿಲಿಯನ್ ಡಾಲರ್(92.47 ಕೋಟಿ ರೂ.) ಬಹುಮಾನ ನೀಡುವುದಾಗಿ ಅಮೆರಿಕ ಘೋಷಿಸಿದೆ.
ಮೊಜ್ತಾಬಾ ಖಮೇನಿ ಸೇರಿದಂತೆ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ಗೆ ಸಂಬಂಧಿಸಿದ ಹಲವಾರು ಹಿರಿಯ ಅಧಿಕಾರಿಗಳ ಫೋಟೋವನ್ನು ಅಮೆರಿಕದ ಡಿಪಾರ್ಟ್ಮೆಂಟ್ನ ಡಿಪ್ಲೊಮ್ಯಾಟಿಕ್ ಸೆಕ್ಯುರಿಟಿ ಸರ್ವಿಸ್ ನಡೆಸುವ ರಿವಾರ್ಡ್ಸ್ ಫಾರ್ ಜಸ್ಟೀಸ್ ಅಪ್ಲೋಡ್ ಮಾಡಿ ನಗದು ಬಹುಮಾನ ಪ್ರಕಟಿಸಿದೆ.
ಈ ವ್ಯಕ್ತಿಗಳು ಪ್ರಪಂಚದಾದ್ಯಂತ ಭಯೋತ್ಪಾದನೆಯನ್ನು ಯೋಜಿಸುವ, ಸಂಘಟಿಸುವ ಮತ್ತು ಕಾರ್ಯಗತಗೊಳಿಸುವ ಐಆರ್ಜಿಸಿಯ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಬಗ್ಗೆ ಯಾವುದೇ ಮಾಹಿತಿ ಇದ್ದರೆ ಅದನ್ನು ಟಾರ್ ಆಧಾರಿತ ಟಿಪ್ಲೈನ್ ಅಥವಾ ಸಿಗ್ನಲ್ ಮೂಲಕ ನಮಗೆ ಕಳುಹಿಸಿ ಎಂದು ಕೇಳಿಕೊಂಡಿದೆ.
ಇರಾನ್ ಶೀಘ್ರವೇ ಶರಣಾಗಬಹುದು ಎಂದು ಭಾವಿಸಿದ್ದೇನೆ. ಒಂದು ವೇಳೆ ಶರಣಾಗದಿದ್ದರೆ ಮುಂದಿನ ವಾರ ಇರಾನ್ ಮೇಲೆ ಭಾರಿ ದಾಳಿ ನಡೆಸಲಾಗುವುದು ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಇರಾನ್ ದಾಳಿಯಲ್ಲಿ ಮತ್ತಿಬ್ಬರು ಭಾರತೀಯರು ಸಾವು
ಒಮಾನ್ನ ಸೋಹಾರ್ ನಗರದ ಮೇಲೆ ಇರಾನ್ ನಡೆಸಿದ ಡ್ರೋನ್ ದಾಳಿಯಲ್ಲಿ ಇಬ್ಬರು ಭಾರತೀಯರು ಸಾವನ್ನಪ್ಪಿದ್ದು, 10 ಭಾರತೀಯರು ಸೇರಿದಂತೆ 11 ಜನರು ಗಾಯಗೊಂಡಿದ್ದಾರೆ.
ಅಲ್-ಅವಾಹಿ ಕೈಗಾರಿಕಾ ಪ್ರದೇಶದಲ್ಲಿ ಡ್ರೋನ್ ದಾಳಿ ನಡೆದಿದೆ. ಇದರ ಪರಿಣಾಮವಾಗಿ ಇಬ್ಬರು ವಿದೇಶಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಇತರ ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ವಿದೇಶಾಂಗ ಸಚಿವಾಲಯದ ಕೊಲ್ಲಿ ವಿಭಾಗದ ಹೆಚ್ಚುವರಿ ಕಾರ್ಯದರ್ಶಿ ಅಸೀಮ್ ಮಹಾಜನ್, ಈ ಘಟನೆ ಮಸ್ಕತ್ ಬಳಿಯ ಸೋಹಾರ್ ನಗರದಲ್ಲಿ ನಡೆದಿದೆ ಎಂದು ದೃಢಪಡಿಸಿದ್ದಾರೆ.
ಗಾಯಗೊಂಡ 11 ಜನರಲ್ಲಿ 10 ಮಂದಿ ಭಾರತೀಯರು. ಐವರು ಈಗಾಗಲೇ ಚಿಕಿತ್ಸೆ ಪಡೆದು ತೆರಳಿದ್ದಾರೆ. ಉಳಿದ ಐದು ಜನರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ಅವರು ತಿಳಿಸಿದ್ದಾರೆ.


























