ಉಡುಪಿ : ಅಬಕಾರಿ ಉಪಾಯುಕ್ತರ ಬಳಿ 8.69 ಕೋ. ರೂ. ಆಸ್ತಿ ಪತ್ತೆ

11 ಸೈಟ್‌, 6 ಮನೆ, 31 ಎಕರೆ ಕೃಷಿಭೂಮಿ ಸಂಪಾದಿಸಿದ್ದ ಉಪಾಯುಕ್ತ

ಉಡುಪಿ : ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಅಬಕಾರಿ ಉಪಆಯುಕ್ತ ಶ್ರೀನಿವಾಸ್ ಟಿ.ಎಂ. ಅವರಿಗೆ ಸಂಬಂಧಿಸಿದ 15 ವಿವಿಧ ಸ್ಥಳಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಸರಣಿ ದಾಳಿ ನಡೆಸಿದ್ದಾರೆ. ಮಾ.11 ಮತ್ತು 12ರಂದು ಬರೋಬ್ಬರಿ ಎರಡು ದಿನ ನಡೆಸಿದ ಈ ಕಾರ್ಯಾಚರಣೆಯಲ್ಲಿ ಒಟ್ಟು 8 ಕೋಟಿ 69 ಲಕ್ಷ ರೂಪಾಯಿ ಮೌಲ್ಯದ ಅಸಮತೋಲನ ಆಸ್ತಿ ಪತ್ತೆಯಾಗಿದೆ. ಲೋಕಾಯುಕ್ತ ಮಂಗಳೂರು ವಿಭಾಗದ ಎಸ್ಪಿ ದಿನೇಶ್ ಕುಮಾರ್ ನೇತೃತ್ವದಲ್ಲಿ ನಡೆದ ಈ ದಾಳಿಯಲ್ಲಿ ಶ್ರೀನಿವಾಸ್ ಟಿ. ಎಂ. ಅವರಿಗೆ ಸಂಬಂಧಿಸಿದ ಆಸ್ತಿಗಳನ್ನು ಪತ್ತೆ ಮಾಡಿದ್ದಾರೆ.

ಸ್ಥಿರ ಆಸ್ತಿಗಳು ಒಟ್ಟು 6,90,64,716 ರೂ. ಇದರಲ್ಲಿ ವಿವಿಧೆಡೆ 11 ನಿವೇಶನಗಳು ಇವೆ. 6 ಸುಸಜ್ಜಿತ ವಾಸದ ಮನೆಗಳು, 31 ಎಕರೆ ಕೃಷಿಭೂಮಿ ಇದೆ ಎಂದು ಹೇಳಲಾಗಿದೆ. ಚರಾಸ್ತಿಗಳು ಒಟ್ಟು 2,66,90,001 ರೂ. ಇದರಲ್ಲಿ 3,95,941 ನಗದು, 1.47 ಕೋಟಿ ರೂ. ಮೌಲ್ಯದ ಚಿನ್ನದ ಆಭರಣಗಳು, 17 ಲಕ್ಷ ರೂ. ಬೆಲೆಬಾಳುವ ಕಾರುಗಳು, 25.75 ಲಕ್ಷ ರೂ. ನಗದು ಠೇವಣಿ, 72.68 ಲಕ್ಷ ರೂ. ಮೌಲ್ಯದ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.

























































 
 

ಅಧಿಕಾರಿ ಶ್ರೀನಿವಾಸ್ ತಮ್ಮ ಆದಾಯದ ಮೂಲಕ್ಕಿಂತಲೂ ಹೆಚ್ಚಿನ ಆಸ್ತಿ ಹೊಂದಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಲೋಕಾಯುಕ್ತ ಪೊಲೀಸರು ಈ ದಾಳಿ ನಡೆಸಿದ್ದಾರೆ. ಮಂಗಳೂರು, ಉಡುಪಿ ಸೇರಿದಂತೆ ರಾಜ್ಯದ 15 ಕಡೆಗಳಲ್ಲಿ ಏಕಕಾಲಕ್ಕೆ ಎರಡು ದಿನಗಳ ಕಾಲ ಈ ಶೋಧ ಕಾರ್ಯ ನಡೆದಿದೆ. ಲೋಕಾಯುಕ್ತ ಪೊಲೀಸರು ಶ್ರೀನಿವಾಸ್ ಟಿ.ಎಂ. ಅವರ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ಈಗಾಗಲೇ ದಾಖಲಿಸಿಕೊಂಡಿದ್ದಾರೆ. ಮಾರ್ಚ್ 13ರ ಹೊತ್ತಿಗೆ ಅವರ ವಿರುದ್ಧ ಅಧಿಕೃತವಾಗಿ ತನಿಖೆ ಆರಂಭವಾಗಿದೆ.

ಸಾಮಾನ್ಯವಾಗಿ ಲೋಕಾಯುಕ್ತ ದಾಳಿಯಲ್ಲಿ ಇಷ್ಟು ದೊಡ್ಡ ಮಟ್ಟದ ಅಕ್ರಮ ಆಸ್ತಿ ಪತ್ತೆಯಾದಾಗ, ಸಂಬಂಧಪಟ್ಟ ಇಲಾಖೆಯು (ಅಬಕಾರಿ ಇಲಾಖೆ) ಲೋಕಾಯುಕ್ತ ವರದಿಯನ್ನು ಆಧರಿಸಿ ಅಧಿಕಾರಿಯನ್ನು ಅಮಾನತುಮಾಡುವುದು ವಾಡಿಕೆ. ಶ್ರೀನಿವಾಸ್ ಅವರ ವಿರುದ್ಧದ ತನಿಖೆ ಇನ್ನೂ ಪ್ರಾಥಮಿಕ ಹಂತದಲ್ಲಿದ್ದು, ಲೋಕಾಯುಕ್ತರು ಸರ್ಕಾರಕ್ಕೆ ನೀಡುವ ಪ್ರಾಥಮಿಕ ವರದಿಯ ಆಧಾರದ ಮೇಲೆ ಮುಂದಿನ ಒಂದೆರಡು ದಿನಗಳಲ್ಲಿ ಅಮಾನತು ಆದೇಶ ಹೊರಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಪ್ರಸ್ತುತ ದಾಳಿಯ ವೇಳೆ ಪತ್ತೆಯಾದ 31 ಎಕರೆ ಕೃಷಿ ಜಮೀನು, 6 ಮನೆಗಳು ಮತ್ತು 11 ನಿವೇಶನಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸುತ್ತಿದ್ದಾರೆ. ಈ ಆಸ್ತಿಗಳು ಅವರ ಮತ್ತು ಅವರ ಕುಟುಂಬದ ಹೆಸರಿನಲ್ಲಿ ಹೇಗೆ ಬಂತು ಎಂಬುದಕ್ಕೆ ಶ್ರೀನಿವಾಸ್ ಅವರಿಂದ ಸಮರ್ಥನೆ ಕೇಳಲಾಗುತ್ತದೆ.

error: Content is protected !!
Scroll to Top